ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ
ನಾನೂ ಸ್ನೇಹ ಜೀವಿ, ನೀನೂ ಸ್ನೇಹ ಜೀವಿ....
***
ಸ್ನೇಹದ ಕಡಲಲ್ಲಿ, ನೆನಪಿನ ದೋಣೀಯಲಿ...
***
ನಾನೇನು, ಅವನೇನು, ...
ಒಂದೆ ಎಲ್ಲರೂ, ಬಡ ಜನರೂ, ಬಲ್ಲಿದರೂ...
***
ಇಂತಹ ಹಾಡುಗಳನ್ನು ಕೇಳಿಯೇ ಇರುತ್ತೇವೆ. ಹಾಗಿದ್ದರೆ ಸ್ನೇಹ ಎಂದರೆ...ಏನು? ಇಬ್ಬರು ವ್ಯಕ್ತಿಗಳ ನಡುವಿನ ಆತ್ಮೀಯ ಸಂಬಂಧ ಎನ್ನಬಹುದೆ? ಅದನ್ನು ಉಳಿಸಿಕೊಳ್ಳುವುದಾದರು ಹೇಗೆ? ಬಾಲ್ಯದ ಸ್ನೇಹವನ್ನು ಉಳಿಸಿಕೊಳ್ಳುವವರು ಅಥವಾ ಉಳಿಸಿಕೊಂಡು ಹೋಗುವುದು/ಹೋಗುವವರು ತುಂಬಾ ಅಪರೂಪ. ಅದಕ್ಕೆ ಕಾರಣಗಳು ಹಲವಾರು: ಆಸ್ತಿ, ಓದು, ಕೆಲಸ, ಇತ್ಯಾದಿ. ಆದರೆ, ನಿಜವಾದ ಸ್ನೇಹದಲ್ಲಿ ಯಾವುದೇ ಭಾಷೆ, ಜಾತಿ, ಅಂತಸ್ತು, ವಿದ್ಯೆ, ಹೆಣ್ಣು/ಗಂಡು ಎಂದು ಯಾವುದೂ ಗಣನೆಗೆ ಬರುವುದಿಲ್ಲ. ಇಲ್ಲಿ ಅವೆಲ್ಲ ನಗಣ್ಯ. ಸ್ನೇಹವೊಂದೇ ಗಣ್ಯ.
ಪುರಾಣ ಪುರುಷರಾದ ಇವರೆಲ್ಲ ಎಂತಹ ಅಪ್ರತಿಮ ಸ್ನೇಹಿತರಾಗಿದ್ದರು. ಶ್ರೀರಾಮ-ವಿಭೀಷಣ, ಸುಗ್ರೀವ, ಹನುಮಂತ, ಶ್ರೀಕೃಷ್ಣ-ಸುಧಾಮ, ದುರ್ಯೋಧನ-ಕರ್ಣ, ಮುಂತಾದವರು. ಭೋಜರಾಜ-ಕಾಳಿದಾಸ, ಶಾಕುಂತಲೆ-ಅನಸೂಯ, ಹೀಗೆ ಇವರೆಲ್ಲ ಸ್ನೇಹಕ್ಕಾಗಿ ಪ್ರಾಣಾರ್ಪಣೆ ಮಾಡುವಷ್ಟು ಗಾಢಸ್ನೇಹ.
ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಯ ಪುಟಗಳನ್ನು ತಿರುವಿದರೆ ಸಾಕು, ಎಲ್ಲೋ ಒಂದು ಕಾಲಂನಲ್ಲಿ ಸ್ನೇಹಿತರಿಂದಲೇ ದರೋಡೆ, ಕೊಲೆ, ಅಪಹರಣ ಎಂದೆಲ್ಲಾ ಇರುತ್ತದೆ. ಇದಕ್ಕೆ ಕಾರಣಗಳು ಹಣ, ಒಡವೆ, ಮತ್ಯಾವುದೋ ಅತಿರೇಕದ ಆಮಿಷ ಹಾಗೂ ಇನ್ನೂ ಏನೇನೋ ಇರುತ್ತದೆ. ಕೆಲವೊಮ್ಮೆ ಇವು ಬೆಳಕಿಗೆ ಬರದೇ ಇರಬಹುದು. ಅದರ ವಿಚಾರ ಸದ್ಯ ನಮಗೆ ಬೇಡ.
