ಮಂಗಳವಾರ, ಜೂನ್ 30, 2009

ಕಲ್ಪನಾ ಲಹರಿ ಏನಿರಬಹುದು?

Photo by Chandrashekara B.H. Oct 2008
ಈ ಚಿತ್ರಗಳನ್ನು ನೋಡಿದಾಗ ನಮ್ಮ ಓದುಗ ಮಿತ್ರರಿಗೆ ಏನೆಲ್ಲಾ ಚಿಂತನಾ ಲಹರಿ ಹರಿದುಬರಬಹುದು ಎಂದು ಯೋಚಿಸುತ್ತಾ ಒಂದೆರಡು ಚಿತ್ರಗಳನ್ನು ಇಲ್ಲಿ ಪೋಸ್ಟಿಸಿದ್ದೇನೆ. ಅನಿಸಿಕೆ, ಕವನ, ಲಘು ಲೇಖನಗಳ ನಿರೀಕ್ಷೆಯಲ್ಲಿ... Photo by Chandrashekara B.H. Oct 2008

ಸೋಮವಾರ, ಜೂನ್ 29, 2009

ಮಾತುಗಾರರು...

ಮಾತುಗಾರರನ್ನು ಅನೇಕರಾಗಿ ವಿಂಗಡಿಸಬಹುದು. ಕೆಲವರನ್ನು ಉತ್ತಮ ಮಾತುಗಾರರೆಂದರೆ, ಮತ್ತೆ ಕೆಲವರನ್ನು ವಾಚಾಳಿಗಳು ಎಂದೂ ಅನ್ನಬಹುದು. ಅವರ ಒಂದು ಪಟ್ಟಿಯನ್ನು ಹೀಗೆ ಮಾಡಬಹುದು.
ಕೆಲವು ಪ್ರಕಾರದ ಮಾತುಗಾರರನ್ನು ಈ ಪಟ್ಟಿಯಲ್ಲಿ ಸೇರಿಸಬಹುದು.

ಪ್ರಶಾಂತ, ನಿರಾಳ, ಸಮಚಿತ್ತ, ಪ್ರಸನ್ನ, ಸಮಾಧಾನಚಿತ್ತ, ಸಹನಶೀಲ, ಸಹೃದಯಿ, ವಿವೇಕವಂತ ಮಾತುಗಾರರು ಹಾಗೂ ದಿಟ್ಟೆದೆಯ, ಗಟ್ಟಿನುಡಿಗಳನ್ನಾಡುವ ಯಶಸ್ವೀ, ವಿಜಯದ ಮಾತುಗಾರರು...

ಇನ್ನೊಂದು ಪ್ರಕಾರದ ಮಾತುಗಾರರನ್ನು ಪಟ್ಟಿಮಾಡಲು ಹೋದರೆ ಅವರ ಪಟ್ಟಿ ಉದ್ದವಾಗುವುದು. ಅವರನ್ನೆಲ್ಲ ಹೀಗೆ ಹೆಸರಿಸಬಹುದು: ಬೇಸರ ಬರಿಸುವ, ಕೀಳುನುಡಿಗಳಾಡುವ, ರೇಗಿಸುವ, ಅಸಹ್ಯಕರ ನುಡಿಗಳಾಡುವ, ಚುಡಾಯಿಸುವ, ಅಕ್ಷೇಪಣೀಯ, ಹರಟೆ ಮಲ್ಲ, ಆಡಿದ್ದೇ ಆಡುವವ, ಜಿಗಟಿನ, ಒಗಟಿನ, ಪಟ್ಟುಬಿಡದ, ತಲೆತಿನ್ನುವ ಅಥವಾ ಕಚ್ಚಿಕೊಳ್ಳುವ, ಅವಿವೇಕಿ, ಆಶೆ ತೋರಿಸಿ ನಿರಾಶೆ ಮಾಡುವ ಅಥವಾ ವಂಚಕತನ ಮಾತುಗಾರ, ಹಿಂಸಿಸುವ/ ಹಿಂಸ್ರನುಡಿಗಳಾಡುವವ, ಕೊಂಕು ಅಥವಾ ವಕ್ರ ನುಡಿಗಳ, ಕುಟಿಲಬುದ್ಧಿಯ, ವಿಧ್ವಂಸಕ ನುಡಿಗಳನ್ನಾಡುವ, ಕಠಿಣ ನುಡಿಗಳಾಡುವ ಮಾತುಗಾರರು.
ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಕೇವಲ ಎರಡನೇ ಪಟ್ಟಿಯಲ್ಲಿರುವವರ ಸಂಖ್ಯೆಯೇ ಜಾಸ್ತಿಯೆನ್ನಬಹುದು. ಏಕೆಂದರೆ, ಯಾವುದೇ ಒಂದು ವಿಚಾರವನ್ನು ತೆಗೆದುಕೊಂಡರೂ ಇವರಲ್ಲಿ ಇಂತಹ ಗುಣಗಳ ಮಾತಾಡುವವರೇ ಕಾಣಬರುತ್ತಾರೆ. ಬಸ್ಸಿನಲ್ಲಿ, ಅಂಗಡಿಗಳಲ್ಲಿ, ತರಕಾರಿ ಮಾರುಕಟ್ಟೆಗಳಲ್ಲಿ... ಇನ್ನೂ ಇತರೆ ಸ್ಥಳಗಳಲ್ಲಿ ಇವರ ಸರದಿ ಜಾಸ್ತಿ.

ಉತ್ತಮ ಮಾತುಗಾರರು ಸಾಮಾನ್ಯವಾಗಿ ನೇಪಥ್ಯದಲ್ಲಿಯೇ ಇರುತ್ತಾರೆ. ಅಂತಹವರ ಸಂಖ್ಯೆ ಕಡಿಮೆಯೆಂದರೆ ಸೋಜಿಗವೇನಲ್ಲ.

ಇವರಲ್ಲಿ ನಾವು ಯಾರಾಗಬಹುದು ಎಂದು ನಮ್ಮಲ್ಲಿಯೇ ಪ್ರಶ್ನಿಸಿಕೊಳ್ಳುವುದಾದರೆ... ನಾವೇನಾಗಬಹುದು? ಅದಕ್ಕೆ, ಕೊನೆಯದಾಗಿ ಈ ಮಾತನ್ನು ನಾವು ಆಗಾಗ ಗಮನಿಸುತ್ತಿದ್ದರೆ... Talking should always be a pleasure to the speaker and listener, never a bore.

