ಮಂಗಳವಾರ, ನವೆಂಬರ್ 24, 2009

ಎರಡು ಮತ್ತು ಮೂರು?

Photo©Chandrashekara BH,ISEC,24Nov2009
ಒಂದೇ ರೂಪ, ಎರಡು ಗುಣ - ಹೀಗೊಂದು ಚಲನಚಿತ್ರದ ಹೆಸರು
ಅದಕ್ಕೆ ತಕ್ಕಂತೆ ಇಲ್ಲಿದೆ ಒಂದು ಮರಕ್ಕೆ ಬರೆದ ನಂಬರು!
ಬೇರೊಂದು, ಕವಲೆರಡು, ಆದರೂ ಬಿಟ್ಟಿಲ್ಲ ಒಬ್ಬರನೊಬ್ಬರು,
ಒಂದೇ ತಾಯಿಬೇರು, ಜೊತೆಯಲ್ಲಿರುವಾಗ ಬಿಡುವುದಾದರೂ ಯಾರು?
ಆದರೆ, ಯಾರು ಬರೆದರೋ ಇದಕ್ಕೆ ನಂಬರು?
ತಿಳಿದೋ, ತಿಳಿಯದೆಯೋ ಎರಡು ಮತ್ತು ಮೂರು?

ಚಂದ್ರಶೇಖರ ಬಿ.ಎಚ್.
ಫೋಟೋ: ಚಂದ್ರಶೇಖರ ಬಿ.ಎಚ್.

ಮಂಗಳವಾರ, ನವೆಂಬರ್ 17, 2009

ಒಂದು ವರ್ಷದ ಚಿಂತನೆಯಿಂದ ಎರಡನೇ ವರ್ಷಕ್ಕೆ...

ಈ ಪುಟವನ್ನು ವಿನ್ಯಾಸಗೊಳಿಸಲು ಕ್ಷಣ ಚಿಂತಿಸಿಲ್ಲ... ಎಂಬುದು ನನ್ನ ಯೋಚನೆ. ಇದು ನನ್ನ ಮೊದಲ ಬ್ಲಾಗಂಚೆಯಲ್ಲಿ ಬರೆದದ್ದು.

http://kshanachintane.blogspot.com/2008/11/blog-post.html

ಈ ಬ್ಲಾಗನ್ನು ಶುರುಮಾಡಿದಾಗ ಎಲ್ಲವೂ ಸಿದ್ಧ ಉಡುಪಿನಂತೆಯೇ ಇದ್ದು ಕೇವಲ ಬರಹವನ್ನು ಅಕ್ಷರ ಪೆಟ್ಟಿಗೆಯಲ್ಲಿ ಹಾಕಿದ್ದರೆ ಮುಗಿದಿತ್ತು. ಅದಕ್ಕೆ ಹಾಗೆ ಬರೆದಿದ್ದೆ.

ಇನ್ನು ನನ್ನ ಆಲೋಚನೆಯಿದ್ದದ್ದು ಸುಭಾಷಿತಗಳ ರೀತಿಯಲ್ಲಿ ಪ್ರಸಿದ್ಧ ವ್ಯಕ್ತಿಗಳ ನುಡಿಗಳನ್ನು ಇಲ್ಲಿ ಬರೆಯಬೇಕೆಂದು ಅನಿಸಿತ್ತು. ಹಾಗೆಯೇ ಒಂದೆರಡು ಬ್ಲಾಗಂಚೆ (ಬ್ಲಾಗ್‌ಪೋಸ್ಟುಗಳು) ಅಂಚಿಸಿದ್ದೆ. ದೀಪವೇ ತೋರು ಸಮಯ ಎಂದು ದೀಪದ ಚಿತ್ರ ಹಾಕಿದ್ದೆ. ಆನಂತರ `ಲಹರಿ' http://kshanachintane.blogspot.com/2008/11/blog-post_21.html ಎಂಬ ಶೀರ್ಷಿಕೆಯಡಿ ಈ ಬ್ಲಾಗಿಗೆ ಈ ಹೆಸರು ಏಕೆ? ಎಂದು ಬರೆದಿದ್ದೆ.

