ಗುರುವಾರ, ಡಿಸೆಂಬರ್ 24, 2009

ನಾವ್ ಚಾರಣ ಮಾಡಿದ್ದು - ೨: ಏನಿದು? ಪಾತಾಳಗೆರೆ!!

ಅದೋ! ಅಲ್ಲಿ ಕಂಡಿತು ಪಾತಾಳಗೆರೆ

©Chandrashekara BH,12Dec2009
ಏನಿದು? ಪಾತಾಳಗೆರೆ! ನಾನು ತಿಳಿದದ್ದು ತಪ್ಪೆನಿಸಿತು. ಇದು ಪಾತಾಳೆಗೆರೆ ಎಂಬ ಹೆಸರಿನ ರೆಸಾರ್ಟ್ ನಿಸರ್ಗದ ಮಡಿಲಿನಲ್ಲಿದ್ದು, ಕೊಡಚಾದ್ರಿಯ ಚಾರಣಕ್ಕೆ ಹೋಗುವ (ಜೀಪಿನ ಹಾದಿಯಲ್ಲಿ) ಆರಂಭದಲ್ಲಿಯೇ ಇದಿರುವುದು. ಇದಕ್ಕೆ ಮೊದಲು ಸಣ್ಣ ತೊರೆ. ತೊರೆಯದಾಟಿ ಎಡಕ್ಕೆ ತಿರುಗಿದರೆ `ಪಾತಾಳಗೆರೆ'. ಮೊದಲಿಗೆ ನಾನು ಇದು ಶಾಲೆಯಿರಬೇಕೆಂದು ಕೊಂಡಿದ್ದೆ. ಏಕೆಂದ್ರೆ, ಇದಕ್ಕೆ ಹೋಗುವ ಹಾದಿಯಲ್ಲಿ, ಕೈತೋಟ ಮತ್ತು ಗಿಡಗಳ ಬೇಲಿಯಾಚೆಯಲ್ಲಿ ವಾಲಿಬಾಲ್‌ ನೆಟ್ ಹಾಗೂ ಮೈದಾನವಿದೆ. ಒಟ್ಟಿನಲ್ಲಿ ಸುಂದರವಾದ ಕಾಟೇಜುಗಳು ನಿತ್ಯ ಹಸಿರಿನ ನಡುವಿನಲ್ಲಿ ಆಹ್ಲಾದಕರವಾದ ವಾತಾವರಣದಿಂದ ಕೂಡಿರುವ ಸ್ಥಳ. ಇಲ್ಲಿ ಉಳಿದುಕೊಳ್ಳುವವರಿಗೆ ಎಲ್ಲ ರೀತಿಯ ಅನುಕೂಲವಿದೆಯಂದು, ಕಡಿಮೆ ಬೆಲೆಯಲ್ಲಿ ಕಾಟೇಜುಗಳು ಸಿಗುವುದೆಂದು ತಿಳಿಯಿತು.

©Chandrashekara BH,12Dec2009
ಇಲ್ಲಿಂದ ಸ್ವಲ್ಪ ದೂರಕ್ಕೆ ಶ್ರೀ ಮಂಜುನಾಥಾಯನಮ: ಅಂಗಡಿ. ಅಲ್ಲಿ ಟೀ ಕುಡಿದು, ಬಿಸ್ಕತ್ ಸೇವಿಸಿ, ಶಾಲೆಗೆ ಹೊರಟಿದ್ದ ಮಕ್ಕಳ ಕೈಗೂ ಒಂದಷ್ಟು ಬಿಸ್ಕತ್ ಕೊಟ್ಟು ನಮ್ಮ ಮುಂದಿನ ನಡಿಗೆ ಶುರು ಮಾಡಿದೆವು.
ಹೀಗೆ, ಜೀಪಿನ ಹಾದಿಯಲ್ಲಿ ನಡೆವಾಗ ಎದುರುಗಡೆಯಿಂದ ಬಂದ ಜೀಪಿನವ ದಾರಿಯಲ್ಲಿ `ಕಾಡೆಮ್ಮ''ಇದೆ ಎಂದು ಎಚ್ಚರಿಸಿದರು.

ಮಿಸ್. ಸ೨. ಕಾಲು ಹಾದಿ ಹುಡುಕಿಹೊರಟರು, ಜೊತೆಗೆ ನಾನೂ ಹೊರಟೆ. ಹೀಗೆ ಕಾಲುದಾರಿಯಿಂದಾಗಿ ಜೀಪಿನ ಹಾದಿಯನ್ನು ಕಡಿತಗೊಳಿಸುತ್ತಾ ಸುಮಾರು ದೂರವನ್ನು ಎಲ್ಲರೂ ಕ್ರಮಿಸುತ್ತಿದ್ದೆವು. ಒಮ್ಮೆ ಸ್ವಲ್ಪ ದೂರ ಕಾಲಿನ ಹಾದಿ ಕಾಣಿಸಿತು. ಹತ್ತಿದ್ದೆವು. ಮತ್ತೆ ಮುಂದೆ ಕಾಲುದಾರಿ ಕಾಣಿಸುತ್ತಿಲ್ಲ. ನಾವಿಬ್ಬರೂ ವಾಪಾಸು ಬಂದೆವು. ಅದಾಗಲೇ ಉಳಿದವರು ನಮಗಿಂತ ಸ್ವಲ್ಪ ದೂರ ಮುಂದಿದ್ದರು. ಮತ್ತೆ ಎಲ್ಲರೂ ಜೊತೆಯಾಗಿ ಹೊರಟೆವು. ಕೆಲವು ಕಡೆ ಕಾಲುದಾರಿ ಪ್ರಯಾಸಕರವಾಗಿತ್ತು.

ಮುಂದೆ ಉಳಿದವರು ಬರಲೆಂದು ವಿಶ್ರಮಿಸುತ್ತಿರುವಾಗ ಮೋಟರುಬೈಕಿನಲ್ಲಿ ಒಬ್ಬರು ಬಂದರು. ಅವರನ್ನು ಕಾಲುದಾರಿ (ಶಾರ್ಟ್‌ರೂಟ್‌) ಇದೆಯಾ ಮುಂದಕ್ಕೆ ಎಂದು ಕೇಳಿದೆವು. ನಿಮಗೆಲ್ಲಿ ಹಾದಿ ಕಂಡಂತೆ ಅನಿಸುವುದೋ ಅದೆಲ್ಲವೂ ಬೆಟ್ಟಕ್ಕೆ ಹೋಗುವ ದಾರಿ. ಹೋಗಿ ಎಂದರು. ಅಲ್ಲಿಗೆ ಉಳಿದ ನಮ್ಮ ತಂಡದವರೂ ಬಂದರು.