ಶನಿವಾರ, ಜೂನ್ 20, 2009

ಮಾತು ಮತ್ತು ಮೌನ

ಬಹದ್ದೂರ್‌ ಗಂಡು ಚಲನಚಿತ್ರದಲ್ಲಿ ಬರುವ ಈ ಹಾಡನ್ನು ಡಾ ರಾಜ್‌ ಕಂಠಸಿರಿಯಲ್ಲಿ ಕೇಳದವರಾರು?

ಮುತ್ತಿನಂಥ ಮಾತೊಂದು ಗೊತ್ತೇನಮ್ಮ
ನಿನಗೆ ಗೊತ್ತೇನಮ್ಮ,
ನಾವು ...

ಆದರೆ ಮೌನವೂ ಸಹ ಮಾತು ಎಂಬುದನ್ನು ಯಾರಾದರೂ ನಂಬುತ್ತಾರಾ?!!

ನನಗೊಂದು ವಿದ್ಯುನ್ಮಾನ ಅಂಚೆಯಲ್ಲಿ ಬಂದ ಚಿತ್ರದೊಡನೆ ಇದ್ದ ವಾಕ್ಯಗಳು (ಆಂಗ್ಲದಲ್ಲಿ: If you do not understand my silence, how can you understand my words?) ಹೀಗಿದ್ದವು. `ನನ್ನ ಮೌನವನ್ನೇ ಅರ್ಥಮಾಡಿಕೊಳ್ಳಲಾರದ ನೀನು, ನನ್ನ ನುಡಿಗಳನ್ನು ಹೇಗೆ ಅರ್ಥಮಾಡಿಕೊಳ್ಳುವೆ?' ಎಂದು ಒಬ್ಬ ಯುವತಿ ಮರವವೊಂದನ್ನು ಒರಗಿ ಕೇಳುತ್ತಾ ನಿಂತಿರುವ ಚಿತ್ರವಿತ್ತು.

There are three kinds of silence. Silence from words is good, because inordinate speaking tends to evil. Silence, or rest from desires and passions, is still better, because it promotes quietness of spirit. But the best of all is silence from unnecessary and wandering thoughts, because that is essential to internal recollection, and because it lays a foundation for a proper regulation and silence in other respects.- Madame Guyon.

ಶ್ರೀ ರಮಣ ಮಹರ್ಷಿಗಳ ಒಂದು ನುಡಿಮುತ್ತು ಹೀಗಿದೆ. `ಸೈಲೆನ್ಸ್ ಇಸ್ ದ ಬೆಸ್ಟ್ ಎಲಕ್ವೆನ್ಸ್' ಅಂತ (ಈ ವಾಕ್ಯವನ್ನು ಯಾವುದೋ ಒಂದು ಆಂಗ್ಲ ಲೇಖನದಲ್ಲಿ ಓದಿದ್ದ ನೆನಪಾಗಿ ಇಲ್ಲಿ ಬರೆದೆ).

ನುಡಿದರೆ ಮುತ್ತಿನ ಹಾರದಂತಿರಬೇಕು... ಎಂದೂ ವಚನಕಾರರು ಹೇಳಿದ್ದಾರೆ.

ವಿಶ್ವ ಧರ್ಮ ಸಮ್ಮೇಳನದಲ್ಲಿ ಶ್ರೀ ಸ್ವಾಮಿ ವಿವೇಕಾನಂದರಿಂದ ಹೊರಬಂದ ಆ ನುಡಿಗಳು ಎಂತಹ ಸಂಚಲನ ಮೂಡಿಸಿತ್ತು ಎಂದು ಎಲ್ಲರೂ ಬಲ್ಲವರೇ ಆಗಿದ್ದೇವೆ.

ಪ್ರತಿಯೊಬ್ಬ ವ್ಯಕ್ತಿಯ ಮಾತಿಗೂ ಬೆಲೆ/ಗೌರವ ಬರುವುದು ಹೀಗೆಯೇ ಅಲ್ಲವೆ? ಇಲ್ಲಿ ಬೆಲೆ ಎಂದರೆ ಹಣದ ರೂಪ ಎಂದು ತಿಳಿಯಬಾರದು. ಒಂದು ಪ್ರಭಾವೀ ವ್ಯಕ್ತಿತ್ವದ ಅನುಭಾವ ಎಂದು ಅರಿಯಬೇಕು.
ನಿಮ್ಮ ಮಾತಿಗೂ ಬೆಲೆಯಿದೆ. ಉದಾಹರಣೆ ಬೇಕೆ? ಅದೇ ಇದೀಗ ವಿಶ್ವದೆಲ್ಲ ಜನರ ನಡುವೆ ಸಂಪರ್ಕವೇರ್ಪಡಿಸುವ, ಇಡೀ ವಿಶ್ವವನ್ನೇ ಅಂಗೈಯಗಲದ ದರ್ಪಣದಲ್ಲಿ ತೋರಿಸಬಲ್ಲ, ಕೇಳಿಸಬಲ್ಲ, ಸಾಧನ - ಮೊಬೈಲ್‌ ಎಂಬುದು. ನೀವು ಮಾತಾಡಿದಂತೆ ನಿಮ್ಮ ಮಾತಿಗೆ ಬೆಲೆ ಕಟ್ಟಿ ಸಂಪರ್ಕದಾರರು ಇಂತಿಷ್ಟು ಹಣವಾಯಿತೆಂದು ಅಲ್ಲಿಯೇ, ಆ ಕ್ಷಣವೇ ತೋರಿಸುವುದಿಲ್ಲವೇ? ಅದಕ್ಕೇ ನಿಮ್ಮ ಮಾತಿಗೂ ಬೆಲೆಯಿದೆ ಎಂದದ್ದು. ಹಾಗೂ ಕಂಪನಿಗೆ ನಿಮ್ಮ ಮಾತಿನಿಂದ ದುಡ್ದು ಸೇರುತ್ತಿರುವುದು.

ಮಾತೇ ಮುತ್ತು, ಮಾತೇ ಮೃತ್ಯು ಎಂಬ ನಾಣ್ಣುಡಿಯೂ ಇದೆ.

