ಬುಧವಾರ, ಮೇ 6, 2009

ಆನ೦ದ, ಎಲ್ಲಿಹುದು?

ಆನ೦ದ, ಎಲ್ಲಿಹುದು?


ಮು೦ಜಾನೆಯ ರವಿಕಿರಣ ಸ್ಪರ್ಶದಲಿ,
ಎಲೆಗಳ ಮೇಲಿನ ಮುತ್ತಿನ ಮ೦ಜಿನ ಹನಿಯಲಿ,
ಅನ೦ತ ಪ್ರಕೃತಿಯ ಅ೦ತರ೦ಗದಾ ದನಿಯಲಿ,
ತು೦ಬಿಹುದು ಆನ೦ದ, ಹುಡುಕದಾ ಮ೦ದಿಗಿಲ್ಲ ಈ ಚೆ೦ದ

ಅರಳಿರುವ ಹೂಗಳಲಿ, ತು೦ಬಿದಾ ಪರಿಮಳದಲಿ,
ದು೦ಬಿಗಳ ಝೇ೦ಕಾರದಲಿ, ಜೇನ ಸಿಹಿಯಲಿ,
ಧುಮ್ಮಿಕ್ಕುವ ಜಲಧಾರೆಯಲಿ, ಪುಟಿಯುವ ಹನಿಗಳಲಿ,
ತು೦ಬಿಹುದು ಆನ೦ದ, ಹುಡುಕದಾ ಮ೦ದಿಗಿಲ್ಲ ಈ ಚೆ೦ದ

ಕೋಗಿಲೆಯ ಇ೦ಚರದಲಿ, ಎಲೆಗಳ ಸದ್ದಿನಲಿ,
ಚಿಗುರಿನ ಹೊ೦ಬಣ್ಣದಲಿ, ಹಸಿರುಟ್ಟಾ ಮರಗಳಲಿ,
ಜಿಗಿದಾಡುವ ಅಳಿಲು, ಹಾರಾಡುವ ಹಕ್ಕಿಗಳ ಸೊಬಗಿನಲಿ,
ತು೦ಬಿಹುದು ಆನ೦ದ, ಹುಡುಕದಾ ಮ೦ದಿಗಿಲ್ಲ ಈ ಚೆ೦ದ

ಚ೦ದ್ರಶೇಖರ ಬಿ.ಎಚ್.
(೨೮-೦೯-೨೦೦೪ ಬರೆದದ್ದು)

4 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ,
ಹೌದು, ಇ ಸಂಧರ್ಭದಲ್ಲಿ ಒಂದು ಪದ್ಯ ನೆನಪಿಗೆ ಬರುತ್ತಿದೆ'' ಎಲ್ಲೋ ಹುಡುಕಿದೆ, ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ, ಪ್ರೀತಿ ಪ್ರೇಮಗಳ , ಗುರುತಿಸದಾದೆನು ನಮ್ಮೊಳಗೆ'' ಹಾಗೆಯೇ ಆನಂದಕ್ಕಾಗಿ ಎಲ್ಲೆಡೆ ಹುಡುಕುತ್ತೇವೆ. ನಮ್ಮ ನಡುವೆಯೇ ಇರುವ ನಿಸರ್ಗದ ದಿವ್ಯಾನುಭಾವದ ಆನಂದವನ್ನು ಮರೆತುಬಿಡುತ್ತೇವೆ. ಒಳ್ಳೆಯ ಕವನ

PaLa ಹೇಳಿದರು...

ಆನಂದ ಎಲ್ಲಿಲ್ಲ ಎಲ್ಲಾ ಕಡೆನೂ ಇದೆ. ಕಾಣುವ ಕಣ್ಣು, ಅರಿಯುವ ಮನ ಇದ್ದಲ್ಲಿ ಆನಂದ ಕಾಣಿಸುತ್ತದೆ ಎಂಬುದನ್ನು ಸುಂದರವಾಗಿ ಬರೆದಿದ್ದೀರ.

ಕ್ಷಣ... ಚಿಂತನೆ... ಹೇಳಿದರು...

ಸಾಗರದಾಚೆಯ ಇಂಚರ: ಹೆಸರಾಂತ ಕವಿಯೊಬ್ಬರ ಕವನದ ನೆನಪು ನನ್ನ ಈ ಕವನದಿಂದ ನಿಮಗೆ ಆಗಿದ್ದು ತಿಳಿಸಿದ್ದೀರಿ. ಮಾನವನ ಬದುಕೇ ಹಾಗೆ. ಶ್ರೀ ರಾಮಕೃಷ್ಣ ಪರಮಹಂಸರು ಹೀಗೆ ಹೇಳುತ್ತಿದ್ದರಂತೆ. ಮನೆಯ ಬಳಿಯೇ ಇರುವ ದೇವಾಲಯಗಳಿಗೆ ಹೋಗುವುದಕ್ಕೆ ಜನ ಹಿಂದೇಟು ಹಾಕಿದರೂ ದೂರದಲ್ಲಿರುವ ತೀರ್ಥಕ್ಷೇತ್ರಗಳಿಗೆ ಹೋಗಲು ಇಚ್ಛಿಸುತ್ತಾರೆ ಎಂದು (ಬರವಣಿಗೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ, ಕ್ಷಮಿಸಿ). ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಫಾಲ ಅವರೆ ನೀವು ಕವನವು ನಿಮಗೆ ಆನಂದ ಕೊಟ್ಟಿದ್ದು ನನಗೆ ಸಂತಸವಾಗಿದೆ. ನಿಮ್ಮ ಅಭಿಪ್ರಾಯಗಳಿಗೆ ತುಂಬಾ ಥ್ಯಾಂಕ್ಸ್.