ಜೀಪಿನ ಹಾದಿಯಲ್ಲಿ ಯುವಕರ ಗುಂಪೊಂದು ಕೆಳಗಿಳಿಯುತ್ತಿತ್ತು. ಅಲ್ಲಿನ ಗಲಾಟೆಗೆ (ಒಂದಿಬ್ಬರು ಕುಡಿದು ಮತ್ತೇರಿದ್ದರು) ಹಾದಿಯಲ್ಲಿದ್ದ ಕಾಡೆಮ್ಮೆ ಕಾಡಿನ ಹಾದಿ ಹಿಡಿದದ್ದು ಕಾಣಿಸಿತು.


ಹೊಟ್ಟೆಗೇನಿಲ್ಲ. ಹಸಿವಾಗುತ್ತಿದೆ, ನೀರು ಖಾಲಿಯಾಗುತ್ತಿದೆ. ಕಾಲುದಾರಿಯಲ್ಲಿ ಒಂದು ಸಣ್ಣ ಝರಿ ಹರಿಯುತ್ತಿತ್ತು. ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು, ನೀರುಕುಡಿದು ಹೊರಟಾಗ ಒಂಥರಾ ಖುಷಿ. ಒಂದಿಬ್ಬರು ಬಂಡೆಯಮೇಲೆ ಕಾಲಿಡುವಾಗ ಜಾರಿ ಅಲ್ಲಿಯೇ ಕುಸಿದರು. ಹೀಗೆ ನಮ್ಮ ಮುಂದಿನ ಪಯಣ ಸಾಗಿತ್ತು.

©Chandrashekara BH,12Dec2009
ಗಾಳಿಯೋ ಗಾಳಿಯು: ಇದೀಗ ಬೆಳಗಿನ ೯.೪೫ರ ಸಮಯ. ಮಿಸ್. ಸ೨. ಮತ್ತು ನಾನು ಕಾಲು ಹಾದಿಯಲ್ಲಿ ಮುನ್ನುಗುತ್ತಾ ಹೋದೆವು. ಜೀಪಿನ ದಾರಿಯಲ್ಲಾದರೆ ಮತ್ತೂ ಬಳಸಿಬರಬೇಕಲ್ಲ ಎಂದು ಕಾಲ್ದಾರಿಯಲ್ಲಿ ಸಾಗುತ್ತಿದ್ದೆವು. ಅಲ್ಲಿ ಆಳೆತ್ತರದ ಹುಲ್ಲುಗಳು ಬೆಳೆದಿದ್ದವು. ಕೋಲಿನಿಂದ ಹುಲ್ಲನ್ನು ಸವರುತ್ತಾ (ಹಾವಿದ್ದರೆ, ಚೇಳಿದ್ದರೆ...) ಮುಂದೆ ಸಾಗುತ್ತಿದ್ದಂತೆ ಬೆಟ್ಟದ ನೆತ್ತಿಗೆ ಬಂದಿದ್ದೆವು. ಉಳಿದವರೂ ಅದೇ ಹಾದಿ ಬಂದರೂ ಪಕ್ಕಕ್ಕೆ ಸರಿದು ಜೀಪಿನ ಹಾದಿಗೆ ಬಂದಿದ್ದರು.

©Chandrashekara BH,12Dec2009
ಇಲ್ಲಂತೂ ಗಾಳಿಯೋ ಗಾಳಿ. ಅಲ್ಲಿನವರೆವಿಗೂ ಹತ್ತುವಾಗ ಆಗಿದ್ದ ಆಯಾಸವೆಲ್ಲ ಸಿಹಿಗಾಳಿಗೆ ಕರಗಿ ಹೋಗಿದ್ದವು. ಅಲ್ಲಲ್ಲಿ ಒಂದೆರಡು ಕಡೆ ಕಲ್ಲಿನಿಂದ ಪೀಠದಂತೆ ನಿರ್ಮಿಸಿದ್ದರು. ಅದರ ಮೇಲೆ ನಿಂತಾಗ ಗಾಳಿಯಲ್ಲಿ ತೇಲಿದ ಅನುಭವ. ಖುಷಿಯೋ ಖುಷಿ. ಸುತ್ತಲೂ ಅದಾಗಲೇ ಸೂರ್ಯರಶ್ಮಿಯಿಂದ ಮಂಜಿನ ಹನಿಗಳು ಆವಿಯಾಗುತ್ತಿದ್ದವು. ಕೆಲವು ಬೆಟ್ಟಗಳು ಮೋಡದ ನೆರಳಿಂದ ಮುಚ್ಚಿದ್ದವು. ನಿಜಕ್ಕೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಭಾಸವಾಗಿತ್ತು.

ಇದೀಗ ನೆನಪಾಗಿದ್ದು: ಕೋಟಿಗೊಬ್ಬ ಚಲನಚಿತ್ರದ `ಕಾವೇರಿಗೆ ಕಾಲುಂಗುರ ತೊಡಿಸಿ, ಕೊಡಚಾದ್ರಿಗೆ ಕೈಬಳೆ ತೊಡಿಸಿ...' ಗೀತೆ. ಈ ಸಿನೆಮಾದಲ್ಲಿ ಹಾಡು ನಾಯಕಿಗೆ ಹೇಳಿರಬಹುದು. ಆದರೆ, ಇಲ್ಲಿ ಪ್ರಕೃತಿಮಾತೆಗೆ ಈ ಹಾಡನ್ನು ಅರ್ಪಿಸಬಹುದು.

©Chandrashekara BH,12Dec2009
ಸ೧. ಮ. ಪ್ರ, ಉ, ಭಾ, ಕ, ಅ. ಇವರೆಲ್ಲರ ದಂಡೂ ಬಂದಾಯಿತು. ಒಂದಷ್ಟು ವಿಶಿಷ್ಟ ಫೋಟೋ ಭಂಗಿಗಳನ್ನು ತೆಗೆದರು, ಮರ ಹತ್ತಿದ್ದರು, ಕುಣಿದಾಡಿದ್ದರು. ಏಕೆಂದರೆ, ದೂರದಲ್ಲಿ ತೊನೆಯಾಡುತ್ತಿದ್ದ ಹುಲ್ಲಿನ ರಾಶಿ ರಾಶಿ ಬೆಟ್ಟವನ್ನೇ ತೇಲಿಸಿದಂತೆ ಇತ್ತು.

