ಸೋಮವಾರ, ಆಗಸ್ಟ್ 24, 2009

ಹೀಗೊಬ್ಬ ಸ್ಫೂರ್ತಿಯ ಚಿಲುಮೆ... ನಿಕ್‌!!

ಹೀಗೊಬ್ಬ ಸ್ಫೂರ್ತಿಯ ಚಿಲುಮೆ... ನಿಕ್‌!!

ಶಿವಪ್ಪ ಕಾಯೋ ತಂದೆ...
ಅಥವಾ
ಅಣ್ಣಯ್ಯ, ಅಮ್ಮಯ್ಯ, ಧರ್ಮಾನೇ ತಾಯಿ ತಂದೆ...
ಅಥವಾ
ಈ ಲೋಕದಿಂದ ದೂರನಾದೆ ಏಕೆ ಆತ್ಮನೇ...

ಇಂತಹ ಹಾಡುಗಳನ್ನು ರೈಲಿನಲ್ಲಿ ಪರವೂರುಗಳಿಗೆ ಪ್ರಯಾಣಿಸುವಾಗ ಹಾಡುತ್ತಾ ಬೇಡುತ್ತಾ ಬರುವವರಿಂದ ಕೇಳಿರುತ್ತೀರಿ. ಆಗೆಲ್ಲ ಏನನಿಸಿರಬಹುದು. ಪಾಪ, ಕಣ್ಣುಗಳಿಲ್ಲವೆಂದೋ, ಕೈ ಊನವೆಂದೋ, ಕಾಲುಗಳಲ್ಲಿ ಶಕ್ತಿಯಿಲ್ಲವೆಂದೋ ಏನೋ ಒಂದು ಅನುಕಂಪದ ಅಲೆ ನಿಮ್ಮಲ್ಲಿ ಬಂದಿರುತ್ತದೆ ಅದರ ಜೊತೆಗೆ ನಿಮ್ಮಿಂದ ೧-೨ ರೂಪಾಯಿ ದಾನವಾಗಿರುತ್ತದೆ. ಇಲ್ಲಿ ದಾನ ಮಾಡಬೇಡಿ ಇಂತಹವರಿಗೆ ಎಂದು ನಾನು ಆಕ್ಷೇಪಿಸುವುದಿಲ್ಲ. ಶರೀರದಲ್ಲಿನ ಒಂದೋ ಎರಡೋ ಅಂಗ ಊನವಾಗಿರಬಹುದು ಎಂದ ಮಾತ್ರಕ್ಕೆ ಬದುಕನ್ನು ಈ ರೀತಿ ನಡೆಸಬೇಕೆ? ನಿಜಕ್ಕೂ ವಿಷಾದನೀಯ.

ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿರುವಾಗ, ಚನ್ನಪಟ್ಟಣ ಸ್ಟೇಷನ್‌ಲ್ಲಿ ಒಬ್ಬ ಬಾಲಕ ಬೋಗಿಯಲ್ಲಿದ್ದ ಕಸವನ್ನು ಬಟ್ಟೆಯಿಂದ ಗುಡಿಸುತ್ತಾ ಕೈ-ಕಾಲುಗಳನ್ನು ತಿರುಚಿರುವುದನ್ನು ತೋರಿಸುತ್ತಾ ಇದ್ದ. ಕೆಲವರು ಅವನಿಗೆ ಹಣ ನೀಡುತ್ತಿದ್ದರು. ಅದೇ ಸಮಯದಲ್ಲಿ ಒಬ್ಬ ಪುಟ್ಟ ಹುಡುಗ ಈತನಿಗೆ ರೇಗಿಸಿದಾಗ, ಏನೋ ಅದು ರೋಪು, ಲೈಫ್ ಬಾಯಿ ಸೋಪು... ಎಂದು ಈ ಕ್ಲೀನ್‌ಮಾಡುತ್ತಿದ್ದ ಹುಡುಗ ಕಿರುಚಿದ. ಒಂದು ತಂಪುಕನ್ನಡಕ ಹಾಕಿ, ಅದ್ಯಾವುದೋ ಕನ್ನಡ ಹಾಡು (ಅರ್ಥವಿಲ್ಲದ ಸಾಹಿತ್ಯ) ಹಾಡುತ್ತಾ... ಕುಳಿತಲ್ಲಿಂದಲ್ಲೇ ವಿವಿಧ ಭಂಗಿಯಿಂದ ಅಲ್ಲಿದ್ದವರಿಗೆ ಅನುಕಂಪ ಮೂಡುವಂತೆ, ಮನರಂಜನೆ ನೀಡುತ್ತಿರುವಂತೆ ಬಿಂಬಿಸುತ್ತಾ ಹಣ ಕೇಳುತ್ತಿದ್ದ.... ತುಂಬಾ ಬೇಸರವಾಯಿತು. ಅಲ್ಲಿಗೆ ಆ ವಿಚಾರವನ್ನು ಬಿಟ್ಟುಬಿಟ್ಟಿದ್ದೆ.
ಆದರೆ...
ಮಾರನೆಯ ದಿನ ನನಗೊಂದು ಈ ಮೇಲ್ ಸಂದೇಶ ಬಂದಿತ್ತು. ಅದರಲ್ಲಿ ಒಂದು ಲಿಂಕು. ಅದರಲ್ಲಿನ ಲಿಂಕು ಹೀಗಿತ್ತು... Are You Going to Finish Strong? ಇದರಲ್ಲಿ ಏನಿರಬಹುದು ಎಂದು ಇಣುಕಿದರೆ ಅಲ್ಲಿ ಅಚ್ಚರಿಯಾಗುವಂತಿರುವ ವ್ಯಕ್ತಿಯ ವಿಡಿಯೋ ಚಿತ್ರದ ತುಣುಕುಗಳು.

ಈ ಮೇಲಿನ ವಿಚಾರಗಳಿಂದಾಗಿ, ಈ ವ್ಯಕ್ರಿಯ ಬಗ್ಗೆ ಮಾಹಿತಿಗಳನ್ನು ಹುಡುಕಿ, ರೈಲಿನಲ್ಲಿನ ಘಟನೆಗೂ, ಇಲ್ಲಿರುವ ಸಾಧಕನಿಗೂ ಇರುವ ಜೀವನದ ಒಳನೋಟವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ವಿಚಾರವಾಗಿ ಇಲ್ಲಿ ಬರೆಯಲು ಯತ್ನಿಸಿದ್ದೇನೆ.

ಆತನ ಹೆಸರು ನಿಕೊಲಾಸ್ ವಾಯಚಿಚ್ (ಉಚ್ಚಾರ Nicholas Vujicich (Voy-a-chich)). ಹುಟ್ಟಿನಿಂದಲೇ ಆತನಿಗೆ ಎರಡೂ ಕೈಗಳು ಹಾಗೂ ಕಾಲುಗಳಿಲ್ಲ. ಇವರ ಮನೆತನದಲ್ಲಿ ಯಾರಿಗೂ ಇಂತಹ ನ್ಯೂನತೆ ಇದ್ದಿಲ್ಲ. ಆದರೂ ಇದೊಂದು ವೈದ್ಯಲೋಕದ ಅಚ್ಚರಿ. ಇಂದು ಆತ ತನ್ನ ಇಂತಹ ಒಂದು ನ್ಯೂನತೆಗಳನ್ನು ಮೆಟ್ಟಿ ತನ್ನ ಬದುಕಿನಲ್ಲಿ ಸಾಧನೆ ಮಾಡಿರುವುದನ್ನು ಕೇಳಿದರೆ/ನೋಡಿದರೆ... ಅಚ್ಚರಿಯೊಂದಿಗೆ, ಹೆಮ್ಮೆಯಾಗುತ್ತದೆ. ಅಲ್ಲದೆ, ಇಂದು ಅವನು ವಿಕಲಾಂಗರೇ ಇರಲಿ ಅಥವಾ ಸರ್ವಾಂಗ ಸುಂದರರೇ ಇರಲಿ ಅವರಿಗೆಲ್ಲ ಸ್ಫೂರ್ತಿ ತುಂಬುವ ಕಾರ್ಯದಲ್ಲಿ ತೊಡಗಿದ್ದಾನೆಂದರೆ ಆತನ ಅಂತಶಕ್ತಿ ಇನ್ನೆಂತಹದಿರಬಹುದು? ನಿಕೊಲಸ್ ಬಗೆಗಿನ ಹೆಚ್ಚಿನ ಪರಿಚಯಕ್ಕಾಗಿ ಈ ತಾಣವನ್ನು ನೋಡಿ. http://www.lifewithoutlimbs.org/index.ಫ್ಪ್
http://www.attitudeisaltitude.com/store-nicksstory.php

ಸುಮಾರು ೧೯ ದೇಶಗಳಲ್ಲಿ ಪ್ರವಾಸ ಮಾಡಿರುವ ಈತ ಕೆಲವೇ ವರ್ಷಗಳ ಹಿಂದೆ ಭಾರತದ ಮುಂಬೈನಗರಕ್ಕೆ ಆಗಮಿಸಿದ್ದ. ಆತ ರಿಕ್ಷಾದಲ್ಲಿ ಪ್ರವಾಸಿಸುತ್ತಿರುವ ವಿಡಿಯೋ ಚಿತ್ರಣವೂ ಇಲ್ಲಿದೆ. http://www.lifewithoutlimbs.org/media-video-results.php?mediaID=77

ಸಾರ್‍, ಕೈ ಇಲ್ಲ, ಕಾಲಿಲ್ಲ ಎಂದು ತಮ್ಮ ತನವನ್ನೇ ಮರೆತು ಮಂದಿಯೊಳಗೆ ಬೇಡುವವರ ಕಂಡಾಗ ಇವನ ಈ ಸಾಧನೆಗಳು ಎಂತಹವರಿಗಾದರೂ ಸ್ಫೂರ್ತಿಯ ಚಿಲುಮೆಯೇ ಆಗುತ್ತವೆ. ನೀವೇನಂತೀರಿ?
ಲೇಖನ: ಚಂದ್ರಶೇಖರ ಬಿ.ಎಚ್.