ಮಾತೇ ಮುತ್ತು,
ಕೆಲವೊಮ್ಮೆ ಅಥವಾ ಸಾಮಾನ್ಯವಾಗಿ ಜನರು ಬೆಣ್ಣೆ ಹಚ್ಚಿ ಮಾತಾಡುತ್ತಾರೆ. ಇಲ್ಲಿ ಬೆಣ್ಣೆಗೆ ಬೆಲೆ ಕಟ್ಟಬೇಕೆ? ಬೇಡವೇ? ಎಂಬ ಜಿಜ್ಞಾಸೆ ಇದ್ದರೆ ಬೆಲೆ ನೀವಾಗಲೇ ಒಂದಲ್ಲಾ ಒಂದು ರೂಪದಲ್ಲಿ ಕಟ್ಟಿಕೊಟ್ಟಿರುತ್ತೀರಿ. ಪರವೂರಿನಲ್ಲಿ ಇಂತಹ ಅನುಭವಗಳು ಒಬ್ಬರಲ್ಲಾ ಒಬ್ಬರಿಗೆ ಆಗಿರುವಂತಹುದೇ! ಸಾರ್‌/ಅಣ್ಣ/ಅಕ್ಕ, ನಮ್ಮದು ಇಂಥ ಊರು, ನಿನ್ನೆ ರೈಲಿನಲ್ಲಿ/ಬಸ್ಸಿನಲ್ಲಿ ಬರುವಾಗ ಹಣ, ಬಟ್ಟೆ ಎಲ್ಲ ಕಳವಾಯಿತು. ಊರಿಗೆ ಹೋಗಲು ಹಣ ಸ್ವಲ್ಪ ಕಡಿಮೆ ಇದೆ. ಪ್ಲೀಸ್‌ ನೀವು ಒಂದಿಷ್ಟು ಸಹಾಯ... ಎಂದಾಗ ಹೆಮ್ಮೆಯಿಂದ ಉಪಕರಿಸಲು ಹೋಗಿ ಅಪಕರಿಸಿಕೊಂಡವರೇ ಇದ್ದರೂ ಅಚ್ದರಿಯಿಲ್ಲ. ಇಲ್ಲಿ ಅವನ ಬೇಡುವ ಮಾತಿಗೆ ಮರುಳಾಗಿ, ಕನಿಕರಿಸಿ ಹಣ ಕಳೆದುಕೊಂಡವರೂ ಕಡಮೆಯೇನಿಲ್ಲ. ಇಲ್ಲಿ ಅವನ ಮಾತಿಗೆ ಬೆಲೆ ಸಿಕ್ಕದೆ. ನಿಮ್ಮ ಮೌನಕ್ಕೆ ನಷ್ಟವಾಗಿದೆ ಎಂದೂ ತಿಳಿಯಬಹುದು.

ಮಾತಾಡುವುದಿದ್ದರೂ ತೂಕವರಿತು, ಇತರರಿಗೆ ಬೇಸರವಾಗದಂತೆ, ಅರ್ಥವಾಗುವಂತೆ, ಮನನೋಯಿಸದಂತೆ, ಸ್ಪಷ್ಟವಾಗಿ ಆಡಬೇಕು.

ಮಾತೇ ಮೃತ್ಯು

ಇದೊಂದು ವಿಧವಾದರೆ, ಇಂದೇನಾಗಿದೆ? ಮಾತಾಡಿದರೆ ಹೊಡಿ ಬಡಿ ಕಡಿ ಎಂಬಂತಾಗಿದೆಯಲ್ಲ. ಇಬ್ಬರ ಜಗಳದ ನಡುವೆ ಸಂಧಾನವೆಂಬ ಮಾತಿಗೆ ಹೋದವರೆದೆಷ್ಟೋ ಮಂದಿ ಹೊಡೆತ ಅಥವಾ ಪ್ರಾಣವನ್ನೇ ಕಳೆದುಕೊಂಡ ಪ್ರಸಂಗಗಳು ಪ್ರತಿನಿತ್ಯ ಒಂದಲ್ಲಾ ಒಂದು ದಿನಪತ್ರಿಕೆಯಲ್ಲಿ ಓದುತ್ತಿರುತ್ತೇವೆ. ಇಲ್ಲಿ ಮಾತಿಗೆ ಪ್ರಾಣದ ಬೆಲೆಯೇ ತೆತ್ತಾಗಿದೆ.

'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಗಾದೆಯೇ ಇದೆ.

`ಬಂಗಾರದ ಮನುಷ್ಯ' ಚಲನಚಿತ್ರದ ಕೊನೆಯ ದೃಶ್ಯದಲ್ಲಿ ರಾಜೀವ (ಡಾ ರಾಜ್) ಊಟಕ್ಕೆ ಕುಳಿತಿರುವಾಗ ಕೇಶವ (ವಜ್ರಮುನಿ) ಆಡುವ ಮಾತುಗಳು ಎಂತಹ ಪ್ರಭಾವ ಬೀರಿದೆ. ಆ ಕೊನೆಯ ದೃಶ್ಯ ಯಾರಿಗೇ ಆಗಲೀ ಒಮ್ಮೆ ಛಳಕು ಹುಟ್ಟಿಸದಿರದು. ಅದರಿಂದಾಗುವ ಪರಿಣಾಮಗಳು ಆತಂಕಕಾರಿಯಾಗಿರುತ್ತವೆ ಎಂದರೆ ತಪ್ಪಾಗದು.

ಅದಕ್ಕಿಂತ ಈ ನಾಣ್ಣುಡಿ: "ಮಾತು ಬೆಳ್ಳಿ, ಮೌನ ಬಂಗಾರ" ಇದನ್ನು ಸಂದರ್ಭಾನುಸಾರಕ್ಕೆ ಉಪಯೋಗಿಸಿಕೊಂಡರೆ ಒಳಿತಲ್ಲವೆ? ನೀವೇನಂತೀರಿ?

ಮಂಗಳವಾರ, ಜೂನ್ 16, 2009

ಮುಗಿಲ ಮೋಡದಂತೆ...

ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿನ್ನೆಲೆಯಲ್ಲಿ ಅಥವಾ ಬೆನ್ನೆಲುಬಾಗಿ ಒಬ್ಬರಲ್ಲಾ ಒಬ್ಬರ ಪ್ರಭಾವ, ಆಸರೆ, ಆಕಾಂಕ್ಷೆ ಇವೆಲ್ಲ ಇರುತ್ತವೆ. ಹಾಗೆಯೇ ಸುಖದ ಹಿಂದೆ ದು:ಖವೂ, ದು:ಖದ ಹಿಂದೆ ಸುಖವೂ ಇರುವುದನ್ನು ಪ್ರತಿಯೊಬ್ಬರೂ ತಮಗಾದ ಅನುಭವಗಳಿಂದ ತಿಳಿದಿರುತ್ತಾರೆ. ಪ್ರತಿ ಬಾರಿಯೂ ಯಶಸ್ಸು ಒಬ್ಬನಿಗೇ ಸಲ್ಲುವುದಿಲ್ಲ ಅಥವಾ ಅವನೊಬ್ಬನ ಸ್ವತ್ತೇ ಆಗಿರುವುದಿಲ್ಲ. ಯಶಸ್ಸು ಒಬ್ಬರಿಂದ ಒಬ್ಬರಿಗೆ ಆಗಾಗ ವರ್ಗಾವಣೆಯಾಗುತ್ತಲೇ ಇರುತ್ತದೆ, ಹಾಗೆಯೇ ಇರಬೇಕು ಎಂಬ ನಿಯಮ ಇರಲೂ ಬಹುದು, ಇಲ್ಲದಿರಲೂ ಬಹುದು. ಕಷ್ಟನಷ್ಟ, ಸುಖದು:ಖಗಳೂ ಪ್ರತಿಯೊಬ್ಬನಿಗೂ ಇದ್ದೇ ಇರುತ್ತದೆ. ಅದೊಂದು ರೀತಿಯ ಚಿಂತೆಯಿದ್ದಂತೆ. ಇದ್ದರೂ ಚಿಂತೆ, ಇರದಿದ್ದರೂ ಚಿಂತೆ, 'ಚಿಂತೆ' ಎಂಬ ಪದದ ನಡುವಿನಲ್ಲಿರುವ ಶೂನ್ಯದ ಸೂಚಕವೇ `ಚಿತೆ' ಯ ಕಡೆಗೆ ಸಾಗುವುದಾಗಿದೆ. ಇಲ್ಲಿ ಅತಿಯಾದ ಚಿಂತೆಯು ಚಿತೆಯಾಗಬಲ್ಲುದು ಎಂಬುದಷ್ಟೇ ಆಗಿದೆ.
ಸುಖ ದು:ಖಗಳೆರಡೂ ಮುಗಿಲ ಮೋಡದಂತೆ. ಅವು ಆದಷ್ಟೂ ಬೇಗನೇ ಆಗಾಗ ಕರಗುತ್ತಲೇ ಇರುತ್ತಾ ಮತ್ತೆ ಮೋಡ ಕಟ್ಟುತ್ತಾ ಗಾಳಿ ಬಂದಂತೆ ಚದುರುತ್ತಾ, ಮಳೆ ಹನಿಸುತ್ತಾ ಮರೆಯಾಗುತ್ತಲೇ ಇರುತ್ತವೆ. ಸೋಲು, ಗೆಲುವು ಅಥವಾ ಗೆಲುವು, ಸೋಲು ನಾಣ್ಯಕ್ಕಿರುವ ಎರಡು ಮುಖದಂತೆ ಎಂಬುದನ್ನು ಕೆಲವರು ಹೀಗೂ ಹೇಳಿದ್ದಾರೆ. ಇವುಗಳನ್ನು ನಾವು ಅರ್ಥೈಸಿಕೊಳ್ಳುವದರಲ್ಲಿ ಬೆರೆತಿರುತ್ತದೆ.
Happiness is like a cloud, if you stare at it long enough, it evaporates. SArah McLachlan
Behind every cloud is another cloud. Judy Garland
ಪ್ರತಿಯೊಂದು ಮೋಡದ ಅಂಚಿಗೆ ಬೆಳ್ಳಿಯ ಗೆರೆಯಿರುತ್ತದೆ. Every cloud has its silver lining but it is sometimes a little difficult to get it to the mint. says Don Marquis ಇದನ್ನು ಬದುಕಿಗೂ ಅಳವಡಿಸಿಕೊಳ್ಳಬಹುದು.

ಬಾಲ್ಯ, ಯೌವನ, ವೃದ್ಧಾಪ್ಯದಂತೆ ಪ್ರಕೃತಿಯಲ್ಲಿಯೂ ಸಹ ಬದಲಾವಣೆಗಳಿರುತ್ತವೆ. ಅಂತೆಯೇ ಮನುಷ್ಯನ ಬದುಕಿನಲ್ಲಿಯೂ ಸಹ. ಅದನ್ನೇ Nature is a mutable cloud which is always and never the same.- Ralph Waldo Emerson ರವರು ಹೇಳುತ್ತಾರೆ.

ಕೆಲವೊಮ್ಮೆ ಬದುಕಿನಲ್ಲಿ ಎಂತಹ ಪರಿಸ್ಥಿಯಿರುತ್ತದೆಂದರೆ, ಕೆಲವೊಂದು ಸಮಸ್ಯೆಗಳಿಂದ, ದು:ಖಗಳಿಂದ ಹೊರಬರಲು ದಾರಿಯೇ ಇಲ್ಲದ ಕಾರ್ಗತ್ತಲ ಗವಿಯಲ್ಲಿರುವಂತೆ ಆಗುತ್ತದೆ. ಆದರೆ ಅವೆಲ್ಲವುಗಳಿಂದ ಹೊರಬರುವ ದಾರಿಯು ಸಣ್ಣ ಬೆಳಕಿಂಡಿಯನ್ನು ಹೊಂದಿಯೇ ಇರುತ್ತದೆ ಎಂದರೆ ತಪ್ಪಾಗದು. ಅದರಂತೆಯೇ There's a bright spot in every dark cloud.- Bruce Beresford ಇವರ ಮಾತನ್ನು ಹೀಗೂ ನೆನಪಿಡಬಹುದಲ್ಲವೆ?

ಆ ಒಂದು ಬೆಳಕಿನ ಕಿರಣಕ್ಕಾಗಿ ನಾವು ನಮ್ಮ ಕಣ್ಗಳನ್ನು ತೆರೆದಿಡುವ.. ಹೀಗಿರುವಾಗ ನಾವು `ಬೆಳ್ಳಿ ಮೋಡದ ಅಂಚಿನಿಂದ ಮೂಡಿ ಬಂದಾ ಆಶಾಕಿರಣ...' ಎಂದು ಹಾಡಬಾರದೆ? ನೀವೇನಂತೀರಿ?

ಫೋಟೋಗಳು: ಚಂದ್ರಶೇಖರ ಬಿ.ಎಚ್. ಮೇ / ಜೂನ್ ೨೦೦೯

ಬುಧವಾರ, ಜೂನ್ 10, 2009

ಬದುಕು ವಿಚಿತ್ರ- ೨

ಇಲ್ಲಿಯವರೆಗೆ...