ಮುಂದೆ, ಇನ್ನರ್ಧ ಘಂಟೆಯ ಹಾದಿ. ಜೀಪಿನ ಹಾದಿಯಲ್ಲಿಯೇ ನಮ್ಮ ನಡಿಗೆ ಸಾಗಿದೆ. ಆದರೆ, ಸ೨ ಮತ್ತು ನಾನು ಹತ್ತಿರದ ಹಾದಿಗಾಗಿ ಹುಡುಕಿ ಸ್ವಲ್ಪ ಹುಲ್ಲಿನ ಹಾದಿ ತುಳಿದಿದ್ದೆವು. ಆಳೆತ್ತರದ ಹುಲ್ಲಿನ ರಾಶಿಯಿಂದಾಗಿ ಮುಂದೆ ಸಾಗದೆ ವಾಪಸಾದೆವು. ಕಾರಣ: ಅಲ್ಲೇನಿರುವುದೋ ಬಲ್ಲವರಾರು?

ಮುಂದುವರೆಯುವುದು...
ಚಿತ್ರ-ಲೇಖನ: ಚಂದ್ರಶೇಖರ ಬಿ.ಎಚ್.
(ಚಾರಣಕ್ಕೆ ಬಂದಿದ್ದವರ ನಿಜನಾಮಧೇಯವನ್ನು ಇಲ್ಲಿ ಬಳಸದೇ ಅವರುಗಳ ಹೆಸರಿನ ಮೊದಲಕ್ಷರವನ್ನು ಬಳಸಿರುತ್ತೇನೆ. ಏಕೆಂದರೆ, ಇದರಿಂದ ಅವರ್‍ಯಾರಿಗೂ ಬೇಸರವಾಗದಿರಲೆಂದು!)

ಸೋಮವಾರ, ಡಿಸೆಂಬರ್ 21, 2009

ನಾವ್ ಚಾರಣ ಮಾಡಿದ್ದು - ೧

ನಾವ್ ಚಾರಣ ಮಾಡಿದ್ದು - ೧

ಬಹಳ ದಿನಗಳಿಂದ ಹೋಗಬೇಕೆಂದುಕೊಂಡಿದ್ದ ಪ್ರವಾಸೀ ಸ್ಥಳಕ್ಕೆ ಇಂದು ಹೋಗುವ ಚಾಲನೆ ಸಿಕ್ಕಿತ್ತು. ಅಂತೂ ಇಂತೂ ಗಾಡಿ ಬಂದಿದ್ದು ೮.೩೦ಕ್ಕೆ. ನಾವ್ ಹೊರಡಬೇಕಿದ್ದು ೬.೩೦ಕ್ಕೆ. ಹೊರಟಮೇಲೆ ಹೊತ್ತೇನು, ಗೊತ್ತೇನು? ಅದೂ ಮುನ್ನೂರು + ಕಿ.ಮೀ. ಕ್ರಮಿಸಬೇಕಿತ್ತು...!!!

ಆಟೋ ಬರಹ ಆಗಾಗ ಕಾಣತ್ತಲ್ಲ ಹಾಗೆ, `ಮೈಸೂರು ಮಲ್ಲಿಗೆ ನೀ ಹೊರಟಿದ್ದು ಎಲ್ಲಿಗೆ'? ಹೀಗೆ ಹಲವರ ಪ್ರಶ್ನೆ. ಏಕೆಂದರೆ, ನಾವುಗಳು ಹೊರಟಿದ್ದು ನೇರ ಕಚೇರಿ ಕೆಲಸ ಮುಗಿಸಿಕೊಂಡು ಸಂಜೆ ೬.೩೦ರಿಂದ ಕ್ವಾಲಿಸ್‌ಗಾಗಿ ಕಾಯುತ್ತಾ ಕುಳಿತಿದ್ದೆವು. ನಿಮಗೆಲ್ಲಾ ನವಗ್ರಹ ಸಿನಿಮಾ ನೆನಪಿರಬಹುದು. ದರ್ಶನ್ ತೂಗುದೀಪ್, ತರುಣ್, ಸೃಜನ್ ಇತ್ಯಾದಿಯವರದ್ದು. ಹಾಗೆಯೇ ನಮ್ಮ ಟೀಮು ಇದ್ದದ್ದು.

ಯಾರು ಯಾರು ನೀವ್ಯಾರು ಎಂದರೆ: ಮಿಸ್ ಗಳಾದ ಸ೧, ಸ೨, ಮ, ಪ್ರ. ಮಿಸ್ಟರ್‍ಗಳು: ಭಾ, ಉ, ಕ, ಮೊ ಮತ್ತು ನಾನು.

೮.೩೦ಕ್ಕೆ ಕ್ವಾರ್ಟರ್ಸಿನ ಗಣೇಶನಗುಡಿಯಲ್ಲಿ ಕ್ವಾಲಿಸ್‌ಗೆ ಪೂಜೆ ಮಾಡಿಸಿ ಹೊರಟೆವು. ಮಾಗಡಿರಸ್ತೆಯಲ್ಲಿ ಊಟ ಮುಗಿಸಿದರು ಸಹಪಯಣಿಗರು. ಎಲ್ಲರಿಗೂ ಸಂಭ್ರಮವೋ ಸಂಭ್ರಮ. ಏಕೆಂದರೆ, ಹಲವರಿಗೆ ಇದು ಮೊದಲ ಚಾರಣದ ಖುಷಿ. ಜೊತೆಗೆ ನಮ್ಮಲ್ಲಿ ಯಾರೂ ಈ ಒಂದು ಚಾರಣ ಸ್ಥಳಕ್ಕೆ ಹೋಗಿದ್ದಿಲ್ಲ. ಮಧ್ಯರಾತ್ರಿ ಕಡೂರಿನಲ್ಲಿ ಟೀ ಕುಡಿದೆವು. ನಂತರ ಶಿವಮೊಗ್ಗೆಯಲ್ಲಿ ಒಂದೈದು ನಿಮಿಷ ವಿರಾಮ, ಟೀ. ಅಲ್ಲಾಗಲೇ ಗಾಡಿಯಿಂದ ಹೊರಗಿಳಿದರೆ ನಡುಗಿಸುತ್ತಿತ್ತು ಚಳಿ.