ಬಾಪೂಜಿಗೆ ನಮನ - http://kshanachintane.blogspot.com/2008/11/blog-post_21.html ಎಂದು ಬಾಪೂಜಿಯ ನೆನೆಯುವ ದಿನಕ್ಕೆ ಒಂದೆರಡು ಸಾಲು ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ `ಚಿಂತೆ ಇರಬಾರದು. ಸದಾ ಚಿಂತನೆ ಇರಬೇಕು. ಚಿಂತೆ ಸಜೀವವಾಗಿ ನಮ್ಮನ್ನು ಸುಡುವುದು. ಚಿಂತನೆ ಸದ ನಮ್ಮಲ್ಲಿ ಮನೋವಿಕಾಸವನ್ನುಂಟುಮಾಡುವುದು. ಉತ್ತಮ ಚಿಂತನೆ ನಿಮ್ಮಿಂದ ಹರಿದು ಬರಲಿ ಎಂದು `ಮಾನಸಪೂರ್ವಕವಾಗಿ' ತಿಳಿಸಿದ್ದರು.

ಆಗಿನ್ನೂ ಬರಹವನ್ನು ಕೇವಲ ಒಂದೆರಡು ಸಾಲುಗಳಲ್ಲಿಯೇ ಮುಗಿಸುತ್ತಿದ್ದೆ. ಏಕೆಂದರೆ, `ಪುಟನಾಮವೇ' ಕ್ಷಣ ಚಿಂತನೆ ಎಂದಿಟ್ಟಿದ್ದೆನಲ್ಲ.

ಹೀಗಿರುವಾಗ, ಸ್ವಾಮಿ ವಿವೇಕಾನಂದರ ವಾಣಿಯನ್ನು ಹಾಕಿದ್ದೆ. ಅದೇನೆಂದರೆ, Where can we go to find God if we cannot see Him in our own hearts and in every living being.. ಇದಕ್ಕೆ ಪ್ರತಿಕ್ರಿಯೆಯಾಗಿ, ನಿಮ್ಮದೇ ವಾಕ್ಯದಲ್ಲಿ ಸ್ವಲ್ಪ ವಿವರಣೆಯನ್ನೂ ಬರೆದರೆ ಇನ್ನೂ ಚೆನ್ನಾಗಿರುತ್ತದೆ ಹಾಗೂ ಕನ್ನಡದಲ್ಲಿ ಬರೆಯಿರಿ ಎಂದು `ಬೆಳಕು' ಚೆಲ್ಲಿದವರೊಬ್ಬರು.

ಮತ್ತೊಬ್ಬರಿಂದ, ಬರವಣಿಗೆಯ ಜೊತೆಯಲ್ಲಿ ಛಾಯಾಚಿತ್ರಗಳೂ ಚೆನ್ನಾಗಿವೆ, ಹೀಗೆಯೆ ಬರೆಯುತ್ತಿರಿ. ಹೀಗೆಯೇ ಅನೇಕ ಓದುಗರ ಪ್ರೋತ್ಸಾಹದಿಂದಲೇ ಇಲ್ಲಿಯವರೆವಿಗೆ ಬರೆಯಲು ಸಾಧ್ಯವಾಗಿದೆಯೇನೋ ಅನ್ನಿಸುತ್ತಿದೆ. ಇವೆಲ್ಲದರ ಜೊತೆಯಲ್ಲಿ ಕೆಲವು ಆತ್ಮೀಯರ ಲಭ್ಯತೆಯೂ ಆಗಿದೆ.

1 varsha pooraisitu.. 2ne varshakke...

ಇದೀಗ ಈ ನನ್ನ ಬ್ಲಾಗು ಇಂದಿಗೆ ಒಂದು ವರ್ಷ ಪೂರೈಸಿ ಎರಡನೆಯ (೨ನೇ) ವರ್ಷಕ್ಕೆ ಕಾಲಿಡುತ್ತಿದೆ. ಇದುವರೆವಿಗೆ ಸುಮಾರು ೧೦೦ ಕ್ಕೂ ಮಿಕ್ಕಿ ಬ್ಲಾಗಂಚೆಗಳನ್ನು ಬರೆದಿದ್ದೇನೆ. ನುಡಿಗಟ್ಟುಗಳನ್ನು ಬಳಸಿ ಬರೆದ ಬರಹಗಳೊಂದಿಗೆ, ಸ್ವಾನುಭವ ಅಥವಾ ಯಾವುದೋ ಗಮನಾರ್ಹ ಘಟನೆಯ ಮೆಲಕು, ಒಂದಷ್ಟು ಕವಿತೆಗಳು, ಕೆಲವು ಫೋಟೋ ಹಾಗೂ ಶುಭಾಶಯ ಪತ್ರಗಳೂ ಸೇರಿವೆ.