ಸದ್ಯಕ್ಕೆ ಒಂದು ದಾರಿ ಕಂಡಿದೆ. ಅದನ್ನೇ ಉಪಯೋಗಿಸೋದು ಅಂತ ನಿರ್ಧರಿಸಿದ್ದಾಳೆ.

ಹೌದು. ಇಷ್ಟುದಿನ ಇವನಿಗಾಗಿ, ಇವನ ಭವಿಷ್ಯಕ್ಕಾಗಿ ದುಡಿದಿದ್ದು ಮತ್ತು ಸಾಲ ಮಾಡಿದ್ದೂ ಸಾಕು. ಅವಮಾನಗಳನ್ನು ಸಹಿಸಿದ್ದೂ ಸಾಕು. ಮನೆ ಬಿಟ್ಟು ಹೋಗುವುದೇ ಸರಿ ಎಂದು ನಿರ್ಧರಿಸಿದ್ದಾಗಿದೆ. ಅದರಂತೆಯೇ ನಡೆದುಕೊಳ್ಳುವೆನು.

ಎಷ್ಟು ಮನೆಗಳನ್ನು ಬದಲಾಯಿಸಿದ್ದಾಗಿದೆ? ಈಗೇನಿದ್ದರೂ ಇವನೇ ಮನೆ ಬಿಟ್ಟು ಹೋಗುವುದು ಸರಿಯೆನಿಸಿದೆ. ಏಕೆಂದರೆ, ಇನ್ನು ಮನೆ ಹುಡುಕುವ, ಬಾಡಿಗೆ ಕೊಡುವ, ಅವಮಾನ ಸಹಿಸುವ ಶಕ್ತಿಯಿಲ್ಲ.

ಹೀಗೆಂದೇ ನಿರ್ಧರಿಸಿ, ಕರುಳ ಸಂಬಂಧವನ್ನು ಕಡಿದುಕೊಂಡಿದ್ದಾಳೆ. ಇನ್ನು ಅವನು ಸ್ವತಂತ್ರಹಕ್ಕಿಯಾಗಿ ಎಲ್ಲಾದರೂ ಇರಲಿ, ಹೇಗಾದರೂ ಇರಲಿ ಅವನಿಂದ ಕಾಟ ಸಹಿಸಲಾರೆ ಎಂದು ಗೋಳುತೋಡಿಕೊಂಡಾಗ... ಸಮಾಧಾನ ಮಾಡುವ ಪರಿ ತೋಚಲಿಲ್ಲ.
ಇವನ ಈ ಆಟೋಟಗಳಿಂದಾಗಿ ಒಡಹುಟ್ಟಿದವರು, ನೆಂಟರು, ಮಿತ್ರರನ್ನೆಲ್ಲ ಕಳೆದುಕೊಂಡೆ. ಆದರೆ, ಆ ಕಣ್ಣಿಗೆ ಕಾಣದ ದೇವರ ದಯೆಯಿಂದ ಇನ್ನೂ ಇದ್ದೇನೆ, ಎಂದು ಹೇಳುವಾಗ ಹೇಗೆ ಸಮಾಧಾನಪಡಿಸಿಲಿ ಎಂದೇ ತಿಳಿಯದಾಯಿತು.

ಇದೀಗ ಅವನು ಮನೆ ಬಿಟ್ಟಿದ್ದಾನೆ, ಅಲ್ಲಲ್ಲ ಮನೆಯಿಂದ ಅವನನ್ನು ಹೊರಹಾಕಿದ್ದಾಳೆ. ಅಮ್ಮ ಮನೆಯಿಂದ ಮಾತ್ರವಲ್ಲದೆ ಮನಸ್ಸಿನಿಂದಲೂ ದೂರಮಾಡಿಕೊಂಡಿದ್ದಾಳೆ.

----------ಸದ್ಯಕ್ಕೆ ಇಲ್ಲಿಯವರೆಗೆ ತಿಳಿಯಿತು. ಮುಂದಿನದು ಏನೆಂದು ತಿಳಿದಿಲ್ಲ... ----------------

ಮಂಗಳವಾರ, ಜೂನ್ 9, 2009

ಬದುಕು ವಿಚಿತ್ರ-1

ಇದೀಗ ಇವನಿಗೆ ಸುಮಾರು ೨೨-೨೩ ರ ಪ್ರಾಯ. ಸುಂದರವಾಗಿದ್ದಾನೆ. ಕಣ್ಣುಗಳಲ್ಲಿ ಅದೆಂತಹ ಹೊಳಪಿತ್ತು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ. ಬುದ್ಧಿವಂತ ಎಂದು ಅವನಿಗೆ ಡಬಲ್ ಪ್ರೊಮೋಷನ್‌ ಸಿಕ್ಕಿ ಮೇಲಿನ ತರಗತಿಯಲ್ಲಿದ್ದ. ಶಾಲೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಬಹುಮಾನ ಪಡೆದು ಬರುತ್ತಿದ್ದ.

ಅದ್ಯಾವಾಗ ದೂರದ ಶಾಲೆಗೆ, ಉತ್ತಮವಾದ ಶಾಲೆಗೆ ಸೇರಿದನೋ ಅವನಲ್ಲಿದ್ದ ಆ ಸಗುಣಗಳೆಲ್ಲ ಎಲ್ಲಿ ಮಾಯವಾಯಿತೋ? ಏನಾಗಿದೆ ಇವನಿಗೆ?

ಶಾಲೆ ೧೦ನೇ ತರಗತಿ ಮುಗಿಸಿರಬೇಕು! ಕೆಲಸ ನನಗೆ ಒಗ್ಗುವುದಿಲ್ಲ ಎಂದು ಮೊಂಡು ಬಿದ್ದಿದ್ದಾನೆ.

ಯಾವ ಕಷ್ಟಗಳನ್ನೂ ನೀಡದೆ ಇವನನ್ನು ಬೆಳೆಸಿದ್ದಾಳೆ, ಇವನ ಅಮ್ಮ. ತನಗಾಗಿ ಏನೆಲ್ಲ ಮಾಡಿದ್ದಾಳೆ. ಅವಮಾನ, ಅಸಹಾಯಕತೆ ಇವೆಲ್ಲವನ್ನೂ ಮೆಟ್ಟಿ ನಿಂತಿದ್ದಾಳೆ. ಅವನಿಗೆ ಉಸಿರಾಟದ ತೊಂದರೆಯಿದ್ದಾಗ ಔಷಧಿ, ಡಾಕ್ಟ್ರು ಎಂದೆಲ್ಲಾ ಅದೆಷ್ಟು ದುಡಿದ ಹಣವನ್ನೆಲ್ಲಾ ಸುರಿದಿದ್ದಾಳೆ. ಅವನ ಓದಿಗಾಗಿ, ಅವನ ಭವಿಷ್ಯಕ್ಕಾಗಿ ಅದೆಷ್ಟೇ ಕಷ್ಟವಿದ್ದರೂ ಅವನಿಗಾಗಿ ತನ್ನ ಜೀವವನ್ನೇ ತೇಯ್ದಿದ್ದಾಳೆ.