ಆ ಕರಾಳ ಕತ್ತಲೆಯಲ್ಲಿ, `ದೂನ' ಎಂಬ ತಂಗುದಾಣದ ಬಳಿಯೇ ನಮ್ಮ ಗಾಡಿಯ ಚಕ್ರದ ಪಂಕ್ಚರ್‌. ಆಕಾಶದಲ್ಲಿ ಒಂದೆಡೆ ಚಂದ್ರ ಮತ್ತು ನಕ್ಷತ್ರಲೋಕ. ಆಗೊಂದು, ಈಗೊಂದು ವಾಹನಗಳ ಸಂಚಾರ. ಗಾಡಿಗೆ ಹೊಸ ಚಕ್ರ ಹಾಕಿಕೊಂಡು ಮುಂದಿನ ಪಯಣ ಹೊಸನಗರ ಕಡೆಗೆ ಹೊರಟೆವು. ಹೊಸನಗರದಲ್ಲಿ ಮುಂಜಾವಿನ ಸಮಯದಲ್ಲಿ ಚಾಲಕನಿಗೆ ಒಂದಿಷ್ಟು ಹೊತ್ತು ನಿದ್ದೆಗೆ ಅವಕಾಶ. ಮತ್ತೆ ಪಯಣ.

ಆ ಮುಂಜಾವಿನ ಮಂಜಿನಲ್ಲಿ ಕಂಡು ಬಂದಿತ್ತು ಕೋಟೆ. ಇದು `ನಗರ'ದಲ್ಲಿರುವ ಕೋಟೆ. ಅ ಕೋಟೆಯನ್ನು ನೋಡಬೇಕೆಂಬಾಸೆ. ಆದರೆ ಕತ್ತಲು ಇನ್ನೂ ಕವಿದಿದ್ದರಿಂದ ನೋಡಲಾಗಲಿಲ್ಲ. ಫೋಟೋ ತೆಗೆದರೂ ಆ ಕತ್ತಲಲ್ಲಿ ಬರಲಿಲ್ಲ.©Chandrashekara BH,Dec2009
ನಗರ: ಇದು ಶಿವಮೊಗ್ಗೆಯಿಂದ ೧೯ ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಕೋಟೆ ೧೬ನೇ ಶತಮಾನದ್ದಿದ್ದು, ಇದಕ್ಕೆ ಬೀಂದನೂರು ಕೋಟೆ ಎಂದು ಹೆಸರು. ಇದು ಕೆಳದಿಯ ಅರಸರ ರಾಜಧಾನಿಯಾಗಿತ್ತು ಮತ್ತು ಇದನ್ನು ಹೈದರ್‍ ಅಲಿಯು ವಶಪಡಿಸಿಕೊಂಡನಂತೆ. (ಆಧಾರ: http://www.shimoga.nic.in/temple.htm)

ಡಾ. ಜಿ.ಪಿ. ರಾಜರತ್ನಂ ಅವರ ಈ ಒಂದು ಕವನ ನೆನಪಿಸುವಂತಿತ್ತು ಅಲ್ಲಿನ ತಾಣ:
ಭೂಮಿನ್ ತಬ್ಬಿದ್ ಮೋಡ್ ಇದ್ದಾಂಗೆ,
ಬೆಳ್ಳಿ ಬಳಿದ ರೋಡಿದ್ದಂಗೆ,ಮಡಿಕೇರಿಲಿ ಮಂಜೂ...

©Chandrashekara BH,Dec2009
ನಂತರ ಕೊಡಚಾದ್ರಿಯ ರಸ್ತೆ. ತುಂಬಾ ಚೆನ್ನಾಗಿದೆ ರಸ್ತೆ. ಸುತ್ತಲೂ ಮಂಜು ಮುಸುಕಿತ್ತು ಮತ್ತು ದಾರಿಯೆಲ್ಲ ಮಂಜಿನಿಂದ ಮುಚ್ಚಿತ್ತು. ಚಳಿಗಾಳಿ. ಕೊಡಚಾದ್ರಿಯ ಪ್ರವೇಶದ್ವಾರಕ್ಕೆ ೬.೪೫ ಕ್ಕೆ ತಲುಪಿದೆವು.

ಜೀಪಿನವರು ನಮ್ಮ ಗಾಡಿಯನ್ನು ಮೇಲಕ್ಕೆ ಹತ್ತಲು ಬಿಡಗೊಡಲಿಲ್ಲ . ಕಾರಣ, ಅದು ಜೀಪಿನ ರಸ್ತೆ. ಅದು ರಸ್ತೆಯೆಂಬ ಮಾಯಾಲೋಕವಷ್ಟೆ! ರಸ್ತೆಯೆಲ್ಲ ಅಯೋಮಯ. ಕಲ್ಲುಗಳು, ತಗ್ಗು-ದಿಣ್ಣೆಗಳಿಂದ ಕೂಡಿದ್ದ (ಆ ರಸ್ತೆ?!) ಜೀಪಿಗೆ ಮಾತ್ರ ಫೇವರೈಟ್‌ ಎನ್ನಬಹುದು. ಅಲ್ಲಿಯೇ ನಮಗೆ ಸಣ್ಣ ತೊರೆ ಕಾಣಿಸಿತು. ಆ ತೊರೆಯಲ್ಲಿ ಕೊರೆಯುವ ಛಳಿಯಲ್ಲಿ ಕೈಕಾಲು ಮುಖ ಮಾರ್ಜನ ನಡೆಯಿತು. ನಂತರ ಒಂಬತ್ತು ಮತ್ತೊಂದು ಕಿ.ಮೀ. ಚಾರಣಕ್ಕೆ ಹೊರಟೆವು. ಅದು ೭.೦೦ ರ ಸಮಯ.

ಅದೋ! ಅಲ್ಲಿ ಕಂಡಿತು ಪಾತಾಳಗೆರೆ!!!

ಮುಂದುವರೆಯುವುದು...
ಚಿತ್ರ-ಲೇಖನ: ಚಂದ್ರಶೇಖರ ಬಿ.ಎಚ್. ೨೦೦೯

ಶುಕ್ರವಾರ, ಡಿಸೆಂಬರ್ 11, 2009

ಉದಯರವಿಯ ಮೊದಲ ಕಿರಣ..