ಬುಧವಾರ, ಆಗಸ್ಟ್ 19, 2009

ರೈಲು ನಿಲ್ದಾಣದಲ್ಲಿನ ಮಾತುಗಳು...

ಮೊನ್ನೆ ದಿನ ಮೈಸೂರಿಗೆಂದು ಕೆಂಗೇರಿ ರೈಲು ನಿಲ್ದಾಣದಲ್ಲಿ ನಿಂತಿದ್ದೆ. ಅಲ್ಲೊಬ್ಬ ಚಿಕ್ಕ ಹುಡುಗ ಬಾಯಿಗೆ ಮಾಸ್ಕ್ ಧರಿಸಿಕೊಂಡು ಬರುತ್ತಿದ್ದ. ಅಲ್ಲಿಯೇ ಇದ್ದ ಒಂದಿಬ್ಬರು ಮಹಿಳೆಯರು `ಹಂದಿ ಜ್ವರ'ದ ಬಗ್ಗೆ ಮಾತನ್ನು ಶುರುಮಾಡಿದರು.

ಮಹಿಳೆ ೧: ಯಾಕ್ ಆ ಹುಡುಗ ಬಾಯ್ಗೆ ಬಟ್ಟೆ ಕಟ್ಕೊಂಡವ್ನೆ?
ಮಹಿಳೆ ೨: ಅದೇಯಾ, ಹಂದಿ ಜ್ವರ ಅಂತ ಟೀವಿಲಿ, ಪೇಪರ್‍ಲಿ ಬರ್‍ತಾಯಿದೆ.
ಮಹಿಳೆ ೧: ಹೌದು, ನಾನೂ ಕೇಳ್ದೆ. ಅದೇನೋ ಅಮೇರಿಕಾ ಕಡೆ ದೇಶದಿಂದ ಬಂದೈತಂತೆ??!!
ಮಹಿಳೆ ೩: ಹಂದಿ ಮಾಂಸ ತಿನ್ನೊದರಿಂದ ಅಂತೆ...
ಮಹಿಳೆ ೨: ಅದೆಲ್ಲ ಅಲ್ವಂತೆ, ಫಾರಿನ್ನೋರು ಬರೋದ್ರಿಂದ ಬರ್‍ತೈತಂತೆ. ಗಾಳೀಲಿ ಸೋಂಕುತ್ತಂತೆ.
ಮಹಿಳೆ ೧: ಅವರ್‍ಗೆಲ್ಲ ಇಲ್ಲಿಗೆ ಬರಕ್ಕೆ ಬಿಡದಿದ್ದರೆ ಆಯ್ತು. ಅದೇನೋ ಕಾಯ್ಲೆನೋ? ಏನೋ?
ಮಹಿಳೆ ೨: ನಮ್ ದೇಶ ನೋಡೋಕೆ ಬರ್‍ತಾರೆ, ಜೊತೆಗೆ ಹಂದಿ ಜ್ವರನೂ ತರ್‍ತಾರೆ.
ಮಹಿಳೆ ೩: ಹಂಗೇನಿಲ್ಲ. ಜನ-ಜಾತ್ರೆ, ಗಾಳಿ ಇವೆಲ್ಲದರಿಂದ ಬರುತ್ತೆ. ಅದೇನೋ ಜ್ವರ ಬಂದು ೨ ದಿನಕ್ಕೆ ರೋಗಿ ಅಷ್ಟೆ... ಅದಕ್ಕೆ ಹುಷಾರಾಗಿರ್‍ಬೇಕು, ಬಾಯಿ ರುಚಿಗೆ ಬಂದದ್ದೆಲ್ಲ ತಿನ್ಬಾರ್‍ದು. ಬಾಯಿಗೆ ಬಟ್ಟೆ ಕಟ್ಟಿಕೊಂಡರೆ, ಒಳ್ಳೇದಂತೆ....
ಮಹಿಳೆ ೧: ಏ, ಸಾಕು.. ಬಿಡ್ರೆ... ಈ ಹಂದಿ ಜ್ವರ-ಗಿರ ಮಾತು
ಎಂದು ತಾವು ಆಡುತ್ತಿದ್ದ ಮಾತುಗಳನ್ನು ಬೇರೆ ವಿಚಾರದೆಡೆಗೆ ತಿರುಗಿಸಲು ಆದೇಶಿಸಿದ್ದಳು.

ಅಷ್ಟರಲ್ಲಿ ರೈಲು ಬಂತು, ಜನರ ನಡುವೆ ಅವರು ಒಬ್ಬೊಬ್ಬರೇ ಜಾಗ ಹಿಡಿಯಲು ರೈಲಿಗೆ ನುಗ್ಗಿದ್ದರು.
ಒಟ್ಟಿನಲ್ಲಿ ಹಂದಿ ಜ್ವರದ ಬಗ್ಗೆ ಜನರು ಏನೆಲ್ಲಾ ತಿಳಿದಿದ್ದಾರೆ ಎಂದು ಅರ್ಥವಾಗುವಷ್ಟು ವಿಚಾರವಿದೆ. ಜೊತೆಗೆ ತಮ್ಮದೇ ಆದ ಊಹಾಪೋಹಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಪರಿ ಹೀಗಿದೆಯೆಂದರೆ, ಜನರಲ್ಲಿ ಆತಂಕದ ವಾತಾವರಣ ಇಲ್ಲದೆಯೇ ಇರುತ್ತದೆಯೇ?

ಅಂದ ಹಾಗೆ, ನಾನು ವಾಪಸು ಮೈಸೂರಿನಿಂದ ಬರುವಾಗ ನನ್ನ ಬೋಗಿಯಲ್ಲಿದ್ದ ಸುಮಾರು ಜನರು ಬಾಯಿಗೆ ಮಾಸ್ಕ್, ಬಟ್ಟೆ ಧರಿಸಿದ್ದರು, ಜೊತೆಗೆ ನಾನೂ ಸಹ. ಇವೆಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಎಂದು ಬೇರೆ
ಹೇಳಬೇಕಿಲ್ಲ. ನೀವೇನಂತೀರಿ.

ಇಷ್ಟೆಲ್ಲ ಬರೆಯುವಷ್ಟರಲ್ಲಿ ನಿನ್ನೆ ನನಗೊಂದು ಒಂದು ಮೊಬೈಲ್ ಸಂದೇಶ ಬಂದಿತು.
ಹೇಳಿ ಬರೋದು ಜೀವನ,
ಹೇಳ್ದೆ ಬರೋದು ಮರಣ,
ತಿಳಿದು ಆಗೋದು ದ್ವೇಷ,
ತಿಳಿಯದೇ ಆಗೋದು ಪ್ರೀತಿ,
ತಿಳಿಯದೇ, ಹೇಳದೇ, ಕೇಳದೇ ಬರುವುದು
ಹಂದಿ ಜ್ವರ,
ಹುಷಾರಾಗಿರಿ...

ಗುರುವಾರ, ಆಗಸ್ಟ್ 13, 2009

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಕ್ಕೊಂದು ತಿಳುವಳಿಕೆ


ನಿಮಗೆಲ್ಲರಿಗೂ
ಶ್ರೀ ಕೃಷ್ಣ ಜನ್ಮಾಷ್ಠಮಿಯ
ಶುಭಾಶಯಗಳು.

ಸುಮಾರು ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಒಂದು ಪುಟ್ಟ ಘಟನೆಯನ್ನು ನಿಮ್ಮೆಲ್ಲರ ಜೊತೆಗೆ ಹಂಚಿಕೊಳ್ಳಬೇಕೆನಿಸಿತು. ಅದರ ಪೂರ್ಣಪಾಠ ಹೀಗಿದೆ.
*******************
ಅಂದು - ಆಗಸ್ಟ್ ೧೮, ೨೦೦೫

ಆಗಸ್ಟ್ ೧೫ರಂದು ಭಾರತ ಆಂಗ್ಲರ ಗುಲಾಮೀತನದಿಂದ ಸ್ವಾತಂತ್ರ್ಯ ಪಡೆದ ದಿನ. ಅಂದು ದೇಶದ ಎಲ್ಲೆಡೆಯೂ ಸಂಭ್ರಮ. ಕಚೇರಿ, ಶಾಲೆ, ಸಂಘಸಂಸ್ಥೆಗಳ ಜನ ಹೀಗೆ ಎಲ್ಲ ಸೇರಿ ತಮ್ಮ ಸಂತಸವನ್ನು ಹಂಚಿಕೊಳ್ಳುವ ದಿನ. ತ್ರಿವರ್ಣಧ್ವಜದ ಹಾರಿಸುವುದು ಅಂದು ಜನರಿಗೆ ಎಲ್ಲಿಲ್ಲದ ಸಂತಸದ ಕ್ಷಣವೂ ಹೌದು. ಆದರೆ, ಬಾವುಟ ಹಾರಿಸಿ, ರಾಷ್ಟ್ರಗೀತೆ ಹಾಡಿದರೆ ಸಾಕೇ? ಜೊತೆಗೆ ತಮ್ಮ ವಾಹನಗಳ ಮೇಲೆ (ಉದಾ: , ಆಟೋಗಳು ಮುಖ್ಯವಾಗಿ) ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡು ಓಡಾಡುವ ಸಂಭ್ರಮ ಎಲ್ಲ ಸರಿ. ಆದರೆ, ಧ್ವಜವನ್ನು ಹಾರಿಸುವಾಗಿರುವ ಉತ್ಸಾಹ ಇಳಿಸುವಲ್ಲಿಯೂ ಏಕಿಲ್ಲ? ಯಾವ ವೇಳೆಯಲ್ಲಿ ಧ್ವಜಾರೋಹಣ ಮಾಡಬೇಕು ಮತ್ತು ಅದನ್ನು ಇಳಿಸಬೇಕು ಎಂದು ತಿಳಿಯದಿರುವುದೆ? ಇದಕ್ಕೆ ಕಾರಣ ಹಲವಾರು. ಮೊದಲನೆಯದಾಗಿ ನಮ್ಮ ಜನರಿಗೆ ದೇಶ, ರಾಷ್ಟ್ರಧ್ವಜ, ರಾಷ್ಟ್ರಗೀತೆಯ ಬಗ್ಗೆ ಸರಿಯಾದ ತಿಳುವಳಿಕೆ ಅಥವಾ ಮಾಹಿತಿ ಸುಲಭವಾಗಿ ಸಿಕ್ಕಿರುವುದಿಲ್ಲ. ಇದರಿಂದಾಗಿ ಅಚಾತುರ್ಯಗಳು ಆಗುವುದುಂಟು.