ಚಿಂತಿಸಲು, ಬರೆಯಲು ಹಾಗೂ ಚಿಂತಿಸಿ ಬರೆಯಲು ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗದು. ಸಲಹೆ-ಸೂಚನೆ, ಅಭಿಪ್ರಾಯಗಳನ್ನು ತಿಳಿಸುತ್ತಾ ಬರೆಯುವ ಉತ್ಸಾಹ ತುಂಬಿದ ನಿಮ್ಮೆಲ್ಲ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.
೧೭.೧೧.೨೦೦೯

ಶುಕ್ರವಾರ, ನವೆಂಬರ್ 13, 2009

ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

೨೦೦೯ ನವೆಂಬರ್‍ ಒಂದರಂದು ತಿರುಮಲ ತಿರುಪತಿಯ ದರ್ಶನಕ್ಕೆ ಹೋಗಿದ್ದಾಗಿನ ಒಂದೆರಡು ಘಟನೆಗಳಿವು

ಘಟನೆ ೧: ಬೆಟ್ಟಕ್ಕೆ ನಡೆದು ಹೋಗುತ್ತಿರುವಾಗ, ಅಲ್ಲಿ ಒಬ್ಬ ಯಾವ ಊರಿನವರು ಎಂದು ಬರುವವರ ಹೋಗುವವರ ಕೇಳುತ್ತಿದ್ದ. ಹೀಗಿರುವಾಗ, ನನಗೂ ಕೇಳಿದ. ಕನ್ನಡ, ಕರ್ನಾಟಕ ಎಂದಾಗ. ನನಗೂ ಕನ್ನಡ ಬರುತ್ತೆ ಎಂದ. ಅವನ ಜೊತೆಯಲ್ಲಿ ಪತ್ನಿ, ಮಗು (???) ಇದ್ದರು. ಮಗು ನಿದ್ದೆ ಮಾಡುತ್ತಿತ್ತು. ನನಗೆ ಸ್ವಲ್ಪ ಸಹಾಯ ಮಾಡುವಿರಾ ಎಂದು ಆತನ ಪ್ರಶ್ನೆ. ಏನು? ಎಂದೆ.

ಸುಮಾರು ೩೦೦೦ ಸಾವಿರ ಪಿಕ್‌ಪಾಕೆಟ್ ಆಯಿತು. ತಿಂಡಿಗೆ ಕಾಸು ಕೊಡಿ ಎಂದ. ನಾನು ಮುಂದಕ್ಕೆ ಹೊರಟೆ.

ಘಟನೆ ೨: ಮೊದಲಿನ ಘಟನೆಯಂತೆಯೇ ಇದೂ ಸಹ. ತಿರುಮಲದ ಪ್ರವೇಶಿಸುವಾಗ ಅಲ್ಲಿಯೂ ಸಹ ಒಬ್ಬ ಹೀಗೆಯೇ. ಆದರೆ ಇಲ್ಲಿ ೨-೩ ವರ್ಷದ ಮಗುವಿತ್ತು. ಅವನೂ ಸಹ, ಮೊದಲಿನವನಂತೆಯೆ ಬರುವ-ಹೋಗುವವರನ್ನು ಪ್ರಶ್ನಿಸುತ್ತಿದ್ದ. ಅವನ ಮಾತಿಗೆ ಉತ್ತರಿಸಿದವರಿಗೆ `ಅದೇ' ಇಂತಿಷ್ಟು ಹಣ ಕಳವಾಯಿತು. ತಿಂಡಿಗೆ .... ಎನ್ನುತ್ತಿದ್ದ.