©Chandrashekara B.H. Photo taken on June2009 at ISEC

ಉದಯರವಿಯ ಮೊದಲ ಕಿರಣ..

ಚುಂಬಿಸಿದೆ ತರುಲತೆಗಳ ಮೇಲಿನ
ಮಿನುಗುತಿರುವ ಇಬ್ಬನಿಯ ಹನಿಗಳನು
ಮೆಲ್ಲನೆ ನಾಚುತಿವೆ ಹಿಮದ ಮಣಿಗಳು
ಹೂ ದಳದಲಿ, ರವಿಯ ಕಿರಣದಾ ಸ್ಪರ್ಶಕೆ

ದಿನಕರನ ಪ್ರೀತಿಯ ಪ್ರಥಮ ಕಿರಣ
ತಂದಿದೆ, ಇಳೆಯ ಜೀವಿಗಳೀಗೆ ಹೊಸ ಚೇತನ
ಬಾನಿನಲ್ಲಿ ಹರಡಿರುವ ಮೇಘಗಳ ನಡುವಿನಲ್ಲಿ,
ತಂಗಾಳಿಯ ಸೊಬಗಿನಲ್ಲಿ ಹಕ್ಕಿಗಳ ಪಯಣ

ಇದನೆಲ್ಲ ಕಂಡು ಮುದದಿಂದ ಹಾಡುತಿದೆ, ನನ್ನ ಮನ
ಓ ರವಿರಾಜನೆ, ನಿನಗೆ ನಮನ, ನೀನೆ ನಮ್ಮ ಬಾಳಿನ
ದಾರಿಯ ದೀವಿಗೆ, ನೀನಲ್ಲದೆ ನಮಗಿನ್ನಾರು
ತೋರುವರು ದಾರಿಯನು, ಆ ಹಾದಿ ಸೇರಿಸುವ ಗುರಿಯನ್ನು.
ಚಂದ್ರಶೇಖರ ಬಿ. ಎಚ್. ೧೪೬೯೧

ಮಂಗಳವಾರ, ಡಿಸೆಂಬರ್ 8, 2009

ತಪ್ಪಿಸಬಹುದೇ?

ಅಪಘಾತಗಳನ್ನು ತಪ್ಪಿಸಬಹುದೇ? (ಸ್ವಲ್ಪಮಟ್ಟಿಗಾದರೂ)

ಬೆಳಗಾದರೆ ಸಾಕು, ದಿನಪತ್ರಿಕೆಯ ಮೊದಲನೇ ಪುಟದಲ್ಲಿಯೇ ಬಸ್ಸು-ಕಾರು ಡಿಕ್ಕಿ, ಲಾರಿ ಮಗುಚಿ ಮೂರು ಜನರ ಸಾವು. ರೈಲು ಅಪಘಾತ. ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರುಗಳು ಅಪಘಾತಗಳಲ್ಲಿ ನುಜ್ಜುಗುಜ್ಜಾಗಿರುವ ಚಿತ್ರಗಳನ್ನು ಕಾಣುತ್ತೇವೆ. ಹೀಗೇಕೆ ಅಪಘಾತಗಳು ಆಗುತ್ತವೆ? ಇದರಲ್ಲಿ ಯಾರ ತಪ್ಪು ಇದೆ? ಯಾರದು ಇಲ್ಲ? ಇತ್ಯಾದಿ ವಿಚಾರಗಳು ಬರುತ್ತವೆ. ಇವುಗಳ ಬಗ್ಗೆ ನನ್ನ ಮನಸ್ಸಿಗೆ ಒಂದಿಷ್ಟು ಅನಿಸಿಕೆಗಳನ್ನು ಹೀಗೆ ಬರೆದಿರುತ್ತೇನೆ.

ಪ್ರಯಾಣಿಸುವಾಗ ಅಪಘಾತಗಳಾಗುವುದು ಸಹಜ. ಆದರೆ, ಅವುಗಳನ್ನು ತಪ್ಪಿಸಬಹುದೇ? ಎಂಬುದು ಮನಸ್ಸಿಗೆ ಬಾರದಿರದು. ನಮ್ಮ ಬಸ್ಸುಗಳಲ್ಲಿ `ಅಪಘಾತಕ್ಕೆ ಅವಸರವೇ ಕಾರಣ', `ನಿಧಾನವೇ ಪ್ರಧಾನ' ಇತ್ಯಾದಿ ಬರೆದಿರುವುದು ಕೇವಲ ವಾಡಿಕೆಯಂತಾಗಿದೆ. ಏಕೆಂದರೆ ಬಸ್ಸು ಚಾಲನೆ ಮಾಡುವವರೂ ಸಹ `ಆನೆ ಸಾಗಿದ್ದೇ ಹಾದಿ' ಎಂಬಂತೆ ವರ್ತಿಸುವುದೂ ಇದೆ.
ಈಗ ಮುಖ್ಯ ವಿಷಯಕ್ಕೆ ಬರೋಣ. ವಾಹನ ಚಾಲಕರಿಗೆ ಕನಿಷ್ಠ ಸಂಚಾರ ನಿಯಮಗಳು ತಿಳಿದಿರಬೇಕು. ಇಲ್ಲವಾದಲ್ಲಿ ಅಪಘಾತಗಳು ಅಧಿಕವಾಗುತ್ತವೆ. ಅದರಲ್ಲೂ ಯುವಕ-ಯುವತಿಯರಿಗೆ ಕಡ್ಡಾಯವಾಗಿ ತಿಳಿದಿರಬೇಕು. ಆದರೆ, ನಮ್ಮಲ್ಲಿ ಲೈಸೆನ್ಸ್ ಸಿಗುವುದೇ ಅಡ್ಡದಾರಿಯಾಗಿರುವಾಗ ಇನ್ನು ವಾಹನಚಾಲನೆ ಅಡ್ಡಾದಿಡ್ಡಿಯಾಗದೆ ಇರುತ್ತದೆಯೇ? ಇದನ್ನು ನಮ್ಮ ಇಂದಿನ ಯುವಜನಾಂಗಕ್ಕೆ ಯಾವ ರೀತಿ ವಿವರಿಸಬೇಕು ಎಂಬುದೇ ಪ್ರಶ್ನೆಯಾಗುತ್ತಿದೆ. ಏಕೆಂದರೆ, ನಮ್ಮಲ್ಲಿ ಕಟ್ಟುನಿಟ್ಟಾದ ಸಂಚಾರನಿಯಮವು ಇಲ್ಲದಿರುವುದು ಅನಿಸುತ್ತದೆ.