ಪ್ರತಿದಿನದ ಸಂಜೆ ನಮ್ಮ ಕಚೇರಿಯ ಸಹೋದ್ಯೋಗಿಗಳೊಡನೆ ವಾಕಿಂಗ್‍ (ವಿರಾಮದ ನಡಿಗೆ ಅನ್ನಬಹುದು!) ಹೋಗುವ ಅಭ್ಯಾಸ. ಜೊತೆಗೆ ಒಂದು ಹೋಟೆಲ್‍ನಲ್ಲಿ ಚಹಾ ಸೇವಿಸಿ ಮನೆಗೆ ಹಿಂದಿರುಗುವುದು ನಮ್ಮ ಅಭ್ಯಾಸ ಹಾಗೂ ಹವ್ಯಾಸ. ಆಗಸ್ಟ್‍ ೧೫ರ ಸಂಜೆ ನಮ್ಮ ನಡಿಗೆ ತಂಡ ಉಪಾಹಾರ ಮಂದಿರದ ಬಳಿ ಕುಳಿತಿತ್ತು. ಅದೇ ಸಮಯಕ್ಕೆ ಒಂದು ಆಟೋ ಬಂದು ನಿಂತಿತು. ಆಟೋಗೆ ರಾಷ್ಟ್ರಧ್ವಜ ಕಟ್ಟಲಾಗಿತ್ತು. ಆಟೋ ಚಾಲಕ ಆಟೋದಲ್ಲಿಯೇ ಕುಳಿತಿದ್ದನು. ಆಗ ನಮ್ಮ ಸ್ನೇಹಿತರು 'ಬಾಪ್ಪಾ ಇಲ್ಲಿ. ಮೊದಲು ಧ್ವಜವನ್ನು ಇಳಿಸು' ಎಂದರು. ಆತ ಮರುಮಾತಿಲ್ಲದೆ (ಸಾಮ್ಯಾನ್ಯವಾಗಿ ಇದಕ್ಕೆ ವಿರುದ್ಧ ಧೋರಣೆಯನ್ನೇ ಓದುಗರು ಕಾಣುತ್ತಿರುತ್ತೀರಿ) ಆತ ಧ್ವಜವನ್ನು ಇಳಿಸಿ ಮಡಿಸಿ ತನ್ನ ಆಟೋದ ಹಿಂದಿನ ಸೀಟಿನಲ್ಲಿ ಇಟ್ಟನು. ಆಗ ನಮ್ಮ ಮಿತ್ರರು ಆ ಆಟೋ ಚಾಲಕನಿಗೆ ಧ್ವಜ ಹಾರಿಸುವುದೊಂದೇ ಮುಖ್ಯವಲ್ಲ. ಅದನ್ನು ಸಂಜೆ ಆರು ಗಂಟೆಯ ನಂತರ ಹಾರಿಸಬಾರದು. ಅದು ಧ್ವಜ ಮತ್ತು ದೇಶಕ್ಕೆ ಅವಮಾನ ಮಾಡಿದಂತೆ ಎಂದರು. ಅದಕ್ಕೆ ಆತ, ತಪ್ಪಾಯಿತು ಹಾಗೂ ನನಗೆ ಗೊತ್ತಿರಲಿಲ್ಲ, ಸ್ವಾಮಿ ಎಂದು ಹೇಳಿದನು. ನಂತರ ಬೇರೆಯವರಿಗೂ ಹೀಗೆ ಹಾರಿಸಿದ್ದರೆ ತಿಳಿಸುತ್ತೇನೆ ಎಂದು ಹೊರಟು ಹೋದನು.

ನೋಡಿದಿರಾ? ಹೇಗೆ ನಮ್ಮಲ್ಲಿ ಓದಿದವರಿಗೂ, ಓದದವರಿಗೂ ಸರಿಯಾದ ಮಾಹಿತಿಯಿಲ್ಲದೆ ಎಂತಹ ತಪ್ಪು ಮಾಡುತ್ತಿರುತ್ತೇವೆ. ಅಲ್ಲದೆ, ಧ್ವಜಾರೋಹಣ ಮತ್ತು ಧ್ವಜ ಇಳಿಸುವಿಕೆಯ ನಿಯಮಗಳು ಇಂತಹ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಅಥವಾ ಅದಕ್ಕೂ ಮುಂಚೆ ಜನರಿಗೆ ತಿಳುವಳಿಕೆ ಕೊಡುವುದನ್ನು ದೂರದರ್ಶನ, ಆಕಾಶವಾಣಿ, ಅಥವಾ ವೃತ್ತಪತ್ರಿಕೆಗಳಲ್ಲಿ ಜಾಹೀರಾತು ಇತ್ಯಾದಿಗಳೊಡನೆ ತಲುಪಿಸಿದರೆ ಇಂತಹ ಅವಘಡಗಳು ಆಗುವುದನ್ನು ತಪ್ಪಿಸಬಹುದಲ್ಲವೆ?

ಲೇಖನ: ಚಂದ್ರಶೇಖರ ಬಿ.ಎಚ್.
*******************

ಬುಧವಾರ, ಆಗಸ್ಟ್ 12, 2009

ನಾ ಎಡಚನಾದರೇನು? ನಾನು ನಾನೇ, ನನ್ನ ಶೈಲಿಯೇ ಬೇರೆ...

ನಾ ಎಡಚನಾದರೇನು? ನಾನು ನಾನೇ, ನನ್ನ ಶೈಲಿಯೇ ಬೇರೆ...

ಒಬ್ಬ ಪುಟ್ಟ ಹುಡುಗ/ಗಿ ಚಿಲ್ಲರೆಯನ್ನೋ, ಪುಸ್ತಕವನ್ನೋ ಕೊಡುವಾಗ ಅಥವಾ ತೆಗೆದುಕೊಳ್ಳುವಾಗ ಎಡಹಸ್ತವನ್ನು ಚಾಚಿದರೆ ನಿಮಗೇನನ್ನಿಸಬಹುದು. ಬೈಯಬೇಕೆಂದು ಕೊಂಡು ಹಾಗೂ ಬೈದೂ ಬಿಡುತ್ತೀರಿ, ಅಲ್ಲವೇ? ಹೌದು. ಕೆಲವರಿಗೆ ಎಡಹಸ್ತವೇ ಪ್ರಮುಖವಾಗಿ ಪ್ರತಿಯೊಂದು ವಿಚಾರದಲ್ಲಿಯೂ ಮುಂಚೂಣಿಯಲ್ಲಿ ಬರುತ್ತದೆ. ಆಗೆಲ್ಲಾ, ನಾವೇನಾದರೂ... ಲೋ... ಎಡಚ ಎಂದು ಯಾರಿಗಾದರೂ ಎಲ್ಲದಕ್ಕೂ ಎಡಹಸ್ತ ಉಪಯೋಗಿಸುವವರಿಗೆ ಬೈಯ್ದರೆ ಬೇಸರಿಸಿಕೊಂಡು ಜಗಳಕ್ಕೆ ನಿಲ್ಲದವರಾರು? ಅಥವಾ ಮನದಲ್ಲಿಯೇ ಅವರೂ ನಿಮಗೆ ಬೈಗುಳಿಸಿದವರಾರು? ಆದರೆ, ಎಡಹಸ್ತವನ್ನು ಉಪಯೋಗಿಸುವ ಪರಿಯು ಅವರ ಅರಿವಿಗೇ ಬರದಂತೆ ಇರುವ ಒಂದು ಸ್ವಭಾವ ಅಥವಾ ಅಭ್ಯಾಸವಾಗಿರಲೂ ಬಹುದು ಅಥವಾ ಅನುವಂಶೀಯವಾಗಿರಲೂ ಬಹುದು.