ಇವರಲ್ಲಿ ಯಾರನ್ನು ನಂಬುವುದು? ಮೊದಲನೆಯವನಿಗೆ ಯಾರಾದರೂ ಕನಿಕರಿಸಿ ಹಣ ನೀಡಿದ್ದರೆ, ಎರಡನೆಯವನ ಸ್ಥಿತಿಯನ್ನೂ ಅಂತಹವರು ನೋಡಿದಾಗ ಅವರ ಮನಸ್ಸಿನಲ್ಲಿ ಏನೆನ್ನಿಸಬಹುದು? ಇದೂ ಸಹ ಒಂದು ದಂಧೆಯೇ ಇರಬೇಕಲ್ಲವೇ? ಏಕೆಂದರೆ, ಎರಡೂ ಕಡೆ ಪುಟ್ಟ ಮಕ್ಕಳು, ಒಂದು ಸೂಟ್‌ಕೇಸು, ಭಾಷೆಯ ಬಗೆಗಿನ ಪ್ರಶ್ನೆ, ಅವನಿಂದ ನನಗೂ ಕನ್ನಡ, ಹಿಂದಿ, ತಮಿಳು ಬರುತ್ತೆ.. ಸಹಾಯ ಮಾಡಿ... ಏನಿದೆಲ್ಲ, ಅನಿಸುತ್ತದೆ.

ನಾನೂ ನನ್ನ ಸ್ನೇಹಿತ ೭-೮ ವರ್ಷಗಳ ಹಿಂದೆ ಇಲ್ಲಿಗೆ ಹೋಗಿದ್ದಾಗಲೂ ಸಹ ಇದೇ ರೀತಿಯಲ್ಲಿ ಒಂದು ಸಂಭವಿಸಿತ್ತು. ಅದೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಹಿಂದಿರುಗುವಾಗ, ದೇವಾಲಯದ ಬಳಿ ದಂಪತಿ-ಮಗಳು (??) ಈ ಮೇಲಿನಂತೆಯೇ ನಡೆದಿತ್ತು. ಆಗ, ೩೦೦ ರೂ ಕಳವಾಗಿದೆ, ಇದೀಗ ೩೦೦೦ ಕಳವಾಗಿದೆ...

ಇದೊಂದು ರೀತಿಯ ಆಧುನಿಕ ದಿರುಸಿನ ಯಾಚನೆಯಿರಬಹುದೇ? ಅಥವಾ ಜನಮರುಳೋ, ಜಾತ್ರೆಮರುಳೋ ಎಂಬಲ್ಲಿ ಇಂತಹ ಬಿಜಿನೆಸ್‌ ನಡೆಯುತ್ತಿರುತ್ತದೆಯೆ? ಅಲ್ಲದೇ, ಇಂತಹವುಗಳಿಂದ ಅದೆಷ್ಟು ಜನ ಮೋಸ ಹೋಗಿರಬಹುದು! ಹೋಗುತ್ತಿರಬಹುದು??? ಎನಿಸಿದರೆ ಅಚ್ಚರಿಯಿಲ್ಲ.... ಅಂತಹವರನ್ನು ಆ `ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

ಗುರುವಾರ, ನವೆಂಬರ್ 12, 2009

ಕನ್ನಡ ಬರೊಲ್ಲ! ಅದಕ್ಕೆ!!

ಕನ್ನಡ ಬರೊಲ್ಲ! ಅದಕ್ಕೆ!!