ಮಕ್ಕಳಿರುವಾಗಲೇ ಅವರಲ್ಲಿ ಈ ವಿಚಾರಗಳನ್ನು ತುಂಬಬೇಕು. ಏಕೆಂದರೆ ಚಿಕ್ಕಂದಿನಲ್ಲಿ ಸರಿಯಾಗಿ ಕಲಿತದ್ದು ಕೊನೆತನಕ ಇರುತ್ತದೆ ಅಲ್ಲವೆ? ಇಂದಿನ ಯುವಜನಾಂಗಕ್ಕೆ (ಅದರಲ್ಲೂ ಓದಿದ ಮಂದಿಗೆ) ತಾವು ಮಾಡಿದ್ದೇ ಸರಿ ಎಂಬ ಧೋರಣೆಯೂ ಸಹ ಅಪಘಾತಗಳಿಗೆ ಕಾರಣವಾಗುತ್ತವೆ. ಅಲ್ಲದೆ ಮದ್ಯಪಾನ, ತಂಬಾಕು ಚಟ, ಗುಟ್ಕಾ ಮುಂತಾದವೂ ಸಹ ಪಾಲ್ಗೊಳ್ಳುತ್ತವೆ. ಕೆಲವರು ಈ ವಿಷಯಗಳಲ್ಲಿ ಸರಿಯಾಗಿಯೇ ಇದ್ದರೂ ಸಹ ವಾಹನಚಾಲನೆ ಮಾಡುವಾಗ ಅಪಘಾತಗಳು ಸಂಭವಿಸುತ್ತವೆ. ಹೀಗೇಕೆ?

ಏಕೆಂದರೆ, ಕೆಲವರು ತಾವು ಹೋಗಬೇಕಾದ ಸ್ಥಳವನ್ನು ಮೊದಲೇ ಯೋಚಿಸದೇ ದಾರಿಯ ಮಧ್ಯದಲ್ಲಿ ಅದೂ ದಟ್ಟ ವಾಹನ ಸಂಚಾರಗಳಿರುವೆಡೆ ಬಲಗಡೆಗೆ ಹೋಗಬೇಕಿದ್ದವರು ಎಡಗಡೆ ಸೂಚನಾಫಲಕ (ಲೆಫ಼್ಟ್ ಇಂಡಿಕೇಟರ್) ಉಪಯೋಗಿಸುವುದು, ಅಥವಾ ತಕ್ಷಣ ವಾಹನ ನಿಲ್ಲಿಸುವುದು (ರಸ್ತೆಯ ಮಧ್ಯದಲ್ಲಿಯೇ) ಅಥವಾ ತಿರುವಿನಲ್ಲಿ ಬಂದು ಎಲ್ಲಿ ಹೋಗಬೇಕೆಂದು ಯೋಚಿಸುವುದು ಇತ್ಯಾದಿ. ಇದರಿಂದ ಹಿಂದಿನಿಂದ/ಮುಂದಿನಿಂದ ಬರುತ್ತಿರುವ ವಾಹನಗಳವರಿಗೆ ಗೊಂದಲವುಂಟಾಗಿ ಅಪಘಾತಗಳು ಆಗುತ್ತವೆ. ಒಂದು ಬೈಕಿನಲ್ಲಿ ಮೂವರು, ಸ್ಕೂಟರಿನಲ್ಲಂತೂ ಮನೆಮಂದಿಯೆಲ್ಲ ಕುಳಿತು ಪ್ರಯಾಣಿಸುವುದು ಮತ್ತು ಇವೆಲ್ಲಕ್ಕಿಂತಲೂ ಹೆಚ್ಚಾಗಿ ವೇಗವಾಗಿ ಮುನ್ನುಗ್ಗುವುದು. ಆಟೋ, ಲಾರಿಯವರಿಗಂತೂ ರಸ್ತೆಯೆಲ್ಲ ತಮ್ಮ ರಾಜಬೀದಿಗಳೇ ಎಂಬಂತೆ ವರ್ತಿಸುವುದೂ ಒಂದು ಗಮನಿಸಬೇಕಾದ ಅಂಶ ('ಆಟೋ ರಾಜ, ರಸ್ತೆರಾಜ, ಇತ್ಯಾದಿ ಬರಹಗಳನ್ನು ಆಟೋ/ಲಾರಿಗಳ ಮೇಲೆ ಕಾಣಬಹುದು). ಕೆಲವರಿಗಂತೂ ಏನೋ ಧಾವಂತ. ಇವರುಗಳಿಗೆ ತಾವು ಎಷ್ಟು ಕರ್ತವ್ಯ ನಿರತರು ಎಂಬುದು ಎಲ್ಲರಿಗೂ ತಿಳಿಯಲಿ ಎಂಬಂತೆ ಜೋರಾಗಿ ಹೋಗುವುದು. ಕೊನೆಗೆ ಅಲ್ಲೆಲ್ಲೋ ಮೂಲೆ ಅಂಗಡಿಯಲ್ಲಿ ಪಾನ್ ಮಸಾಲ, ಗುಟ್ಕಾ ಅಥವಾ ಸಿಗರೇಟ್ ಕೊಂಡುಕೊಳ್ಳುವುದು. ಕೆಲವರಿಗೆ ಸಿಗ್ನಲ್ಲುಗಳಲ್ಲಿಯೇ ಸಿಕ್ಕಸಿಕ್ಕ ಸಂದಿಗೊಂದಿಗಳಲ್ಲಿ ನುಗ್ಗುವುದೆಂದರೆ ಬಹಳ ಪ್ರಿಯವೆನಿಸುವಂತಿರುತ್ತಾರೆ. ಅಲ್ಲದೇ ಅನಾವಶ್ಯಕವಾಗಿ ದಾರಿಯಲ್ಲಿ (ವಾಹನ ಸಂಚಾರ ವಿರಳವಾಗಿದ್ದರೂ ಸಹ) ಜನರ ನಡುವೆಯೇ ಜೋರಾಗಿ/ಕರ್ಕಶವಾಗಿ ಹಾರ್ನ್ ಮಾಡುತ್ತಾ ಸಾಗುವುದು. ಇದರಿಂದ ಪಾದಚಾರಿ/ವಾಹನಸಂಚಾರಿ ಗೊಂದಲಕ್ಕೀಡಾಗಿ ಅಪಘಾತಗಳು ಆಗುವುದು ಸಾಮಾನ್ಯವಾಗಿದೆ.