ಅವನ ಪ್ರತಿಯೊಂದು ಹುಟ್ಟುಹಬ್ಬದಂದೂ ಉಡುಗೊರೆ ಕೊಡಿಸಿದ್ದಾಳೆ. ಫೋಟೋ ತೆಗೆಸಿದ್ದಾಳೆ. ನಟನೆ ಕಲಿಯುತ್ತೇನೆಂದಾಗ ತಾನೇ ಮುಂದೆ ನಿಂತು ಅವನಿಗೆ ಫೋಟೋ ಸೆಷನ್‌ಗಾಗಿ ವಿವಿಧ ಡ್ರೆಸ್‌ಗಳನ್ನು ಕೊಡಿಸಿದ್ದಾಳೆ. ಆದರೆ ಅವಳು ತನಗೇನೂ ಮಾಡಿಲ್ಲ, ಕೂಡಿಟ್ಟಿಲ್ಲ ಎಂಬ ಹುಂಬತನ ಇವನದ್ದು. ತನಗಾಗಿ ಅವಳು ಏನೇನೂ ಮಾಡಿಲ್ಲ ತನಗೆ ಎಂದೇ ವಾದಿಸುತ್ತಿದ್ದಾನೆ.
ಉತ್ತಮ ಮಕ್ಕಳ ಜೊತೆ ಬೆರೆಯಲಿ ಎಂದು ಅದೆಷ್ಟು ಮನೆಗಳನ್ನು ಬದಲಾಯಿಸಿದಳೋ, ಅದೆಷ್ಟು ಕಷ್ಟಪಟ್ಟಳೋ ಆ ದೇವರೇ ಬಲ್ಲ.

ಇತ್ತೀಚೆಗಂತೂ ಇವನ ಕಾಟ ತಾಳಲಾರದಷ್ಟಾಗಿದೆ. ಕಾರಣ ಹಣ, ಹಣ.

ದುಡಿದಿದ್ದರಲ್ಲಿ ಅರ್ಧಭಾಗ ಇವನ ಖರ್ಚಿಗೆ. ಇನ್ನೊಂದು ವರ್ಷ ಸರಿಯಾಗಿ ಕಂಪ್ಯೂಟರ್‍ ಟ್ರೈನಿಂಗ್‌ ಹೋಗಿದ್ದರೆ, ಅವನಿಗೆ ಸಂಪಾದನೆಯೂ ಆಗುತ್ತಿತ್ತು. ಆದರೆ, ಇವನಿಗೆ ಅವೆಲ್ಲ ಬೇಕಿಲ್ಲ. ಹೇಗಿದ್ದರೂ ಅಮ್ಮ ತಂದು ಹಾಕುತ್ತಾಳೆ. ಮೂರು ಮನೆಗೆ ಕೇಳುವಷ್ಟು ಗಲಾಟೆ ಮಾಡಿದರೆ ಸಾಕು ಹಣ ಕೊಡುತ್ತಾಳೆ ಎಂಬ ದು(ದೂ)ರಾಲೋಚನೆಯ ಸುಳಿಯಲ್ಲಿ ಸಿಲುಕಿಸಿ, ಅವಳು ದಿನದಿನವೂ ಕೊರಗುವಂತೆ ಮಾಡಿದ್ದಾನೆ, ಮಾಡುತ್ತಿದ್ದಾನೆ.

ಇವನ ಕಾಟ ತಾಳಲಾರದೆ ಇವಳೇ ಮನೆ ತೊರೆದದ್ದೂ ಆಗಿತ್ತು. ಮತ್ತೆ ಮಮಕಾರದಿಂದ ಮಗನ ಜೊತೆಗೆ ಬಾಳುವ, ಹೊಸ ಬೆಳಕು ಕಾಣುವ ಆಸೆ, ಮಮತೆ ಒಂದಾಗುವಂತೆ ಮಾಡಿತು.

ಆಗೆಲ್ಲ ಅವಳು ಪಟ್ಟ ಕಷ್ಟವೆಷ್ಟು? ತನ್ನ ಮನದ, ಮನೆಯ ನೋವು ಯಾರಿಗೂ ತಿಳಿಯದಿರಲಿ ಎಂದು ತನ್ನ ಪರಿಚಿತರೆಲ್ಲರಿಂದ ದೂರವಿದ್ದದ್ದೂ ಇದೆ. ಆದರೆ ಇವನಿಗೆ ಅವೆಲ್ಲ ಬೇಕಿಲ್ಲ. `ಹಣ' ಒಂದಿದ್ದರೆ ಸಾಕು. ಅದೇನು ಮಾಡುತ್ತಾನೋ ಆ ದುಡ್ಡನ್ನೆಲ್ಲ ತಿಳಿಯದು. ಮಗ ಹಸಿವಿನಿಂದ ಬಳಲಬಾರದು ಎಂದು ಕೊಟ್ಟ ದುಡ್ಡೇ ಇಂದು ಅಮ್ಮನಿಗೆ ಶತ್ರುವಾಗುತ್ತಿದೆಯೇ?
ಮೊನ್ನೆಯಂತೂ ಇದೇ ನೆವದಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದ. ಕೆಟ್ಟದಾಗಿ ನಡೆದುಕೊಂಡಿದ್ದ. ಅಕ್ಕಪಕ್ಕದವರೆಲ್ಲರ ಎದುರೇ ಬೈಯತೊಡಗಿದ್ದ. ಅಷ್ಟೇ ಆಗಿದ್ದರೆ... ಆದರೆ ಇಂದು ಆಗಿದ್ದೇ ಬೇರೆ. ಅಮ್ಮನನ್ನೇ ಹೊಡೆಯಲು ಮುಂದಾಗಿದ್ದ.

ಇವನ್ನೆಲ್ಲ ಇನ್ನೆಷ್ಟು ದಿನ ಅಂತ ಸಹಿಸುವುದು?