ಈ ವ್ಯಕ್ತಿಗಳು ಕೆಲವೊಮ್ಮೆ ಕೆಲವು ಕೆಲಸಗಳನ್ನು ನಿಧಾನಗತಿಯಲ್ಲಿ ಮಾಡುತ್ತಾರೆಂದ ಮಾತ್ರಕ್ಕೆ ಅವರುಗಳನ್ನು ನಿರ್ಲಕ್ಷಿಸುವುದು ಅಥವಾ ಅವರುಗಳಿಗೆ ಬೈಯ್ಯುವುದು, ಅವಮಾನಿಸುವುದು ಸರಿಯಲ್ಲ. ಉದಾಹರಣೆಗೆ, ನಾವು (ಬಲಗೈಯವರು) ಉಪಯೋಗಿಸುವ ಕತ್ತರಿಯನ್ನು ಅವರುಗಳು ಬಳಸುವಾಗ ಸರಿಹೊಂದುವುದಿಲ್ಲ. ಹಾಗೆಯೇ, ನಾವು ಬಳಸುವ ಶಾಯಿಯ ಲೇಖನಿ (ಇಂಕ್‌ ಪೆನ್‌) ಮತ್ತು ಅದರ ನಿಬ್ ಅವರು ಬಳಸುವಾಗ ಪೇಪರನ್ನೆ ತೂರಿ ಹರಿಯಬಹುದು. ಇವೆಲ್ಲ ಅವರಿಗೆ ಸ್ವಲ್ಪ ಹೊಂದಿಕೊಂಡು ಬಳಸುವಾಗ ನಿಧಾನವಾಗುವುದು. ನಾವೇ ಒಂದು ಕತ್ತರಿಯನ್ನು ಎಡಗೈಯಲ್ಲಿ ಹಿಡಿದು ಬಟ್ಟೆ ಅಥವಾ ಕಾಗದ ಕತ್ತರಿಸಲು ಪ್ರಯೋಗಿಸಿದರೆ ತಡವರಿಸಿ, ಸರಿಯಾದ ರೀತಿಯಲ್ಲಿ ಕತ್ತರಿಸಲು ಬಹಳ ಕಷ್ಟವಾಗುತ್ತದೆ. ಅದನ್ನೇ ಬಲಗೈಯಲ್ಲಿ ಸಲೀಸಾಗಿ ಬಟ್ಟೆಯನ್ನು ನಮಗೆ ಬೇಕಾದ ಆಕಾರ-ಅಳತೆಗೆ ಕತ್ತರಿಸಬಲ್ಲೆವು. ಏಕೆಂದರೆ, ಈ ವಸ್ತುಗಳಂತೆ ಇನ್ನೂ ಅನೇಕ ವಸ್ತುಗಳನ್ನು ಬಲಗೈಯವರಿಗೆಂದು ಮಾಡಿರುವುದು ಸ್ಪಷ್ಟವಾಗುತ್ತದೆ.

ವಾಮಹಸ್ತ ಪ್ರಯೋಗಿಗಳನ್ನು ಇಷ್ಟೊಂದು ಪರವಾಗಿಸಿಕೊಂಡು ಬರೆದಿರುವರಲ್ಲಾ ಎಂದು ನಿಮಗನಿಸಿದರೆ, ಅದಕ್ಕೊಂದು ವಿಶೇಷವಿದೆ ಎನ್ನಬಹುದು. ಆದ್ದರಿಂದ ಅವರುಗಳಿಗೆ ಎಡಚ, ಲೊಡ್ಡೆ ಎಂದು ಮೂದಲಿಸುವುದು, ಇತರೆ ಬೈಗುಳ, ಅವಮಾನ ಮಾಡದೇ ಅವರಲ್ಲಿರುವ ವಿಶೇಷತೆಯನ್ನು ಗುರುತಿಸುವ ಗುಣ ಬೆಳೆಸಿಕೊಂಡರೆ ಹೇಗೆ? ಅಲ್ಲದೇ ಅವರುಗಳಿಗೇ ಒಂದು ವಿಶೇಷ ದಿನವೂ ಅಸ್ತಿತ್ವದಲ್ಲಿದೆ. ಇವೆಲ್ಲವುಗಳ ಬಗ್ಗೆ ಒಂದು ಸ್ಥೂಲ ಮಾಹಿತಿಯನ್ನು ಇಲ್ಲಿ ನಮ್ಮ-ನಿಮ್ಮೆಲ್ಲರಿಗಾಗಿ ಕಲೆಹಾಕಿದ್ದೇನೆ.

ಈ ವಾಮಹಸ್ತರದೇ ಕ್ಲಬ್ಬುಗಳು, ಸಂಘ ಸಂಸ್ಥೆಗಳೂ ಇವೆ. ಅವರುಗಳು ವಾಮಹಸ್ತರ ದಿನವನ್ನೂ ಆಚರಿಸುತ್ತಾರೆ. ಆದರೆ, ಈ ದಿನಾಚರಣೆಯು ಅಷ್ಟಾಗಿ ಪತ್ರಿಕೆಯಲ್ಲಿ, ಟಿವಿಯಲ್ಲಿ, ರೇಡಿಯೋಗಳಲ್ಲಿ ಪ್ರಚಾರವಾಗುವುದು ಅತೀ ಕಡಿಮೆಯೆನ್ನಬಹುದು. ಇವರುಗಳೂ ಸಹ ವಾಮಹಸ್ತದವರಿಗೆಂದೇ ಅನೇಕ ವಿಧದ ಆಟೋಟ, ಪ್ರಶ್ನಾವಳಿ ಇತ್ಯಾದಿಗಳನ್ನು ನಡೆಸುತ್ತಾರೆ. ಅವರುಗಳಿಗೆ ಸುಲಭವಾಗಿ ಉಪಯೋಗಿಸಲು ಅನುಕೂಲವಾಗುವಂತಹ ದಿನನಿತ್ಯದ ಪರಿಕರಗಳನ್ನೂ ಸಹ ತಯಾರಿಸಿ, ಮಾರಾಟ ಮಾಡುತ್ತಾರೆ.

೧೯೭೬ ರಲ್ಲಿ ಇಂಟರ್‌ನ್ಯಾಷನಲ್ ಲೆಫ್ಟ್ ಹ್ಯಾಂಡರ್‍ಸ್ ಎಂಬ ಸಂಸ್ಥೆಯು ಮೊದಲಬಾರಿಗೆ ಆಗಸ್ಟ್ ೧೩ ರಂದು ಈ ದಿನಾಚರಣೆಯನ್ನು ಆಚರಿಸಲು ರಜಾದಿನವನ್ನಾಗಿ ಮಾಡಿ ಘೋಷಿಸಿತು. ಈ ಸಂಸ್ಥೆಯು ವಾಮಹಸ್ತದವರಿಗೆಂದೇ ಅನೇಕ ಉಪಯೋಗಕಾರಿ ವಸ್ತುಗಳನ್ನು ಮೊದಲಿನಿಂದಲೂ ಪರಿಚಯಿಸುತ್ತ ನಂತರ ಮಾರುಕಟ್ಟೆ ಪ್ರವೇಶಿಸಿತಂತೆ. ಇದೀಗ ಪ್ರಪಂಚದಾದ್ಯಂತ ಸಂಘ, ಸಂಸ್ಥೆಗಳ ಮೂಲಕ ಹಾಗೂ ಪ್ರತ್ಯೇಕವಾಗಿ (ಇಂಡ್ಯುವಿಡ್ಯುಲ್‌) ಈ ದಿನಾಚರಣೆಯನ್ನು ಆಚರಿಸುವಲ್ಲಿಗೆ ಬಂದು ನಿಂತಿದೆ. ಅವರಿಗೆಂದೇ ಹಲವು ಕ್ರೀಡೆಗಳನ್ನೂ ನಡೆಸುತ್ತಾರಂತೆ.

Thurston's left hand test ಎಂಬುದು ಒಂದು ವಿಶೇಷ ಪರೀಕ್ಷಾವಿಧಾನವೆನ್ನಬಹುದು. ಅದರ ವಿವರಣೆ ಹೀಗಿದೆ: The left-handed brain's mastery of the visual has an important benefit - it can "see" three dimensionally. In Thurston's hand test, you are asked to identify which pictures are of left hands and which are of right hands. Your right-handed brain is at a loss to handle this problem, but your left-handed brain can actually rotate these drawings in imaginary space to solve the test - have a go!

ಅವರುಗಳು ಪ್ರತಿನಿತ್ಯವೂ ತಮಗೆ ಉಪಯೋಗಿಸಲಾಗದ ಅನೇಕ ಪರಿಕರಗಳನ್ನು ತಮಗೆ ಅನುಕೂಲವಾಗುವಂತಹ ರೀತಿಯಲ್ಲಿ ಬದಲಾಯಿಸಿ / ತಯಾರಿಸಿ ಬಳಸಲು ಅನುಕೂಲಗಳನ್ನು ಹಾಗೂ ಜಾಗೃತಿ ಮೂಡಿಸಲು ಸಹಕಾರಿಯಾಗುವಂತಹ ಸಲಹೆ, ಮಾರ್ಗದರ್ಶನ ಮಾಡುತ್ತಾರಂತೆ. ಇದರಲ್ಲಿ, ಕತ್ತರಿ, ಇಂಕ್‌ ಪೆನ್‌, ಸಿಪ್ಪೆ ಹೆರೆಯುವ ಸಾಧನ, ವಾಕಿಂಗ್ ಸ್ಟಿಕ್‌, ಪರ್ಸ್‌ಗಳು, ಸಂಗೀತೋಪಕರಣಗಳು: ಗಿಟಾರ್‌, ಪಿಟೀಲು, ಇತ್ಯಾದಿಗಳೂ ಸೇರಿವೆ. ಅಲ್ಲದೆ, ವಾಮಹಸ್ತ ಉಪಯೋಗಿಸುವ ಮಕ್ಕಳಿಗೆಂದೇ ಸೀಸದಕಡ್ಡಿ, ಬಣ್ಣದ ಪೆನ್ನುಗಳು, ಶಾರ್ಪನರ್‍ (ಸೀಸದಕಡ್ಡಿ ಹೆರೆಯುವ ಸಾಧನ) ಇವುಗಳಷ್ಟೇ ಅಲ್ಲದೆ, ಶೂದಾರ ಕಟ್ಟುವುದಕ್ಕೆ ಬೇಕಾಗುವ ಪರಿಕರಗಳು, ಹೀಗೆ ಅನೇಕ ವಸ್ತುಗಳು ಎನಿಥಿಂಗ್‌ಲೆಫ್ಟ್‌ಹ್ಯಾಂಡೆಡ್‌.ಕೊ.ಯುಕೆ ಎಂಬ ಅಂಗಡಿಯಲ್ಲಿ ಸಿಗುತ್ತವೆ. ಅನೇಕ ಪೋಸ್ಟರುಗಳು ಸಹಾ ವಾಮಹಸ್ತದವರ ಕೀಳರಿಮೆಯನ್ನು ತೊಡೆದುಹಾಕಲು ಸಿಗುತ್ತವೆ. ಅಡಿಗೆ ಮನೆಯ ಪರಿಕರಗಳೊಂದಿಗೆ, ಗಣಕಯಂತ್ರಕ್ಕೆ ಸಂಬಂಧ ಪಟ್ಟವೂ, ಕೈಗಡಿಯಾರಗಳೂ, ವಿಡಿಯೋ ಕ್ಯಾಮೆರಾಗಳು, ಗಾಲ್ಫ್ ಕೋಲುಗಳು ಸಹ ಸಿಗುತ್ತವೆ. (ಇವೆಲ್ಲ ವಿದೇಶಗಳಲ್ಲಿ ವಿಶೇಷವಾಗಿ ಕಂಡುಬರುತ್ತವೆ.) ಈ ವಸ್ತುಗಳ ಮೇಲೆ `ಲೆಫ್ಟಿ' ಎಂದು ಮುದ್ರಿಸಲಾಗಿರುತ್ತದೆ. ಇವುಗಳಲ್ಲದೆ, ಪ್ರತಿ ವರ್ಷವೂ ಆಗಸ್ಟ್ ೧೩ ರಂದು ವಾಮಹಸ್ತದವರ ದಿನಾಚರಣೆಯನ್ನು ಆಚರಿಸಲು ಮಾರ್ಗದರ್ಶನವನ್ನೂ ಸಹ ನೀಡುತ್ತಾರೆ.

