ಅದಕ್ಕೆ ತಕ್ಕಂತೆ ಇಲ್ಲಿದೆ ಒಂದು ಮರಕ್ಕೆ ಬರೆದ ನಂಬರು!
ಬೇರೊಂದು, ಕವಲೆರಡು, ಆದರೂ ಬಿಟ್ಟಿಲ್ಲ ಒಬ್ಬರನೊಬ್ಬರು,
ಒಂದೇ ತಾಯಿಬೇರು, ಜೊತೆಯಲ್ಲಿರುವಾಗ ಬಿಡುವುದಾದರೂ ಯಾರು?
ಆದರೆ, ಯಾರು ಬರೆದರೋ ಇದಕ್ಕೆ ನಂಬರು?
ತಿಳಿದೋ, ತಿಳಿಯದೆಯೋ ಎರಡು ಮತ್ತು ಮೂರು?
http://kshanachintane.blogspot.com/2008/11/blog-post.html
ಈ ಬ್ಲಾಗನ್ನು ಶುರುಮಾಡಿದಾಗ ಎಲ್ಲವೂ ಸಿದ್ಧ ಉಡುಪಿನಂತೆಯೇ ಇದ್ದು ಕೇವಲ ಬರಹವನ್ನು ಅಕ್ಷರ ಪೆಟ್ಟಿಗೆಯಲ್ಲಿ ಹಾಕಿದ್ದರೆ ಮುಗಿದಿತ್ತು. ಅದಕ್ಕೆ ಹಾಗೆ ಬರೆದಿದ್ದೆ.
ಇನ್ನು ನನ್ನ ಆಲೋಚನೆಯಿದ್ದದ್ದು ಸುಭಾಷಿತಗಳ ರೀತಿಯಲ್ಲಿ ಪ್ರಸಿದ್ಧ ವ್ಯಕ್ತಿಗಳ ನುಡಿಗಳನ್ನು ಇಲ್ಲಿ ಬರೆಯಬೇಕೆಂದು ಅನಿಸಿತ್ತು. ಹಾಗೆಯೇ ಒಂದೆರಡು ಬ್ಲಾಗಂಚೆ (ಬ್ಲಾಗ್ಪೋಸ್ಟುಗಳು) ಅಂಚಿಸಿದ್ದೆ. ದೀಪವೇ ತೋರು ಸಮಯ ಎಂದು ದೀಪದ ಚಿತ್ರ ಹಾಕಿದ್ದೆ. ಆನಂತರ `ಲಹರಿ' http://kshanachintane.blogspot.com/2008/11/blog-post_21.html ಎಂಬ ಶೀರ್ಷಿಕೆಯಡಿ ಈ ಬ್ಲಾಗಿಗೆ ಈ ಹೆಸರು ಏಕೆ? ಎಂದು ಬರೆದಿದ್ದೆ.
ಬಾಪೂಜಿಗೆ ನಮನ - http://kshanachintane.blogspot.com/2008/11/blog-post_21.html ಎಂದು ಬಾಪೂಜಿಯ ನೆನೆಯುವ ದಿನಕ್ಕೆ ಒಂದೆರಡು ಸಾಲು ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ `ಚಿಂತೆ ಇರಬಾರದು. ಸದಾ ಚಿಂತನೆ ಇರಬೇಕು. ಚಿಂತೆ ಸಜೀವವಾಗಿ ನಮ್ಮನ್ನು ಸುಡುವುದು. ಚಿಂತನೆ ಸದ ನಮ್ಮಲ್ಲಿ ಮನೋವಿಕಾಸವನ್ನುಂಟುಮಾಡುವುದು. ಉತ್ತಮ ಚಿಂತನೆ ನಿಮ್ಮಿಂದ ಹರಿದು ಬರಲಿ ಎಂದು `ಮಾನಸಪೂರ್ವಕವಾಗಿ' ತಿಳಿಸಿದ್ದರು.
ಆಗಿನ್ನೂ ಬರಹವನ್ನು ಕೇವಲ ಒಂದೆರಡು ಸಾಲುಗಳಲ್ಲಿಯೇ ಮುಗಿಸುತ್ತಿದ್ದೆ. ಏಕೆಂದರೆ, `ಪುಟನಾಮವೇ' ಕ್ಷಣ ಚಿಂತನೆ ಎಂದಿಟ್ಟಿದ್ದೆನಲ್ಲ.
ಹೀಗಿರುವಾಗ, ಸ್ವಾಮಿ ವಿವೇಕಾನಂದರ ವಾಣಿಯನ್ನು ಹಾಕಿದ್ದೆ. ಅದೇನೆಂದರೆ, Where can we go to find God if we cannot see Him in our own hearts and in every living being.. ಇದಕ್ಕೆ ಪ್ರತಿಕ್ರಿಯೆಯಾಗಿ, ನಿಮ್ಮದೇ ವಾಕ್ಯದಲ್ಲಿ ಸ್ವಲ್ಪ ವಿವರಣೆಯನ್ನೂ ಬರೆದರೆ ಇನ್ನೂ ಚೆನ್ನಾಗಿರುತ್ತದೆ ಹಾಗೂ ಕನ್ನಡದಲ್ಲಿ ಬರೆಯಿರಿ ಎಂದು `ಬೆಳಕು' ಚೆಲ್ಲಿದವರೊಬ್ಬರು.