ಸದ್ಯಕ್ಕೆ ಒಂದು ದಾರಿ ಕಂಡಿದೆ. ಅದನ್ನೇ ಉಪಯೋಗಿಸೋದು ಅಂತ ನಿರ್ಧರಿಸಿದ್ದಾಳೆ.
(ಮುಂದುವರೆಯುವುದು)

ಶನಿವಾರ, ಜೂನ್ 6, 2009

ಬಣ್ಣಾ, ನನ್ನ ಒಲವಿನ ಬಣ್ಣಾ...

Phot: Chandrashekara B.H. June 4 2009 at ISEC
Phot: Chandrashekara B.H. June 4 2009 at ISEC

ಏಳು ಸ್ವರವು ಸೇರಿ ಸಂಗೀತವಾಯಿತು,
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು


ಮಿಲನ ಚಿತ್ರದ ಹಾಡು:
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ....
ಆದರೆ ಇಲ್ಲಿ ಮಳೆ ನಿಂತು ಹೋದ ಮೇಲೆ ರೈನ್‌ಬೋ ಒಂದು ಕಂಡಿದೆ.

ಹೌದು, ಮೊನ್ನೆ ಸಂಜೆ (೪.೬.೨೦೦೯) ಮಳೆ ನಿಂತ ಮೇಲೆ ಮೂಡಿಬಂದ ಕಾಮನಬಿಲ್ಲನ್ನು ಕಂಡು ಮನಸ್ಸು ಖುಷಿಯಾಯಿತು. ಜೊತೆಗೆ, ಸಂಜೆಯ ಸೂರ್ಯಾಸ್ತದ ವೇಳೆ ಬಾನಿನಲ್ಲಿ ರಂಗಿನೋಕುಳಿ ನಡೆದಿತ್ತು. ಚಂದಿರ ಮೋಡದ ಮರೆಯಲ್ಲಿ ಆಗಾಗ ಇಣುಕುತ್ತಿದ್ದ. ಆಗೆಲ್ಲ ಬಂದ ಯೋಚನೆಯ ಹರಿವನ್ನು ಇಲ್ಲಿ ಹೀಗೆ ಹರಿಸಲು ಪ್ರಯತ್ನಿಸಿದ್ದೇನೆ.

ಜೀವನದಲ್ಲಿ ಕನಸು ಕಾಣದವರಾರು? ವಯೋಮಾನದ ಹಿಂಜರಿತವಿಲ್ಲದೇ ಎಲ್ಲರೂ ಕನಸನ್ನು ಕಾಣುತ್ತಾರೆ. ಕಾಣಲೇಬೇಕು. ಇಲ್ಲವಾದರೆ ಬದುಕಿನ ಬಂಡಿಯ ಚಕ್ರದ ಕಡಾಣಿ ಕಳೆದಂತೆ ಆಗುತ್ತದೆ.

ಕನಸು ಕಾಣಲು ಕಾಸು ಕೊಡಬೇಕೆ? ಬದುಕಿನಲ್ಲಿ ಏನೆಲ್ಲಾ ಆಶಯಗಳನ್ನು ಇಟ್ಟುಕೊಳ್ಳಬೇಕೆಂದರೆ... ಅದನ್ನೇ ಕೆಲವಾರು ಸಾಹಿತಿಗಳು ಹೀಗೆ ಹೇಳುತ್ತಾರೆ.
When you reduce life to black and white, you never see rainbows. Rachel Houston


“After fifteen minutes nobody looks at a rainbow” - Johann Wolfgang von Goethe

"Sunshine is delicious, rain is refreshing, wind braces us up, snow is exhilarating; there is really no such thing as bad weather, only different kinds of good weather." -John Ruskin ಜಾನ್‌ ರಸ್ಕಿನ್‌ ರ ಈ ಮಾತನ್ನು ಗಮನದಿಂದ ಓದಿದರೆ, "ಪ್ರಕೃತಿಯಲ್ಲಿ ವಾತಾವರಣದಂತೆಯೇ ಮನುಷ್ಯನ ಬದುಕಿನಲ್ಲಿಯೂ ಬದಲಾವಣೆಗಳು ಸಹಜ" ಎಂದನಿಸದೇ ಇರದು.

ಥಳುಕು ಬಳುಕಿನ ಬದುಕಿನಲ್ಲಿಯೂ ಸಹ ಜನರ ಏಳಿಗೆ, ಬೀಳಿಗೆ ಒಂದೆರಡು ಕ್ಷಣಗಳು ಸಮಾಜದಲ್ಲಿ ಸ್ಪಂದಿಸಿ ಎಲ್ಲವನ್ನೂ ಮರೆಯುತ್ತಾರೆ ಪ್ರತಿಯೊಬ್ಬ ಮಾನವನೂ ಅತ್ತ ಲಕ್ಷ್ಯವಿಡುವುದಿಲ್ಲೆಂಬುದನ್ನು ಹೋಲಿಸಿಕೊಳ್ಳಬಹುದು ಅಲ್ವೆ?

ಜೀವನ ಸಂಘರ್ಷದಲ್ಲಿ ಮನುಷ್ಯನು ಸುಖದು:ಖವೇನೇ ಬರಲಿ ಜಿ.ಕೆ. ಚೆಸ್ಟರಟನ್‌ ಅವರ ಈ ಮಾತನ್ನು ನೆನಪಿನಲ್ಲಿಟ್ಟುಕೊಂಡರೆ ಬದುಕು ರೋಚಕಗಳ ಸಂಗಮವಲ್ಲವೇ? "And when it rains on your parade, look up rather than down. Without the rain, there would be no rainbow." - G. K. ಚೆಸ್ತೆರ್ತೋನ್
ಸಮಯವಿದ್ದರೆ, ನಿಮಗಿಷ್ಟವಾದರೆ,ಕಾಮೆಂಟ್ ಬಾಕ್ಸಿನಲ್ಲಿ ಬಣ್ಣಿಸಿರಿ ಎಂದು ವಿನಂತಿಸಿಕೊಳ್ಳುತ್ತೇನೆ.
ಸಸ್ನೇಹಗಳೊಂದಿಗೆ,

ಗುರುವಾರ, ಜೂನ್ 4, 2009

ಪರಿಸರ ದಿನಾಚರಣೆ... ಎಂದರೆ??

Photo by Chandrashekara B.H. March2009ನಾಳೆ ಜೂನ್‍ = ಪರಿಸರ ದಿನಾಚರಣೆ
ಪರಿಸರ ದಿನಾಚರಣೆ... ಎಂದರೆ??