ವಾಮಹಸ್ತ ಪ್ರಯೋಗಿಗಳು ಚಿತ್ರಕಲೆಯಲ್ಲಿ ಪರಿಣಿತರೂ ಆಗಿರುತ್ತಾರಂತೆ. ಅವರು ಬರೆಯುವ ಚಿತ್ರಗಳನ್ನು ಬಲಮುಖವಾಗಿ ಚಿತ್ರಿಸುತ್ತಾರಂತೆ (ಫೇಸಿಂಗ್ ಟು ದಿ ರೈಟು). ಅವರುಗುಳು ಇವರುಗಳು ಆಟೋಟಗಳಲ್ಲಿ ಪ್ರವೀಣರಾಗಿರುತ್ತಾರಂತೆ. ಉದಾ: ಟೆನಿಸ್‌, ಈಜು, ಬೇಸ್ಬಾಲ್‌, ಕತ್ತಿವರಸೆ (ಫೆನ್ಸಿಂಗ್) ಇತ್ಯಾದಿ.

ಈ ವಾಮಹಸ್ತವನ್ನು ಉಪಯೋಗಿಸುವವರನ್ನು ತಿದ್ದಲು ಪ್ರಯತ್ನಿಸಬಹುದು. ಆದರೆ ಕೆಲವೊಮ್ಮೆ ಸಾಧ್ಯವಾಗದಿದ್ದಾಗ ಬಲಪ್ರಯೋಗದಿಂದ ಪ್ರಯತ್ನಿಸಿದರೆ, ನಾಲ್ಕನೆಯ ಜಾರ್ಜ್ ದೊರೆಯಂತೆ ಆಗಬಹುದು. ಅಂದರೆ, ಅವರಲ್ಲಿ ಮಾತನಾಡುವಾಗ ಉಗ್ಗುವಿಕೆ, ಗೊಂದಲ, ಇತ್ಯಾದಿಯ ಬೆಳವಣಿಗೆ ಕಾಣಿಸಿಕೊಂಡು ಮುಂದೆ ಹಾನಿಕಾರಕ ಬೆಳವಣಿಗೆಗೆ ಕಾರಣವಾಗಬಹುದು. ಇತ್ತೀಚೆಗೆ ಒಂದು ಪ್ರಸಂಗವನ್ನು ದಿನಪತ್ರಿಕೆಯಲ್ಲಿ ಓದಿದ್ದೆ. ಆ ಹುಡುಗಿ ಬಲಗೈನಲ್ಲಿ ಚಿತ್ರ ಬಿಡಿಸುವುದೋ ಇದ್ದರೆ, ಅವಳ ಎಡಹಸ್ತದಿಂದ ಲೆಕ್ಕಗಳನ್ನು ಮಾಡುವ ಸಾಮರ್ಥ್ಯವಿದೆಯಂತೆ. (ಇದರ ಪೂರ್ಣಪಾಠ ಯಾವ ಪತ್ರಿಕೆಯಲ್ಲಿ ಓದಿದ್ದೆ ಮರೆತುಹೋಗಿದೆ). ಚಿಕ್ಕ ವಯಸ್ಸಿನಿಂದ ಎಡಹಸ್ತ ಪ್ರಯೋಗವನ್ನು ಬಿಡಿಸಲು ಹೋಗಿ ಇದೀಗ ಆಕೆ ಎರಡೂ ಹಸ್ತಗಳಿಂದ ಒಂದೊಂದು ವಿಶೇಷಗಳನ್ನು ಮಾಡಬಲ್ಲಳಂತೆ. ಹೀಗೆಯೇ ಪ್ರಖ್ಯಾಸ ಕಲಾವಿದ ಲಿಯೊನಾರ್ಡೊ ಡ ವಿಂಚಿಯೂ ಎರಡೂ ಹಸ್ತಗಳಿಂದ ಬೇರೆ ಬೇರೆ ವಿಚಾರಗಳನ್ನು ಬರೆಯಬಲ್ಲವನಾಗಿದ್ದನಂತೆ.

ವಾಮಹಸ್ತದವನಾಗಿದ್ದರೇನು, ಅವನ ಬಲಮಿದುಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಮತ್ತೂ ಇವರುಗಳ ಗುಣವಿಶೇಷಗಳ ಬಗ್ಗೆ ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿವೆ. ಜೊತೆಗೆ ಅವರು ವಿಶೇಷ ವ್ಯಕ್ತಿಗಳಾಗಿಯೂ ಜನರ ನಡುವೆ ಬಿಂಬಿತವಾಗಿರುತ್ತಾರೆ. ಅನೇಕ ಕಲಾವಿದರು, ಪ್ರಸಿದ್ಧ ವ್ಯಕ್ತಿಗಳು ಎಡಗೈ ಪ್ರತಿಭಾವಂತರೇ ಆಗಿದ್ದಾರೆ. ಇತ್ತೀಚಿನ ಉದಾಹರಣೆಗಳನ್ನು ಕೊಡುವುದಾದರೆ, ನಮ್ಮ ಕನ್ನಡ ಚಲನಚಿತ್ರರಂಗದ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರು. ಹಾಗೆಯೇ ಹಿಂದಿ ಚಿತ್ರರಂಗದಲ್ಲಿನ ದಿ. ಸಂಜೀವ್‌ ಕುಮಾರ್‌, ಬಿಗ್‌ಬಿ ಅಮಿತಾಭ್ ಮತ್ತು ಅವರ ಪುತ್ರ ಅಭಿಷೇಕ್‌ ಬಚ್ಚನ್, ಮಹಾಭಾರತದ ದುರ್ಯೋಧನ ಪಾತ್ರಧಾರಿ ಪುನೀತ್‌ ಇಸ್ಸಾರ್‌ ಮುಂತಾದವರು. ನಮ್ಮ ಕ್ರಿಕೆಟ್ ರಂಗದಲ್ಲಿಯೂ ಸಹ ಸೌರವ್‌ ಗಂಗೂಲಿ, ಯುವರಾಜ್ ಸಿಂಗ್, ದಿನೇಶ್ ಮೊಂಗಿಯಾ, ಜಹೀರ್‌ಖಾನ್‌, ಇತ್ಯಾದಿ...ವಾಮಹಸ್ತದ ಆಟಗಾರರಿದ್ದಾರೆ. ಚಿತ್ರಕಲಾವಿದ ಲಿಯನಾರ್ಡೋ ಡ ವಿಂಚಿ, ಟೆನಿಸ್‌ ಆಟಗಾರ್ತಿ ಮಾರ್ಟಿನಾ ನವ್ರಟಿಲೋವಾ, ಅಮೇರಿಕದ ಈಗಿನ ಅಧ್ಯಕ್ಷ ಬರಾಕ್‌ ಒಬಾಮ, ಟೆನಿಸ್ ಆಟಗಾರ ರ್‍ಯಾಫೆಲ್‌ ನಡಾಲ್ಫ್, ... ಹೀಗೆ ಹೆಸರಿಸುತ್ತಾ ಹೋದರೆ ಅವರ ಸಂಖ್ಯೆ ಅಗಾಧವೆನಿಸುತ್ತದೆ.

ವಾಮಹಸ್ತದವರ ಹಾಗೂ ಅವರ ದಿನಾಚರಣೆಯ ಬಗ್ಗೆ ಸದ್ಯಕ್ಕೆ ಇಷ್ಟು ಸಾಕಲ್ಲವೇ?

ಇಂತಿಷ್ಟು: ನಮ್ಮ ಭಾರತದಲ್ಲಿಯೂ ಸಹ ಇವರುಗಳಿಗಾಗಿ ಒಂದು ಸಂಸ್ಥೆ ಕೆಲಸ ಮಾಡುತ್ತಿದೆ. ಅದರ ಹೆಸರು `ಅಸೋಸಿಯೇಷನ್‌ ಆಫ್ ಲೆಫ್ಟ್‌ಹ್ಯಾಂಡರ್‍ಸ್'. ಇದು ಪುಣೆಯಲ್ಲಿ ತನ್ನ ಕಚೇರಿಯನ್ನು ಹೊಂದಿದೆ. (ಇದರ ಅಂತರ್ಜಾಲ ತಾಣದ ವಿಳಾಸವೇನೋ ಸಿಗುತ್ತದೆ. ಆದರೆ ಮಾಹಿತಿಯ ಪುಟಗಳು ಕಾರ್ಯನಿರ್ವಹಿಸುತ್ತಿಲ್ಲ).