ಮತ್ತೊಬ್ಬರಿಂದ, ಬರವಣಿಗೆಯ ಜೊತೆಯಲ್ಲಿ ಛಾಯಾಚಿತ್ರಗಳೂ ಚೆನ್ನಾಗಿವೆ, ಹೀಗೆಯೆ ಬರೆಯುತ್ತಿರಿ. ಹೀಗೆಯೇ ಅನೇಕ ಓದುಗರ ಪ್ರೋತ್ಸಾಹದಿಂದಲೇ ಇಲ್ಲಿಯವರೆವಿಗೆ ಬರೆಯಲು ಸಾಧ್ಯವಾಗಿದೆಯೇನೋ ಅನ್ನಿಸುತ್ತಿದೆ. ಇವೆಲ್ಲದರ ಜೊತೆಯಲ್ಲಿ ಕೆಲವು ಆತ್ಮೀಯರ ಲಭ್ಯತೆಯೂ ಆಗಿದೆ.

ಇದೀಗ ಈ ನನ್ನ ಬ್ಲಾಗು ಇಂದಿಗೆ ಒಂದು ವರ್ಷ ಪೂರೈಸಿ ಎರಡನೆಯ (೨ನೇ) ವರ್ಷಕ್ಕೆ ಕಾಲಿಡುತ್ತಿದೆ. ಇದುವರೆವಿಗೆ ಸುಮಾರು ೧೦೦ ಕ್ಕೂ ಮಿಕ್ಕಿ ಬ್ಲಾಗಂಚೆಗಳನ್ನು ಬರೆದಿದ್ದೇನೆ. ನುಡಿಗಟ್ಟುಗಳನ್ನು ಬಳಸಿ ಬರೆದ ಬರಹಗಳೊಂದಿಗೆ, ಸ್ವಾನುಭವ ಅಥವಾ ಯಾವುದೋ ಗಮನಾರ್ಹ ಘಟನೆಯ ಮೆಲಕು, ಒಂದಷ್ಟು ಕವಿತೆಗಳು, ಕೆಲವು ಫೋಟೋ ಹಾಗೂ ಶುಭಾಶಯ ಪತ್ರಗಳೂ ಸೇರಿವೆ.
ಚಿಂತಿಸಲು, ಬರೆಯಲು ಹಾಗೂ ಚಿಂತಿಸಿ ಬರೆಯಲು ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗದು. ಸಲಹೆ-ಸೂಚನೆ, ಅಭಿಪ್ರಾಯಗಳನ್ನು ತಿಳಿಸುತ್ತಾ ಬರೆಯುವ ಉತ್ಸಾಹ ತುಂಬಿದ ನಿಮ್ಮೆಲ್ಲ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಸ್ನೇಹದಿಂದ,
ಚಂದ್ರಶೇಖರ ಬಿ.ಎಚ್.
೧೭.೧೧.೨೦೦೯
ಢಂ, ಢಮಾರ್, ಜ಼ುರ್, ಬ್ಲಬ್,
ಅಬ್ಬಬ್ಬಾ...!! ಪಟಾಕಿ ಸದ್ದು. ತಲೆ ಸಿಡಿಸುವಂತಹ ಸಿಡಿಮದ್ದಿನ ಶಬ್ದ!!!
ಕಳೆದ ಮೂರು ದಿನಗಳಿಂದ ಇದುವೇ ನಗರದೆಲ್ಲೆಡೆ ಆಗಿದ್ದ ದೀಪಾವಳಿ ಹಬ್ಬದ ಸಂಭ್ರಮ.
ಸಂಭ್ರಮ ಒಂದು ಕಡೆಯಾದರೆ, ಆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬಂದವರ ಕಣ್ಣು, ದೇಹಕ್ಕೆಲ್ಲ ಪಟಾಕಿಯ ಕಿಡಿಗಳು ಮಾಡಿದ ಗಾಯಗಳನ್ನು ಮರುದಿನ ಪತ್ರಿಕೆಯಲ್ಲಿ ನೋಡಿದಾಗ ತುಂಬಾ ಬೇಸರವಾಯಿತು. ಯಾರೋ ಹಚ್ಚಿದ ಸಿಡಿಮದ್ದಿನ ಪಟಾಕಿ ಪಟ್ಟೆಂದು ನಡೆವವರ ಮೇಲೆಯೇ ಹಾದು ಸದ್ದಿಲ್ಲದೇ ಕಣ್ದೀಪವನ್ನು ಅಳಿಸಿಹಾಕಿತಲ್ಲಾ ಎಂದು ಮನ ನೋಯುತ್ತದೆ. ಉದ್ದೇಶ ಪೂರ್ವಕವಾಗಿ ಇವೆಲ್ಲ ನಡೆಯದಿದ್ದರೂ, ಕೊಂಚ ಅಜಾಗರೂಕತೆ ಎಂತಹ ಅನಾಹುತಗಳಿಗೆ ಎಡೆ ಮಾಡಿಕೊಡುತ್ತದೆಯಲ್ಲವೆ?