ನಿನ್ನೆ ದಿನ ಬಸ್ಸಿನಲ್ಲಿ ನಡೆದ ಒಂದು ಪುಟ್ಟ ಪ್ರಸಂಗ. ಸಂಜೆ ಆರು ಗಂಟೆಗೆ ಜಯನಗರಕ್ಕೆ ಹೊರಡುವ ಪುಷ್ಪಕ್ ಬಸ್ಸಿಗೆ ಒಬ್ಬ ವೃದ್ಧೆ (ಸುಮಾರು ೬೦-೬೫ ವರ್ಷವಿರಬಹುದು) ಮತ್ತೊಬ್ಬ ಮಹಿಳೆಯ ಜೊತೆ ಬಂದರು. ಜಯನಗರ ನಾಲ್ಕನೇ ಬ್ಲಾಕಿಗೆ ಆ ವೃದ್ಧೆ ಹೋಗುವವರಿದ್ದರು. ಅವರ ಜೊತೆ ಬಂದಿದ್ದ ಮಹಿಳೆ ನಿರ್ವಾಹಕರಿಗೆ (ಕಂಡಕ್ಟರಿಗೆ) ಈ ವೃದ್ಧೆಯನ್ನು ನಾಲ್ಕನೇ ಬ್ಲಾಕಿನಲ್ಲಿ ಇಳಿಸಿರೆಂದು ಹೇಳಿದರು. ನಂತರ, ನಿರ್ವಾಹಕರು ಚೀಟಿ ಕೊಡುತ್ತಾ ಎಂಟು ರೂಪಾಯಿಕೊಡಲು ಆ ವೃದ್ಧೆಗೆ ಕೇಳಿದಾಗ, ಆ ಅಜ್ಜಿಯು ನನಗೆ ಕನ್ನಡ ಬರುವುದಿಲ್ಲ ಎಂದು ಹಿಂದಿಯಲ್ಲಿ ಹೇಳಿ, ಆದ್ದರಿಂದ ತಮಿಳಿನಲ್ಲಿ ಮಾತಾಡಿ ಎಂದರು (ನಿರ್ವಾಹಕರಿಗೆ). ಅಲ್ಲಿಯೇ ಇದ್ದ ಮತ್ತೊಬ್ಬ ಪ್ರಯಾಣಿಕರು, ನೀವು ಇರೋದು ಕನ್ನಡನಾಡಿನಲ್ಲಿ ಕನ್ನಡ ಬರೊಲ್ಲ ಅಂದರೆ ನಂಬೊಲ್ಲ ಎಂದರು (ಕಾರಣ, ಆಕೆ ಮಾರ್ವಾಡಿ). ಅದಕ್ಕೆ, ಆಕೆ ನಾವು ಮದ್ರಾಸಿನಲ್ಲಿ ಇದ್ದೆವು. ಇದೀಗ ಕರ್ನಾಟಕಕ್ಕೆ ಮಗಳ ಮನೆಗೆ ಬಂದಿದೇನೆ. ಅದಕ್ಕೆ ಕನ್ನಡ ಬರೊಲ್ಲ ಎಂದಿದ್ದು ಎನ್ನಬೇಕೆ! ಅಲ್ಲದೆ, ಚಿಲ್ಲರೆ ಸರಿಯಾಗಿ ಕೊಡಿ ಎಂದು ನಿರ್ವಾಹಕರಿಗೆ ತಾಕೀತು (ತಮಾಷೆ ಮಾತಿನಿಂದ) ಮಾಡುತ್ತಿದ್ದರು.

ಒಂದೆರಡು ಸ್ಟಾಪುಗಳು ಸುಮ್ಮನಿದ್ದ ಆಕೆ ಪಕ್ಕದಲ್ಲಿ ಕುಳಿತವರ ಜೊತೆ ಇದು ಯಾವ ಸ್ಟಾಪು, ನೀವು ಎಲ್ಲಿ ಇಳಿಯೋದು ಹೀಗೆ ಅನೇಕ ಪ್ರಷ್ನೆಗಳನ್ನು ಕನ್ನಡದಲ್ಲಿ ಕೇಳುತ್ತ ಮಾತಿಗೆ ಶುರು ಮಾಡಿದರು.

ನಮ್ಮ ಕನ್ನಡನಾಡಿನಲ್ಲಿ ಜನರ ಪ್ರತಿಯೊಂದು ನಡೆನುಡಿಯೂ ಸಹ ಇದೇ ರೀತಿ ಇದೆ ಎನಿಸಿತು. ಹೀಗಿದೆ ನಮ್ಮ ಕರ್ನಾಟಕದಲ್ಲಿನ ಕನ್ನಡ ಜನರ ಪರಿಸ್ಥಿತಿ.

೦೨.೦೬.೨೦೦೧
ಅವರ್ ಕರ್ನಾಟಕ.ಕಾಂ ನಲ್ಲಿ ಪ್ರಕಟವಾಗಿದೆ.

ಚಂದ್ರಶೇಖರ ಬಿ.ಎಚ್. ೧೨.೧೧.೨೦೦೯