ಲೇಖನ: ಚಂದ್ರಶೇಖರ ಬಿ.ಎಚ್.
೧೨ನೇ ಆಗಸ್ಟ್ ೨೦೦೯
ಮಾಹಿತಿ: ಅಂತರ್ಜಾಲದಿಂದ ಆಧರಿಸಿದ್ದು.

ಶುಕ್ರವಾರ, ಆಗಸ್ಟ್ 7, 2009

ಕಾಫಿಯ ನೆನಪಿನಲ್ಲಿ...

©Photo: Chandrashekara B.H. June2009
ಬೆಳಗಿನ ಕಾಫಿಯ ಸವಿಯುವ, ಅದರ ಸ್ವಾದಿಷ್ಟತೆಯನ್ನು ಆಸ್ವಾದಿಸುವ ಒಂದೇ ಯೋಚನೆಯಿಂದ ನಮ್ಮ ಬೆಳಗು ಶುರುವಾಗುತ್ತದೆ. ಇದರ ಆಸ್ವಾದನೆಯನ್ನು ಯಾರೂ ಅಲ್ಲಗಳೆಯಲಾರರು. ಕಾಫಿಗೆ ಅಂತಹ ಒಂದು ಮಾದಕಶಕ್ತಿಯಿರುವುದರಿಂದಲೇ ನಮ್ಮ ದಿನವು ಶುರುವಾಗುವುದು ಅದರ ಸೇವನೆಯ ಆರಂಭದಿಂದಲೇ ಎನಬಹುದು.

ಕಾಫಿಯಲ್ಲಿರುವ ಕೆಫೀನ್ ಎಂಬ ಪದಾರ್ಥವು ಈ ಉಲ್ಲಾಸಕ್ಕೆ ಕಾರಣ. ಈ ಕೆಫೀನ್‌ನಿಂದ ಉಲ್ಲಾಸದ ಜೊತೆಗೆ ದೀರ್ಘಕಾಲೀನ ನೆನಪಿನ ಶಕ್ತಿ ಮತ್ತು ಶೀಘ್ರಕಲಿಕಾ ವಿಧಾನವನ್ನು ಹೆಚ್ಚಿಸುವಲ್ಲಿ ಪ್ರಯೋಜನಕಾರಿ ಎಂದು ಸಂಶೋಧನೆಗಳ ಅಂಬೋಣ. ಆದರೆ, ಸಂಶೋಧನೆಗೆಂದು ಸ್ಯಾಂಪಲ್‌ ಕೆಫೀನ್‌ ಪ್ರಮಾಣದ ಪ್ರಯೋಗವಷ್ಟೆ. ಇದರ ದೀರ್ಘಕಾಲೀನ ಅಥವಾ ಚಟದ ಪ್ರಭಾವ ನರಮಂಡಲಗಳಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಸರಿಯಾಗಿ ತಿಳಿಯದು. ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿ ತಯಾರಾಗುವ ರಾಸಾಯನಿಕಗಳಲ್ಲಿ ಕೆಲವನ್ನು ಕೆಫೀನ್‌ ಅನುಕರಿಸುತ್ತದೆ ಎಂದು ಸಂಶೋಧನೆ ತಿಳಿಸುತ್ತದಂತೆ. ಸ್ವಾಭಾವಿಕವಾಗಿ ತಯಾರಾಗುವ ರಾಸಾಯನಿಕಗಳ ಬದಲಿಗೆ ಕೆಫೀನ್‌ನ ಸತತ ಸೇವನೆಯಿಂದ ಸ್ವಾಭಾವಿಕತೆಯನ್ನು ಯಾಕೆ ನೀಗಿಸಿಕೊಳ್ಳಬಾರದು?

ಇಂದಿನ ಆಧುನಿಕತೆಯಲ್ಲಿ ಕಾಫಿ ಕುಡಿಯದ ಜನರು ಕಡಿಮೆಯೆಂದೇ ಹೇಳಬಹುದು. ಯಾರದಾದರೂ ನೆಂಟರ ಭೇಟಿಗೆ ಹೋಗಲಿ ಮೊದಲು ಕಾಫಿ ನಂತರ ಮಾತುಕತೆ ಸಾಗುತ್ತದೆ. ಗೆಳೆಯರೋ, ಸಹೋದ್ಯೋಗಿಗಳೋ, ಅಪರೂಪಕ್ಕೆ ಅಥವಾ ಅವ್ಯಾಹತವಾಗಿ ಒಂದು ಕಪ್ ಕಾಫಿ... ಹೋಗೋಣ ಎಂಬುದರಿಂದಲೇ ಭೇಟಿಗಳೆಲ್ಲ ಶುರುವಾಗುತ್ತದೆ ಎಂದರೆ ಅಚ್ಚರಿಯೇನಿಲ್ಲ.

ಕಾಫಿಯಲ್ಲಿ ಅನೇಕ ಸ್ವಾದದ ಕಾಫಿಪೇಯಗಳಿವೆ. ಅವುಗಳಲ್ಲಿ ಕೆಲವು: ಅಮೇರಿಕನ್‌ (ರೆಗ್ಯುಲರ್‍), ಫ್ರೆಂಚ್, ಇಟಾಲಿಯನ್, ವಿಯನ್ನೆಸ್‌ ರೋಸ್ಟ ಇತ್ಯಾದಿ. ಬ್ರೆಜಿ಼ಲ್‌ ಕಾಫಿ ತುಂಬಾ ಫೇಮಸ್ಸು. ನಮ್ಮ ಚಿಕ್ಕಮಗಳೂರು, ಕೂರ್ಗ್ ಕಾಫಿಯೂ ಸಹ ಫೇಮಸ್ಸು. ಇದರ ಜೊತೆಗೆ ಅರೇಬಿಯನ್‌ ಕಾಫೀ ಸಹಾ... ಆಹಾ.. ಹಾ... ಇವೆಲ್ಲದರ ಸ್ವಾದಿಷ್ಟವನ್ನು ಆಸ್ವಾದಿಸುವಂತಾದರೆ... ಅದೂ ಸಹ ನಮ್ಮ ಕೆಫೆ಼ ಕಾಫೀ ಡೇ ಶಾಪುಗಳಲ್ಲಿ ಸಿಗಬಹುದು (ನನಗೆ ಗೊತ್ತಿಲ್ಲ). ಇವೆಲ್ಲ ಕೆಫೀನ್‌ ಇರುವ ಕಾಫಿಯ ಪೇಯಗಳಾದರೆ, ಕೆಫೀನ್‌ರಹಿತ ಕಾಫಿ ಸಹ ದೊರಕುತ್ತದಂತೆ. ದಿಢೀರ್‍ ಕಾಫಿ, ಫ್ರೀಜ್ಡ್-ಡ್ರೈ ಕಾಫಿಗಳೂ ಸಹ ಸಿಗುತ್ತವೆ.

ಕಾಫಿಯನ್ನು ಕೊಳ್ಳಲು, ಬೆಳೆಯಲು, ಆಸ್ವಾದಿಸಲು ಮಾರ್ಗದರ್ಶಿಯಾಗಿ `ದಿ ಜಾಯ್ ಆಫ್ ಕಾಫಿ (ಆಂಗ್ಲ)' ಎಂಬ ಪುಸ್ತಕವೂ ಬರೆಯಲ್ಪಟ್ಟಿದೆ. ಈ ಪುಸ್ತಕದಲ್ಲಿ ಕೇವಲ ಕಾಫಿಯ ಬಗ್ಗೆಯ ವಿವರಗಳಲ್ಲದೆ, ಅನೇಕ ವಿಧದ ಚಹಾ ಬಗ್ಗೆಯೂ ವಿವರಣೆಗಳಿವೆಯಂತೆ (ಓದುಗರ ಅಭಿಪ್ರಾಯಗಳಂತೆ).

ನಮ್ಮ ಡಾ. ಬಿ.ಜಿ.ಎಲ್. ಸ್ವಾಮಿಯವರ `ಸಾಕ್ಷಾತ್ಕಾರದ ಹಾದಿಯಲ್ಲಿ' ಪುಸ್ತಕದಲ್ಲಿ ಕಾಫೀ, ಚಹಾ ಅಲ್ಲದೆ ತಂಬಾಕು, ವೀಳ್ಯ ಇವುಗಳ ಬಗ್ಗೆಯಲ್ಲಿ ಹಾಸ್ಯಲೇಪಿತ ಬರಹಗಳೊಂದಿಗೆ ಸವಿವರಗಳಿವೆ.
ಕಾಫಿಯ ಬಗ್ಗೆ ಒಂದು ಹಾಡನ್ನೂ ಸಹ ಬರೆದಿದ್ದಾರೆ. ಬಾಬ್ ಹಿಲ್ಲರಡ್ ಮತ್ತು ರಿಚರಡ್ ಮೈಲ್ಸ್ ಎಂಬುವರು `ದಿ ಕಾಫಿ ಸಾಂಗ್' ಎಂಬ ಕವನವನ್ನೂ ಸಹ ರಚಿಸಿದ್ದಾರೆ. ಈ ಹಾಡನ್ನು ಫ್ರಾಂಕ್ ಸಿನಾತ್ರಾ ಅದನ್ನು ಹಾಡಿದ್ದಾರಂತೆ...