ಬಾಲ್ಯದ ಗೆಳತನವನ್ನು, ಉದ್ಯೋಗ ಸ್ಥಳದಲ್ಲಿನ ಸ್ನೇಹಿತರು, ಹೊಸ ಹೊಸ ಮಿತ್ರರು ಇವರೆಲ್ಲರ ಆತ್ಮೀಯ ಗೆಳೆತನ ಉಳಿಸಿಕೊಂಡು ಹೋಗುವುದು ಕೆಲವೊಮ್ಮೆ ಸಾಧ್ಯವಾಗದೇ ಇರಬಹುದು. ಅಥವಾ ಸಾಧ್ಯವಿದ್ದರೂ ಸ್ನೇಹವು ಮುಂದುವರೆಯದೆ ಹಾಗೆಯೇ ಮರೆಯಾಗಲೂ ಬಹುದು! ಇಂತಹದನ್ನು ಆದಷ್ಟು ದೂರವಿಡಲು ಯಾವುದಾದದರೂ ಉಪಾಯಗಳಿವೆಯೆ? ಬಾಲ್ಯದ ಗೆಳೆತನ ಅಥವಾ ಆಮೇಲಿನ ಗೆಳೆತನ ಇವೆಲ್ಲ ಕಾಲಕ್ರಮೇಣ ಮಂಕಾಗುತ್ತಾ ಮರೆಯಾಗಲು ಏನು ಕಾರಣ? ಯಾರು ಕಾರಣ? ಎಂದೆಲ್ಲ ಸ್ವಲ್ಪ ಸಂಶೋಧನೆ ಮಾಡಿ ಶೋಧಿಸಿದರೆ ಹೇಗೆ?
ಗೆಳೆತನಗಳು ಬಿದ್ದುಹೋಗಲು, ಮರೆತುಹೋಗಲು ಕಾರಣಗಳು ಹೀಗೂ ಇರಬಹುದು.
ಇಬ್ಬರು ಸ್ನೇಹಿತ(ತೆಯ)ರ ಆಲೋಚನೆ: ಒಬ್ಬರಿಗೊಬ್ಬರು ಅವನಿಗೆ/ಇವನಿಗೆ/ಅವಳಿಗೆ/ಇವಳಿಗೆ ಬಿಡುವಿಲ್ಲದಿರಬಹುದು. ಒಂದು ವೇಳೆ ಭೇಟಿ ಮಾಡಿದರೆ ಆ ಸ್ನೇಹಿತ/ತೆಗೆ ತೊಂದರೆಯಾಗಬಹುದು.
ಕಾಲ ಕಳೆದಂತೆ: ಇವನು/ಇವಳು ಯೋಚನೆ ಅವನು/ಅವಳು ಸಂಪರ್ಕಿಸಲಿ ಎಂದು ಕಾಯುವುದು.
ಮತ್ತಷ್ಟು ಕಾಲ ಸವೆದಂತೆ: ಇವನು/ಇವಳು ಹೀಗೆ ಯೋಚಿಸಬಹುದು: ನಾನೇ ಏಕೆ ಮೊದಲು ಸಂಪರ್ಕಿಸಬೇಕು. ಅವನು/ಅವಳು ಸಂಪರ್ಕಿಸಲಿ ಎಂದು.
ಹೀಗಿದ್ದ ಸ್ನೇಹ ನಿಧಾನವಾಗಿ ಮರೆಯಾಗಿ ಹಗೆ ಸಾಧಿಸುವ ಮಟ್ಟಕ್ಕೆ ಹೋಗುವುದು.
ಕೆಲವು ವರ್ಷಗಳ ನಂತರ ಸ್ಮರಣ ಶಕ್ತಿ ಕುಂದುತ್ತಾ ಗೆಳೆಯ/ಗೆಳತಿಯ ರ ನೆನಪು ಮಸುಕಾಗುವುದು. ಹೀಗೆಯೇ ಸಂಪೂರ್ಣವಾಗಿ ಸ್ನೇಹವೇ ಮರೆಯುತ್ತಾ, ಮರೆಯುತ್ತಾ ಸ್ನೇಹವು ಕೊನೆಗೊಳ್ಳುವುದು.
ಸ್ನೇಹ ಎಂಬುದಕ್ಕೆ ನಾನಾ ಅರ್ಥಗಳೂ ಇದೆ. ಅಮರಕೋಶದಲ್ಲಿ ಈ ಪದಕ್ಕೆ - ಎಣ್ಣೆ, ಜಿಡ್ಡು, ಬಂಗಾರ ಎಂಬರ್ಥವೂ ಇದೆ (ಅಮರಸಿಂಹನ ಅಮರಕೋಶದಲ್ಲಿ ಸ್ವರ್ಣ ಎಂಬುದನ್ನು ಓದಿದ್ದ ನೆನಪು) ಹಾಗಿದ್ದಮೇಲೆ ಇಂತಹ `ಸ್ನೇಹ'ವನ್ನು ಯಾಕೆ ಮರೆಯಬೇಕು?
ಗೆಳೆತನ ಎಂದೆಂದಿಗೂ ಇರಬೇಕೆಂದರೆ ಇದು ಪ್ರತಿಯೊಬ್ಬ ಸ್ನೇಹಿತ/ತೆಗೂ ನೆನಪಿನಲ್ಲಿದ್ದರೆ ಸಾಕಲ್ಲವೇ?
"Don't walk behind me, I may not lead. Don't walk in front of me, I may not follow. Just walk beside me and be my friend." - Albert Camus
-ಚಂದ್ರಶೇಖರ ಬಿ.ಎಚ್.
೦೪.೧೨.೨೦೦೯