ನಿನ್ನೆ ಸಂಜೆ ಸುಮಾರು ಏಳರ ಸಮಯಕ್ಕೆ ಸುಮ್ಮನೇ ಮನೆಯಿಂದ ಹತ್ತಿರವಿದ್ದ ಅಂಗಡಿಗೆಂದು ಹೊರಟೆ. ಅಂಗಡಿಯವನು ಬಾಗಿಲು ಹಾಕಿದ್ದ. ಅಲ್ಲೆ ಒಂದಿಬ್ಬರು ಪಟಾಕಿ ಸಿಡಿಸುತ್ತಾ ಸಂಭ್ರಮಿಸುತ್ತಿದ್ದರು. ಕೆಲವರು ದ್ವಿಚಕ್ರವಾಹನದಲ್ಲಿ ಬರುತ್ತಿದ್ದರು. ಕೆಲವರು ಆಟೋ, ಕಾರು ಹೀಗೆ. ಇನ್ನು ನಡೆಯುವವರೂ ಇದ್ದರೆನ್ನಿ.
ಅದೇ ಸಮಯಕ್ಕೆ ಒಬ್ಬ ಹಚ್ಚಿದ ಸಣ್ಣ ಪಟಾಕಿ ಸಿಡಿದು ದಾರಿಯಲ್ಲಿ ಹೋಗುತ್ತಿದ್ದವರ ಬಟ್ಟೆಗೆ ಕಿಡಿತಗಲಿತು. ಸದ್ಯಕ್ಕೆ ಅವರಿಗೆ ತೊಂದರೆಯಾಗಿಲಿಲ್ಲ. ಆದರೆ, ಇಲ್ಲಿ ಪಟಾಕಿ ಹಚ್ಚುವ ಜನರು ಯಾರೇ ಆಗಿರಲಿ ರಸ್ತೆಯಲ್ಲಿ ಬರುವ ಜನರಿಗೆ ಒಂದು ಸಣ್ಣ ಎಚ್ಚರಿಕೆಯಾಗಿ ಅಲ್ಲೆ ನಿಂತು ಹೊರಡುವಂತೆ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ಇನ್ನು ಕೆಲವು ಜನರದ್ದು ಭಂಡ ಧೈರ್ಯ ಎನ್ನಿ. ಪಟಾಕಿ ಸರಮಾಲೆ ಅಲ್ಲಿಯೇ ಸಿಡಿಯುತ್ತಿದ್ದರೂ ಅದರ ಮಗ್ಗುಲಿನಲ್ಲಿಯೇ ವಾಹನ ಚಲಾಯಿಸುವ ಸಾಹಸ ಮಾಡುವವರೂ ಇದ್ದಾರೆ. ಅಕಸ್ಮಾತ್, ಪಟಾಕಿಯ ಕಿಡಿಗಳು (ಸರಹಚ್ಚಿದ್ದಾಗ ಪಟಾಕಿಗಳು ೨೦-೩೦ ಅಡಿ ಸಿಡಿಯುತ್ತವೆ) ಸವಾರನಿಗೋ ಅಥವಾ ಹಿಂಬದಿ ಕುಳಿತವರಿಗೋ ಅಥವಾ ವಾಹನದ ತೈಲ ಪೈಪಿಗೋ ತಗಲಿದರೆ ಆಗುವ ಅನಾಹುತ ಮತ್ತೆ ಸರಿಪಡಿಸಲು ಆಗುವುದೇ?
ಪಟಾಕಿ ಹಚ್ಚುವ ಮಂದಿಗಿಂತ, ರಸ್ತೆಯಲ್ಲಿ ನಡೆಯುವವರು, ನೋಡುವವರು ಎಚ್ಚರಿಕೆ ವಹಿಸಬೇಕಾದ್ದು ಅತ್ಯವಶ್ಯಕ ಅಲ್ಲವೇ? ಅಲ್ಪ ಸಮಯ ಉಳಿಸಲು ಬಾಳ ಸಮಯವನ್ನು ಹಾಳು ಮಾಡಿಕೊಳ್ಳುವುದು ತರವೇ?
ಕಳೆ ಮೂರು ದಿನಗಳಲ್ಲಿ ಪಟಾಕಿಯ ಸಿಡಿತದಿಂದ ಕಣ್ಣು, ಕೈ, ದೇಹದ ಅಂಗಗಳಿಗೆ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ, ಅವರ ದೃಷ್ಟಿಗಳು ಮರಳಿ ಬರಲಿ, ಎಂದು ಆಶಿಸುತ್ತೇನೆ.
ಚಂದ್ರಶೇಖರ ಬಿ.ಎಚ್.೨೦.೧೦.೨೦೦೯