ನನ್ನ ಸ್ನೇಹಿತ ನಮ್ಮ ಮನೆಗೆ ಬಂದಾಕ್ಷಣ (ಅಪರೂಪಕ್ಕೆ ಆತ ಬರುವುದೇ ಮಧ್ಯಾಹ್ನದ ಸಮಯದಲ್ಲಿ ಬಿಡುವಿದ್ದಾಗ...) ಊಟಕ್ಕೆ ಬಾ.. ಎಂದರೆ, ಊಟ ಏನೂ ಬೇಡ, ಒಂದಲೋಟ ಕಾಫಿ ಕೊಡಿ. ನಿಮ್ಮನೆ ಕಾಫಿ ಚೆನ್ನಾಗಿರುತ್ತೆ. ಆಮೇಲೆ ಊಟ ಅಂತಾನೆ.

ಕಳೆದ ತಿಂಗಳು ನನ್ನ ಸ್ನೇಹಿತ (ಅಮೇರಿಕನ್‌ - ಕನ್ನಡದ ಬಗ್ಗೆ ಆತನಿಗೆ ಬಹಳ ಪ್ರೀತಿ) ಬಂದಿದ್ದಾಗ `ಕಾಫೀ'ಯನ್ನು ಬಹಳ ಇಷ್ಟಪಟ್ಟ. ಅಲ್ಲದೆ ಮತ್ತಷ್ಟು ಹಾಕಿಸಿಕೊಂಡು ಕಾಫಿಯನ್ನು ಸವಿಯುತ್ತಾ... ನನಗೆ ಕಾಫೀ ತುಂಬಾ ಇಷ್ಟ... ಟೀ ಅಂದ್ರ ಕಷ್ಟ. ಉತ್ತರ ಭಾರತ ಪ್ರವಾಸದಲ್ಲಿದ್ದಾಗ ಕಾಫಿಗಾಗಿ ಬಹಳ ಹುಡುಕಾಟ ನಡೆಸುತ್ತಿದ್ದೆ ಎಂದೂ ತಿಳಿಸಿದ. ಹೀಗಿದೆ ಕಾಫೀ ಕಥೆ.

ಆದರೆ, ಸತತ ಚಟವಾದರೆ ಇದೂ ಒಂದು ಸಮಸ್ಯೆಯಾಗಿ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ನಾನಾ ತೊಂದರೆಗಳಿಗೆ ಎಡೆ ಮಾಡಿಕೊಡಲೂ ಬಹುದು. ಜೊತೆಗೆ ಕಾಫೀ ಪುಡಿಯ ಬೆಲೆ ಜಾಸ್ತಿಯಾಗಿರುವುದರಿಂದ ಆದಷ್ಟು ಕಡಿಮೆ ಪ್ರಮಾಣದಲ್ಲಿ ಕಾಫಿ ಸೇವನೆ ಆರೋಗ್ಯಕ್ಕೆ ಹಾಗೂ ಜೇಬಿಗೆ ಅನುಕೂಲಕರವೇ ಹೊರತು ಹಾನಿಕರವಲ್ಲ ಎಂಬುದು ಇತ್ತೀಚೆಗಿನ ಸಂ(ಯೋಚನೆ)ಶೋಧನೆ. ನೀವೇನಂತೀರಿ?

ಸರಿ, ಸದ್ಯಕ್ಕೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗಿ ಕಾಫಿ ಕುಡಿವ...
ಲೇಖನ: ಚಂದ್ರಶೇಖರ ಬಿ.ಎಚ್.
ಆಧಾರ (ಅಂತರ್ಜಾಲತಾಣಗಳು)

ಶನಿವಾರ, ಆಗಸ್ಟ್ 1, 2009

ಸೋದರಿಯರ ದಿನಾಚರಣೆ


ಹೀಗೊಂದು ದಿನವುಂಟೆ? ಎನಿಸಿದರೆ ಹೌದು ಎನ್ನಬಹುದು. ತಾಯಂದಿರ ದಿನ, ಅಪ್ಪಂದಿರ ದಿನ, ಅಜ್ಜ-ಅಜ್ಜಿಯರ ದಿನ ಹೀಗೆ ಇರುವ ದಿನಾಚರಣೆಗಳಲ್ಲಿ ಸಹೋದರರ ದಿನ, ಸಹೋದರಿಯರ ದಿನ ಎಂದೂ ಇದೆ. ಇವೆಲ್ಲ ಪಾಶ್ಚಿಮಾತ್ಯರಿಂದ ಬಂದ ಬಳುವಳಿಗಳೂ ಎಂದು ತಿಳಿಯಬಹುದು ಹಾಗೂ ವ್ಯಾಪಾರ ದೃಷ್ಟಿಯಿಂದಲೂ ಇವುಗಳನ್ನು ಜಾರಿಗೆ ತಂದಿರಬಹುದು. ಆದರೆ ಇಂತಹ ದಿನಾಚರಣೆಗಳಿಂದ ವ್ಯಾಪಾರಸ್ಥರಿಗೆ ಲಾಭವಿದ್ದರೂ ಅದರಿಂದಾಗಿಯೇ ಇಂದಿನ ಆಧುನಿಕ, ಶರವೇಗದ ಜೀವನ ಹಾದಿಯಲ್ಲಿ ಒಡಹುಟ್ಟಿದವರೊಡನೆ ಬಾಂಧವ್ಯವನ್ನು ಮತ್ತಷ್ಟು ಬೆಸೆಯುವಂತಹ ಕಾರ್ಯವಾಗುತ್ತಿದೆ. ಇಂದಿನ ಜನರಲ್ಲಿ ಹಾಗೂ ಉದ್ಯೋಗನಿಮಿತ್ತ ಅಥವಾ ವಿದ್ಯಾರ್ಜನೆಗಾಗಿ ದೂರದೂರವಾಗಿರುವ ಮತ್ತು ತಾವಾಯಿತು, ತಮ್ಮ ಪಾಡಾಯಿತು, ತಾಯಿ-ತಂದೆ, ಪೋಷಕರು, ಅಕ್ಕ-ತಂಗಿ, ಅಣ್ಣ-ತಮ್ಮ ಇವರನ್ನೆಲ್ಲ ಆಗಾಗ ಒಂದುಗೂಡಿಸಬಲ್ಲ, ಸಂತಸವೀಯಬಲ್ಲ ಶಕ್ತಿ ಈ ದಿನಾಚರಣೆಗಳಿಗೆ ಇರಬಹುದು, ಇದು ನನ್ನ ಅನಿಸಿಕೆ.

ಮೊನ್ನೆ ಹೀಗೆಯೇ ಗೂಗಲ್ಲಿನಲ್ಲಿ ಹುಡುಕಾಟನಡೆಸಿದ್ದಾಗ ಕಣ್ಣಿಗೆ ಬಿದ್ದದ್ದು ಸಿಸ್ಟರ್‍ಸ್‌ಡೇ`' ಎಂಬುದು. ಸೋದರಿಗಾಗಿಯೇ ಒಂದು ದಿನವನ್ನು ಮೀಸಲಿಟ್ಟಿದ್ದಾರೆ. ಈ ದಿನಾಚರಣೆಗೆ ಸರಿಯಾದ ದಿನಾಂಕ ಎಂಬುದಿಲ್ಲ. ಏಕೆಂದರೆ, ಕೆಲವರು ಆಗಸ್ಟ್ ೨, ೫ ಅಥವಾ ೭ ರಂದು ಆಚರಿಸುತ್ತಾರಂತೆ. ಬೃಹತ್‌ ಕಂಪನಿಗಳಾದ ಕ್ರಯೋಲಾ ಮತ್ತು ಹಾಲ್‌ಮಾರ್ಕ್ ಇವರುಗಳು ಈ ದಿನವನ್ನು ಕ್ರಮವಾಗಿ ಆಗಸ್ಟ್ ೫ ಮತ್ತು ೭ ಎಂದು ಘೋಷಿಸಿದರೂ ಇವೆಲ್ಲವೂ ತಪ್ಪು ಮಾಹಿತಿ ಎಂದು ಹಾಲಿಡೇ ಇನ್‌ಸೈಟ್ಸ್ ಕಂಪನಿಯವರು ಬರೆಯುತ್ತಾರೆ. ಈ ಕಂಪನಿಗಳು ತಿಳಿಸುವ ಪ್ರಕಾರ ಅದು ೭ ವರ್ಷಗಳಿಗೊಮ್ಮೆ ಸರಿಯಾಗಿರುತ್ತದೆ ಎಂದು ಹಾಲಿಡೇ ಇನ್‌ಸೈಟ್ಸ್ ಅವರ ಅಂಬೋಣ. ಆದ್ದರಿಂದ ಹಾಲಿಡೇ ಇನ್‌ಸೈಟ್ಸ್ ಕಂಪನಿಯವರ ಪ್ರಕಾರ ಆಗಸ್ಟ್ ತಿಂಗಳಿನ ಮೊದಲ ಭಾನುವಾರದಂದೇ ಈ ದಿನವನ್ನು ಆಚರಿಸುವುದು ಸರಿ ಎಂದು ತಿಳಿಸುತ್ತಾರೆ. ಈ ದಿನಾಚರಣೆಯನ್ನು ಯಾರು ಮೊದಲಿಗೆ ಶುರುವಿಟ್ಟರು ಎಂಬುದು ಇದುವರೆವಿಗೂ ತಿಳಿದು ಬಂದಿರುವುದಿಲ್ಲ.