  • ಆ ಒಂದು ದಿನ ಗಿಡ ನೆಟ್ಟು, ನೀರುಣಿಸಿ, ಫೋಟೋ ತೆಗೆಸಿಕೊಳ್ಳುವುದೆ?
  • ಆ ಒಂದು ದಿನ ಸುತ್ತಮುತ್ತಲು ಬಿದ್ದಿರಬಹುದಾದ ಪ್ಲಾಸ್ಟಿಕ್‍ ದೂರ ಹಾಕುವುದೆ?
  • ಆ ಒಂದು ದಿನ ಎಲ್ಲೆಲ್ಲೂ, ಎಲ್ಲರಿಗೂ ಸಸಿಗಳನ್ನು ಹಂಚುವುದೆ?
  • ಆ ಒಂದು ದಿನ ಸಸಿ ನೆಡುವ ಕಾರ್ಯಕ್ರಮಕ್ಕೆಲ್ಲ ಹಾಜರಾಗುವುದೆ?
  • ಇಷ್ಟೇನಾ ಪರಿಸರ ದಿನಾಚರಣೆಯ ಮಹತ್ವ?!

ಇಲ್ಲ. ಇಲ್ಲಾ... ಇನ್ನೂ ಏನೋ ಮಹತ್ವದ ದಿನವೇ ಇದಾಗಿರುತ್ತದೆ.

ಹಾಗಾದರೆ, ನಿಜವಾದ ಅರ್ಥದಲ್ಲಿ ಪರಿಸರ ದಿನಾಚರಣೆ ಎಂದರೆ ಏನು?
ಇದು ಒಂದು ಯಕ್ಷ ಪ್ರಶ್ನೆಯಾಗಿದೆ? ನಿಮ್ಮಗಳ ಅನಿಸಿಕೆಯೇನು ಎಂದು ಆಲೋಚಿಸುತ್ತಿರುವೆ.

ಬುಧವಾರ, ಜೂನ್ 3, 2009

ಹೂವೂ ಚೆಲುವೆಲ್ಲಾ ನಂದೆಂದಿತು

Photo by Chandrashekara B.H. Jun2008
ಹೂವೂ ಚೆಲುವೆಲ್ಲಾ ನಂದೆಂದಿತು ಹೆಣ್ಣು ಹೂವ ಮುಡಿದು ತಾನೇ.... ಈ ಗೀತೆಯನ್ನು ಕೇಳದವರಾರು? ಆ ಗೀತೆಯಲ್ಲಿ ಬರುವ ಸಾಲುಗಳು ಒಂದಕ್ಕೊಂದು ಸಾಟಿಯಿಲ್ಲದಂತೆ ತನ್ನತನವ ಮೆರೆಸುವಂತಿದೆ. ಇಂತಿರುವಾಗ, ಅದೇ ಸೊಬಗಿನ ಹೂಗಳನ್ನು ನೋಡಿದಾಗ ಈ ಹಾಡು ನೆನಪಾದರೆ ಅಚ್ಚರಿಯೇನಿಲ್ಲ ಅಲ್ಲವೆ? Photo by Chandrashekara B.H. Apr2009
ಹಲವಾರು ಪ್ರಸಿದ್ಧ ವ್ಯಕ್ತಿಗಳು ಹೂಗಳ ಬಗ್ಗೆ ಕೆಲವು ನುಡಿಗಳನ್ನು ಹೀಗೆಲ್ಲಾ ಹೇಳಿರುತ್ತಾರೆ. (ಅವರ ಮಾತುಗಳನ್ನು ವಿವಿಧ ಅಂತರ್ಜಾಲ ತಾಣಗಳಿಂದ ಪಡೆದುಕೊಂಡಿರುತ್ತೇನೆ). ಅವೆಲ್ಲ ಆಂಗ್ಲ ಭಾಷೆಯಲ್ಲಿವೆ. ಅದನ್ನು ಹಾಗೆಯೇ ಇಲ್ಲಿ ಟೈಪಿಸಿರುತ್ತೇನೆ. ಏಕೆಂದರೆ, ಕನ್ನಡ ಭಾಷೆಗೆ ಅನುವಾದ ಮಾಡಲು ಸ್ವಲ್ಪ ಕಷ್ಟ ಅಥವಾ ಪದಗಳ ಕೊರತೆ ನನಗೆ ಎದುರಾಗುತ್ತಿದೆ. ಅದಕ್ಕೆ ಕ್ಷಮೆಯಿರಲಿ.
ಭಗವಾನ್ ಬುದ್ಧ: If we could see the miracle of a single flowerclearly, our whole life would change" ಬುದ್ಧ
ಕವಿ ರವೀಂದ್ರನಾಥ ಟ್ಯಾಗೋರ್‍: By plucking her petals, you do not gather the beauty of the flowers. - Rabindranath Tagore.
ಮಹಾತ್ಮಾ ಗಾಂಧೀಜಿ: Faith is not a delicate flower which would wither away under the slightest stormy weather -M.K. Gandhi
ರಾಲ್ಫ್ ವಾಲ್ಡೊ ಎಮರ್ಸನ್‌: Earth laughs in flowers. - Ralph Waldo Emerson
ಗೆರಾರ್‍ಡ್ ಡೆ ನೆರವಾಲ್‌: Every flower is a soul blossoming in Nature - Gerard De Nerval
ಡಿ. ಎಚ್. ಲಾರೆನ್ಸ್: The fairest thing in nature, a flower, still has its roots in earth and manure. -D. H. Lawrence
ಆರ್‍. ಸೌಥ್ವೆಲ್‌: We trample grass, and prize the flowers of May; yet the grass is green when the flower fades away.- R. Southwell

ಇಲ್ಲಿರುವ ಒಂದೊಂದು ವಾಕ್ಯಗಳೂ ಮಾನವನ ಜೀವನದ ಜೊತೆಯಲ್ಲಿ ಹೋಲಿಸಿದಾಗ ಎಷ್ಟು ನಿಜವೆನಿಸುತ್ತದೆ, ಅಲ್ಲವೆ? ನಿಮಗನಿಸಿದ ಭಾವನೆಗಳನ್ನು ಅಕ್ಷರ ರೂಪದ ಹೂಗಳ ಮಾಲೆಯಲ್ಲಿ ಕಳಿಸಿಕೊಡುವಿರೆಂದು ನನ್ನ ಅನಿಸಿಕೆ.
ಧನ್ಯವಾದಗಳು
ಫೋಟೋಗಳು: ಚಂದ್ರಶೇಖರ ಬಿ.ಎಚ್.