ಇತ್ತೀಚೆಗಂತೂ ಮೊಬೈಲು ಹಾವಳಿಯಿಂದಾಗಿ ವಾಹನ ಚಲಾಯಿಸುತ್ತಾ, ಒಂದು ಕಡೆಯಲ್ಲಿ ಕತ್ತನ್ನು ವಾಲಿಸಿಕೊಂಡು ಮಾತನಾಡುತ್ತಾ ಸಾಗುವುದು. ಇದರಿಂದ ಎದುರು ಅಥವಾ ಪಕ್ಕದಲ್ಲಿ ಬರುವ ಜನರಿಗೋ, ವಾಹನಗಳಿಗೋ ಅಥವಾ ರಸ್ತೆಯಲ್ಲಿರಬಹುದಾದ ಹಳ್ಳಕ್ಕೋ ಬೀಳುವುದು ಸಹಜ. ಹಲವು ಅಪಘಾತಗಳು ಮೊಬೈಲು ಗೀಳಿನಿಂದಾಗಿ (ರೈಲ್ವೆ ಹಳಿದಾಟುವಾಗಲೂ ಮೊಬೈಲು ಗುಂಗಿನಿದಾಗಿ ಅಪಘಾತಗಳಾಗಿವೆಯಂತೆ) ಆಗುವುದು ನಿತ್ಯದ ನೋಟವಾಗಿದೆಯೆಂದ್ರೆ ಅಚ್ಚರಿಯಿಲ್ಲ.

ಹೀಗಾಗಿ, ಜನರೇ ಇವನ್ನೆಲ್ಲ ಅರಿತು ರಸ್ತೆಯ ನಿಯಮಗಳನ್ನು ಕಿಂಚಿತ್ತಾದರೂ ಪಾಲಿಸಿದ್ರೆ ಹಾಗೂ ವಾಹನ ಸವಾರರಿಗೆ ಸ್ವಲ್ಪ ಸಂಯಮವಿದ್ದರೆ ಈಗೀಗ ಆಗುತ್ತಿರುವ ವಾಹನಾಪಘಾತಗಳನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಬಹುದು, ಅಲ್ಲವೆ?

ಯಾಕೆಂದರೆ, Accident first occurs in mind and then on road. ನೆನಪಿರಲಿ.

ಚಂದ್ರಶೇಖರ ಬಿ.ಎಚ್.೦೮.೧೨.೨೦೦೯

ಶುಕ್ರವಾರ, ಡಿಸೆಂಬರ್ 4, 2009

ಸ್ನೇಹ: ಉಳಿಸಿಕೊಳುವುದೋ, ಬಿಡುವುದೋ??

ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ
ನಾನೂ ಸ್ನೇಹ ಜೀವಿ, ನೀನೂ ಸ್ನೇಹ ಜೀವಿ....
***
ಸ್ನೇಹದ ಕಡಲಲ್ಲಿ, ನೆನಪಿನ ದೋಣೀಯಲಿ...
***
ನಾನೇನು, ಅವನೇನು, ...
ಒಂದೆ ಎಲ್ಲರೂ, ಬಡ ಜನರೂ, ಬಲ್ಲಿದರೂ...
***
ಇಂತಹ ಹಾಡುಗಳನ್ನು ಕೇಳಿಯೇ ಇರುತ್ತೇವೆ. ಹಾಗಿದ್ದರೆ ಸ್ನೇಹ ಎಂದರೆ...ಏನು? ಇಬ್ಬರು ವ್ಯಕ್ತಿಗಳ ನಡುವಿನ ಆತ್ಮೀಯ ಸಂಬಂಧ ಎನ್ನಬಹುದೆ? ಅದನ್ನು ಉಳಿಸಿಕೊಳ್ಳುವುದಾದರು ಹೇಗೆ? ಬಾಲ್ಯದ ಸ್ನೇಹವನ್ನು ಉಳಿಸಿಕೊಳ್ಳುವವರು ಅಥವಾ ಉಳಿಸಿಕೊಂಡು ಹೋಗುವುದು/ಹೋಗುವವರು ತುಂಬಾ ಅಪರೂಪ. ಅದಕ್ಕೆ ಕಾರಣಗಳು ಹಲವಾರು: ಆಸ್ತಿ, ಓದು, ಕೆಲಸ, ಇತ್ಯಾದಿ. ಆದರೆ, ನಿಜವಾದ ಸ್ನೇಹದಲ್ಲಿ ಯಾವುದೇ ಭಾಷೆ, ಜಾತಿ, ಅಂತಸ್ತು, ವಿದ್ಯೆ, ಹೆಣ್ಣು/ಗಂಡು ಎಂದು ಯಾವುದೂ ಗಣನೆಗೆ ಬರುವುದಿಲ್ಲ. ಇಲ್ಲಿ ಅವೆಲ್ಲ ನಗಣ್ಯ. ಸ್ನೇಹವೊಂದೇ ಗಣ್ಯ.

ಪುರಾಣ ಪುರುಷರಾದ ಇವರೆಲ್ಲ ಎಂತಹ ಅಪ್ರತಿಮ ಸ್ನೇಹಿತರಾಗಿದ್ದರು. ಶ್ರೀರಾಮ-ವಿಭೀಷಣ, ಸುಗ್ರೀವ, ಹನುಮಂತ, ಶ್ರೀಕೃಷ್ಣ-ಸುಧಾಮ, ದುರ್ಯೋಧನ-ಕರ್ಣ, ಮುಂತಾದವರು. ಭೋಜರಾಜ-ಕಾಳಿದಾಸ, ಶಾಕುಂತಲೆ-ಅನಸೂಯ, ಹೀಗೆ ಇವರೆಲ್ಲ ಸ್ನೇಹಕ್ಕಾಗಿ ಪ್ರಾಣಾರ್ಪಣೆ ಮಾಡುವಷ್ಟು ಗಾಢಸ್ನೇಹ.

ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಯ ಪುಟಗಳನ್ನು ತಿರುವಿದರೆ ಸಾಕು, ಎಲ್ಲೋ ಒಂದು ಕಾಲಂನಲ್ಲಿ ಸ್ನೇಹಿತರಿಂದಲೇ ದರೋಡೆ, ಕೊಲೆ, ಅಪಹರಣ ಎಂದೆಲ್ಲಾ ಇರುತ್ತದೆ. ಇದಕ್ಕೆ ಕಾರಣಗಳು ಹಣ, ಒಡವೆ, ಮತ್ಯಾವುದೋ ಅತಿರೇಕದ ಆಮಿಷ ಹಾಗೂ ಇನ್ನೂ ಏನೇನೋ ಇರುತ್ತದೆ. ಕೆಲವೊಮ್ಮೆ ಇವು ಬೆಳಕಿಗೆ ಬರದೇ ಇರಬಹುದು. ಅದರ ವಿಚಾರ ಸದ್ಯ ನಮಗೆ ಬೇಡ.

ಬಾಲ್ಯದ ಗೆಳತನವನ್ನು, ಉದ್ಯೋಗ ಸ್ಥಳದಲ್ಲಿನ ಸ್ನೇಹಿತರು, ಹೊಸ ಹೊಸ ಮಿತ್ರರು ಇವರೆಲ್ಲರ ಆತ್ಮೀಯ ಗೆಳೆತನ ಉಳಿಸಿಕೊಂಡು ಹೋಗುವುದು ಕೆಲವೊಮ್ಮೆ ಸಾಧ್ಯವಾಗದೇ ಇರಬಹುದು. ಅಥವಾ ಸಾಧ್ಯವಿದ್ದರೂ ಸ್ನೇಹವು ಮುಂದುವರೆಯದೆ ಹಾಗೆಯೇ ಮರೆಯಾಗಲೂ ಬಹುದು! ಇಂತಹದನ್ನು ಆದಷ್ಟು ದೂರವಿಡಲು ಯಾವುದಾದದರೂ ಉಪಾಯಗಳಿವೆಯೆ? ಬಾಲ್ಯದ ಗೆಳೆತನ ಅಥವಾ ಆಮೇಲಿನ ಗೆಳೆತನ ಇವೆಲ್ಲ ಕಾಲಕ್ರಮೇಣ ಮಂಕಾಗುತ್ತಾ ಮರೆಯಾಗಲು ಏನು ಕಾರಣ? ಯಾರು ಕಾರಣ? ಎಂದೆಲ್ಲ ಸ್ವಲ್ಪ ಸಂಶೋಧನೆ ಮಾಡಿ ಶೋಧಿಸಿದರೆ ಹೇಗೆ?

ಗೆಳೆತನಗಳು ಬಿದ್ದುಹೋಗಲು, ಮರೆತುಹೋಗಲು ಕಾರಣಗಳು ಹೀಗೂ ಇರಬಹುದು.

ಇಬ್ಬರು ಸ್ನೇಹಿತ(ತೆಯ)ರ ಆಲೋಚನೆ: ಒಬ್ಬರಿಗೊಬ್ಬರು ಅವನಿಗೆ/ಇವನಿಗೆ/ಅವಳಿಗೆ/ಇವಳಿಗೆ ಬಿಡುವಿಲ್ಲದಿರಬಹುದು. ಒಂದು ವೇಳೆ ಭೇಟಿ ಮಾಡಿದರೆ ಆ ಸ್ನೇಹಿತ/ತೆಗೆ ತೊಂದರೆಯಾಗಬಹುದು.

ಕಾಲ ಕಳೆದಂತೆ: ಇವನು/ಇವಳು ಯೋಚನೆ ಅವನು/ಅವಳು ಸಂಪರ್ಕಿಸಲಿ ಎಂದು ಕಾಯುವುದು.

ಮತ್ತಷ್ಟು ಕಾಲ ಸವೆದಂತೆ: ಇವನು/ಇವಳು ಹೀಗೆ ಯೋಚಿಸಬಹುದು: ನಾನೇ ಏಕೆ ಮೊದಲು ಸಂಪರ್ಕಿಸಬೇಕು. ಅವನು/ಅವಳು ಸಂಪರ್ಕಿಸಲಿ ಎಂದು.

ಹೀಗಿದ್ದ ಸ್ನೇಹ ನಿಧಾನವಾಗಿ ಮರೆಯಾಗಿ ಹಗೆ ಸಾಧಿಸುವ ಮಟ್ಟಕ್ಕೆ ಹೋಗುವುದು.

ಕೆಲವು ವರ್ಷಗಳ ನಂತರ ಸ್ಮರಣ ಶಕ್ತಿ ಕುಂದುತ್ತಾ ಗೆಳೆಯ/ಗೆಳತಿಯ ರ ನೆನಪು ಮಸುಕಾಗುವುದು. ಹೀಗೆಯೇ ಸಂಪೂರ್ಣವಾಗಿ ಸ್ನೇಹವೇ ಮರೆಯುತ್ತಾ, ಮರೆಯುತ್ತಾ ಸ್ನೇಹವು ಕೊನೆಗೊಳ್ಳುವುದು.

ಸ್ನೇಹ ಎಂಬುದಕ್ಕೆ ನಾನಾ ಅರ್ಥಗಳೂ ಇದೆ. ಅಮರಕೋಶದಲ್ಲಿ ಈ ಪದಕ್ಕೆ - ಎಣ್ಣೆ, ಜಿಡ್ಡು, ಬಂಗಾರ ಎಂಬರ್ಥವೂ ಇದೆ (ಅಮರಸಿಂಹನ ಅಮರಕೋಶದಲ್ಲಿ ಸ್ವರ್ಣ ಎಂಬುದನ್ನು ಓದಿದ್ದ ನೆನಪು) ಹಾಗಿದ್ದಮೇಲೆ ಇಂತಹ `ಸ್ನೇಹ'ವನ್ನು ಯಾಕೆ ಮರೆಯಬೇಕು?

ಗೆಳೆತನ ಎಂದೆಂದಿಗೂ ಇರಬೇಕೆಂದರೆ ಇದು ಪ್ರತಿಯೊಬ್ಬ ಸ್ನೇಹಿತ/ತೆಗೂ ನೆನಪಿನಲ್ಲಿದ್ದರೆ ಸಾಕಲ್ಲವೇ?

"Don't walk behind me, I may not lead. Don't walk in front of me, I may not follow. Just walk beside me and be my friend." - Albert Camus

-ಚಂದ್ರಶೇಖರ ಬಿ.ಎಚ್.
೦೪.೧೨.೨೦೦೯