ಈ ದಿನವನ್ನು ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಸೋದರಿ ಎಂಬುದು ಕೇವಲ ಒಡಹುಟ್ಟಿದವರು ಅಥವಾ ಅಕ್ಕ-ತಂಗಿಯರು ಮಾತ್ರವಲ್ಲದೇ ಯಾರನ್ನು ಸೋದರಿಯ ಭಾವದಿಂದ ಕಾಣುವರೋ ಅವರೆಲ್ಲರನ್ನೂ ಒಳಗೊಂಡಿರುತ್ತದೆ. ಶುಭಾಶಯಪತ್ರ, ನವೀನ ವಸ್ತ್ರ, ಅಲಂಕಾರಿಕ ವಸ್ತುಗಳ ಉಡುಗೊರೆಯೊಂದಿಗೆ ಸಿಹಿ ವಿತರಿಸಿ ಸಂತಸಪಡುವುದು. ಹೀಗೆ ಈ ದಿನವನ್ನು ಆಚರಿಸುತ್ತಾರೆ. ಅಣ್ಣ-ತಂಗಿ, ಅಕ್ಕ-ತಮ್ಮ, ಸೋದರಿಯರು ಇವರೆಲ್ಲ ಚಿಕ್ಕವರಿಂದಲೇ ಒಬ್ಬರಿಗೊಬ್ಬರು ಪ್ರೀತಿ, ಕೀಟಲೆ, ತುಂಟತನದೊಂದಿಗೆ ಬೆಳೆದುಬಂದಿದ್ದರೂ, ಇವನ್ನೆಲ್ಲ ನೆನಪಿಸಿಕೊಳ್ಳುವ ಜೊತೆಗೆ ರಕ್ಷಣೆಯಭಾರವೂ ಇರುತ್ತದೆ. ಇಲ್ಲೊಬ್ಬ ಅನಾಮಿಕ ಹೀಗೆ ಹೇಳುತ್ತಾನೆ. I'm smiling because you are my sister and laughing because there is nothing you can do about it. -Unknown. ಇಲ್ಲಿ ಒಂದು ವಿಧದ ಮಮಕಾರದ ಬಂಧನವಿರುವುದನ್ನು ಯಾರೇ ಆಗಲೀ ಮರೆಯುವುದು ಅಪರೂಪ. ಒಂದಲ್ಲಾ ಒಂದು ವಿಧದಲ್ಲಿ ಅಕ್ಕ-ತಂಗಿಯರೊಂದಿಗೆ ನೋವುನಲಿವುಗಳನ್ನು ಹಂಚಿಕೊಳ್ಳದವರು ಅಪರೂಪ. ಎಂತಹ ಕಷ್ಟಕಾಲದಲ್ಲಿಯೂ ಸಹ ತಮ್ಮ ಒಡಹುಟ್ಟಿದವರಿಗೆ ಧೈರ್ಯ, ತಾಳ್ಮೆ ತುಂಬುವ, ಸಹಾಯಹಸ್ತ ನೀಡುವ ಇವರುಗಳು ಸದಾ ಕಾಲ ಎಲ್ಲರ ಶ್ರೇಯಸ್ಸನ್ನೇ ಬಯಸುವವರು. ಈ ಮಾತಿಗೆ ಪುಷ್ಟಿಕೊಡುವಂತೆ ಸಾರಾ ಕೋರ್ಪೆನಿಂಗ್‌ರ ಮಾತು: How do people make it through life without a sister? -Sara Corpening
ಇದನ್ನೇ ಕ್ರಿಸ್ಟಿಯಾನ ರೋಸೆಟ್ಟಿ ಕವನಿಸುತ್ತಾಳೆ:

For there is no friend like a sister
In calm or stormy weather;
To cheer one on the tedious way,
To fetch one if one goes astray,
To lift one if one totters down,
To strengthen whilst one stands
.

- Christina Rossetti
ಇವೆಲ್ಲ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಭಾಸವಾದರೆ... ಅವೆಲ್ಲ ಆ ಕಡೆಗಿರಲಿ.
+++++++++++++++++++

ಇದನ್ನು ನಮ್ಮ ಭಾರತೀಯತೆಯೊಂದಿಗೆ ನೋಡಿದಾಗ, ದಕ್ಷಿಣಭಾಗದಲ್ಲಿ ಜುಲೈ-ಆಗಸ್ಟ್ ತಿಂಗಳ ಆಚೀಚೆ (ಅಂದರೆ ಆಷಾಢ ಕಳೆದು ಶ್ರಾವಣ ಮಾಸ...) ಭೀಮನ ಅಮಾವಾಸ್ಯೆಯು ಹೆಣ್ಣುಮಕ್ಕಳಿಂದ ಆಚರಿಸಲ್ಪಡುವ ಹಾಗೂ ಆದಿನ ಭಂಡಾರ ಹೊಡೆಸುವ ಹಬ್ಬವಾಗಿರುತ್ತದೆ. ನಂತರ ಬರುವ ನಾಗರಪಂಚಮಿಯು ಸೋದರ-ಸೋದರಿಯರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಶ್ರಾವಣ ಹುಣ್ಣಿಮೆಯಂದು ಉತ್ತರಭಾರತದ ಉದ್ದಗಲಕ್ಕೂ ರಕ್ಷಾ ಬಂಧನ ಅಥವಾ ರಾಖೀಹಬ್ಬವೆಂದು ಆಚರಿಸುತ್ತಾರೆ. ಇವೆಲ್ಲವೂ ಸಹ ಸೋದರ-ಸೋದರಿಯರ ಬಾಂಧವ್ಯಕ್ಕೆ ಒತ್ತುನೀಡಿದ ಹಬ್ಬಗಳಾಗಿವೆ. ಇವೆಲ್ಲ ಅನಾದಿಕಾಲದಿಂದ ಆಚರಿಸ್ಪಡುತ್ತಾ ಬಂದಿರುವಂತಹವುಗಳು. ಇಲ್ಲಿಯೂ ಸಹ ಒಡಹುಟ್ಟಿದವರೇ ರಕ್ಷಾ ಬಂಧನ ಮಾಡಬೇಕೆಂದೇನೂ ಇಲ್ಲ. ತಮಗೆ ಇಷ್ಟಬಂದವರಿಗೆ ಅದು ಹಿರಿಯ/ಕಿರಿಯ ಯಾರೇ ಆಗಿರಲಿ ಭ್ರಾತೃತ್ವಭಾವದಿಂದ ಮಾಡುತ್ತಾರೆ. ನಮ್ಮಲ್ಲಿಯೂ ಸಹ ಅನೇಕ ಜನಪದಗೀತೆಗಳು ಸೋದರ-ಸೋದರಿಯರ ಬಗ್ಗೆ ಹೇರಳವಾಗಿವೆ. (ನನಗೆ ಈ ಜನಪದ ಗೀತೆಗಳು ಸರಿಯಾಗಿ ತಿಳಿದಿಲ್ಲವಾಗಿ ಅವನ್ನು ಇಲ್ಲಿ ಬರೆಯುವ ಪ್ರಯತ್ನಮಾಡಿಲ್ಲ, ನಿಮ್ಮ ಕ್ಷಮೆಯಿರುತ್ತದೆ ಎಂದು ತಿಳಿಯುತ್ತೇನೆ).

ಈ ರಾಖೀದಾರವನ್ನು ನಾನೂ ಸಹ ಕುಚ್ಚುಕಟ್ಟಿ ತಯಾರಿಸುತ್ತಿದ್ದದ್ದು ನೆನಪಿದೆ. ಶಾಲಾ-ಕಾಲೇಜು ದಿನಗಳಲ್ಲಿ ನಾನು ಮತ್ತು ನನ್ನ ಕೆಲವು ಮಿತ್ರರು ಪ್ರತಿವರ್ಷದ ರಕ್ಷಾಬಂಧನ ದಿನದಂದು ಭೇಟಿಯಾಗುತ್ತಿದ್ದೆವು. ಜೊತೆಗೆ ಅವರ ಮನೆಯಲ್ಲಿಯೇ ಈ ರಾಖೀದಾರ ತಯಾರಿಸುತ್ತಿದ್ದೆವು. ನನ್ನ ಸ್ನೇಹಿತನ ನಾಲ್ವರು ಸೋದರಿಯರಿಂದ ಮೊದಲು ರಕ್ಷಾಬಂಧನ ಶುರುವಾಗುತ್ತಿತ್ತು. ಕೆಲವರು ದೂರದ ಊರುಗಳಲ್ಲಿದ್ದಾರೆ. ಅವರಿಂದಲೂ ಸಹ ಪತ್ರಮುಖೇನ ರಾಖೀ ರವಾನೆಯಾಗುತ್ತಿತ್ತು. ಇವೆಲ್ಲ ನೆನಪುಗಳು ಬರುತ್ತಿರುತ್ತವೆ.

ಈ ಎಲ್ಲ ನೆನಪುಗಳನ್ನು ಏಕೆ ಪ್ರಸ್ತಾಪಿಸಿದೆನೆಂದರೆ, ಇತ್ತೀಚೆಗೆ ರಾಖೀ/ರಕ್ಷಾ ಬಂಧನವು ಕೇವಲ ತೋರಿಕೆಯ ಅಥವಾ ವ್ಯಾಪಾರೀ ಮನೋಭಾವದ ಹಬ್ಬಗಳಾಗಿ ಆಚರಣೆಯಾಗುತ್ತಿರುವುದು ಕೆಲವೊಮ್ಮೆ ಖೇದವೆನಿಸುತ್ತದೆ.

ನಾಳೆ ಭಾನುವಾರ ವಿದೇಶೀಯರ ಪ್ರೀತಿಯ `ಸಿಸ್ಟರ್‍ಸ್ ಡೇ' ಹಾಗೂ ಮುಂದಿನ ವಾರ ಭಾರತೀಯರ `ರಕ್ಷಾಬಂಧನ' ಇವೆಲ್ಲ ಇದೆ. ಎಲ್ಲರಿಗೂ ಶುಭಾಶಯಗಳು (ಮುಂಚಿತವಾಗಿ).
ಭ್ರಾತೃತ್ವದೊಂದಿಗೆ,

ಚಂದ್ರಶೇಖರ ಬಿಎಚ್.