ನಮ್ಮ ಮನೆಯ ಹತ್ತಿರದವರೊಬ್ಬರ ಮನೆಯಲ್ಲಿ ನವರಾತ್ರಿ ಹಬ್ಬದ ಆರಂಭದಿಂದ `ದಸರಾ' ಗೊಂಬೆಗಳನ್ನು ಇಟ್ಟಿದ್ದರು. ವಿಜಯದಶಮಿಯ ದಿನದಂದು ಸುಮಾರು ಜನರು ಬಂದು ನೋಡಿ ಹೋಗುತ್ತಿದ್ದರು. ನಾನೂ ಮನೆಯಲ್ಲಿ ನನ್ನ ತಂಗಿ ಮಕ್ಕಳನ್ನು ಕರೆದುಕೊಂಡು ಹೋಗಿ ನೋಡಲು ೨-೩ ದಿನದ ಹಿಂದೆಯೇ ತಿಳಿಸಿದ್ದೆನಾದರೂ ಹೋಗಿರಲಿಲ್ಲ. ನಿನ್ನೆ ದಿನ ಹೋಗಿದ್ದರು. ಎಂದಿನಂತೆ ನಾನು ವಾಕಿಂಗ್ ಹೋಗಿದ್ದವನು ಮನೆಗೆ ಬಂದೊಡನೆಯೇ `ನೀನೂ, ಹೋಗು, ಜನ ಎಲ್ಲ ಬಂದು ಫೋಟೋ ತೊಗೊತಿದ್ದಾರೆ. ಈ ಟೀವಿ ಯವರು ಬಂದಿದ್ರು', ಎಂದು ಹೇಳಿದರು. ಸರಿ, ನಾನೂ ಹೊರಟೆ. ಕ್ಯಾಮೆರಾ ಇತ್ತು. ಸೆಲ್ ಇರಲಿಲ್ಲ. ಸುಮಾರು ೯.೦೦ ಘಂಟೆಯ ವೇಳೆಗೆ ಅಂಗಡಿಗೆ ಹೋಗಿ ಸೆಲ್ ತಂದು ಗೊಂಬೆಗಳನ್ನು ನೋಡಲು ಹೊರಟೆ. ಒಂದು ಸುತ್ತು ಗೊಂಬೆಗಳನ್ನೆಲ್ಲ ನೋಡಿದ ಮೇಲೆ `ಫೋಟೋ" ತೆಗೆದುಕೊಳ್ಳಲು ಅನುಮತಿ ಕೋರಿದೆ. `ಧಾರಾಳವಾಗಿ' ಎಂಬ ಉತ್ತರ ಬಂದಿತು. ಆ ಖುಷಿಯಲ್ಲಿ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡೆ. ಇನ್ನೂ ಸ್ವಲ್ಪ ವಿವರವಾಗಿ ತೆಗೆದುಕೊಳ್ಳುವ ಇರಾದೆಯಿತ್ತು. ಆದರೆ, ಅದಾಗಲೇ ೧೦.೦೦ ರ ಸಮಯವಾಗುತ್ತಿರುವುದನ್ನು ಗಮನಿಸಿ, ಮನೆಯೊಡೆಯ ಶ್ರೀ ಶಂಕರ್ ಮತ್ತು ಅವರ ಕುಟುಂಬದವರ ಅನುಮತಿಯನ್ನು ಪಡೆದು ಅವರದೊಂದು ಭಾವಚಿತ್ರ ತೆಗೆದುಕೊಂಡೆ (ಈ ಪ್ರದರ್ಶನವು ಅಕ್ಟೋಬರ್ ೩ ರ ವರೆವಿಗೂ ಇರುತ್ತದೆಂದು ತಿಳಿಸಿದರು). ಬಂಧು-ಮಿತ್ರರು, ಮಕ್ಕಳು, ಸ್ನೇಹಿತರು ಹೀಗೆ ಎಲ್ಲರೂ ಬಂದು ನೋಡಲಿ, ಅದೇ ನಮಗೆ ಸಂತೋಷ ಎಂದು ತಿಳಿಸಿದರು.
ಅಲ್ಲಿ ಮೊದಲಿಗೆ ಹಳ್ಳಿಯ ಚಿತ್ರಣ, ಹೊಲಗದ್ದೆಗಳಲ್ಲಿ ದುಡಿಯುತ್ತಿರವವರು. ಗಣೇಶನ ಮೂರ್ತಿಗಳು, ರಾಮ ಪಟ್ಟಾಭಿಷೇಕ, ಕೃಷ್ಣ ಜನನ, ಆಫ್ರಿಕಾ, ಮೈಸೂರು ಅರಮನೆ ಮತ್ತು ಮಹಾರಾಜರು, ಕೃಷ್ಣನ ಲೀಲೆಗಳು, ಮಿನಿ ಜಂಬೂ ಸವಾರಿ, ಚಪ್ಪಾಳೆ ಹಾಕಿದರೆ ಕರಾಟೆಯಾಡುವವು, ಹಾಡುವ ಮಂಗ, ಇವುಗಳಲ್ಲದೆ, ಶಾಲೆಯಲ್ಲಿ ರಾಷ್ಟ್ರಧ್ವಜಾರೋಹಣ, ಬುದ್ಧನ ನಿರ್ವಾಣ, ರಾಮಾಯಣದ ಚಿತ್ರಗಳು, ಸಾಧು-ಸಂತರು, ಗಾರುಡಿ ಗೊಂಬೆಗಳು, ದಶಾವತಾರ, ಅಷ್ಟಲಕ್ಷ್ಮಿಯರು, ದುರ್ಗಾದೇವಿ, ಮಾರುತಿ, ಶ್ರೀನಿವಾಸ ಕಲ್ಯಾಣ, ಗಿರಿಜಾ ಕಲ್ಯಾಣ, ಗರುಡೋತ್ಸವ, ಸ್ವಾಮಿ ವಿವೇಕಾನಂದ, ಥೈಲ್ಯಾಂಡ್, ಜಪಾನೀ, ಇತ್ಯಾದೀ ಗೊಂಬೆಗಳು, ಪರಿಸರ ರಕ್ಷಿಸಿ, ಕಾಡು ಪ್ರಾಣಿಗಳು, ಹರಿಣಗಳು, ಸೈನಿಕರು, ಕಾಡಿನ ಚಿತ್ರಣ, ನರ್ತಕಿಯರು, ಸಂಗೀತಗಾರರು.., ಹೀಗೆ ಇನ್ನೂ ಅನೇಕವನ್ನು ಪ್ರದರ್ಶಿಸಿದ್ದಾರೆ.
ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುತ್ತದೆ.

