ಬುಧವಾರ, ಏಪ್ರಿಲ್ 21, 2010

ಏನೆಂದು ಹೇಳಲೀ, ನಾನರಿಯೆ!


ಏನೆಂದು ಹೇಳಲೀ, ನಾನರಿಯೆ!

ರುಂಡವಿಲ್ಲ, ಮುಂಡವಿಲ್ಲ ನೀನೇಕೆ, ಎಣಿಸಲೇಕೆ?
ಮರುಗಲೇಕೆ? ಅವೆಲ್ಲವೂ ಇದ್ದಿತು,
ಒಂದು ಕಾಲದಲಿ - ಇದೋ! ಹೀಗಿದ್ದರಬಹುದೆ?
ಮನುಜನ ಬಯಕೆ, ನಾ ಹೇಳಬೇಕೆ?

ರಾಜ-ರಾಜ್ಯದ ವಿಸ್ತಾರದಲಿ ನೊಂದವರೆಷ್ಟೋ,
ಬೆಂದವರೆಷ್ಟೋ ಜೀವಿಗಳು ಬಲ್ಲವರಾರು?
ಮತ-ಧರ್ಮದ ಘನತೆಗೂ, ಜನತೆಗೂ ಹೀಗೆ ಮಾಡುವರೆಂದು
ಕಣ್ಣಿಗೆ ನಾ ಜೀವಂತ ಕಂಡೆನೇನೋ, ನಾನರಿಯೆ?

ನನಗೊಂದು ಕಣ್ಣಿಲ್ಲದಿದ್ದರೂ,
ಕೈ ಇರದಿದ್ದರೂ, ನಷ್ಟವಿಲ್ಲ!
ಮತ್ತೊಬ್ಬರೆರಡು ಕಣ್-ಕಿವಿ-ಕೈ-ಕಾಲ್,
ಇರಬಾರದೆಂದು ಹೀಗೆ ಮಾಡಿದರೋ? ನಾನರಿಯೇ?

ಕೊನೆಗೊಬ್ಬ ರುಂಡವೇಕೆ, ಮುಂಡವೇಕೆ ಈ ಸಿಂಗಾರಿಗೆ?
ಎಂದೆನ್ನ ರುಂಡ ಮುಂಡ ಚೆಂಡಾಡಿ ಹೋದನಲ್ಲಾ??
ಸುಂದರವಾದದ್ದು ತೊಂದರೆಗೆ ಎಂದೆಂದೂ ಬಗೆದು
ಹೀಗೆ ಮಾಡಿದರೋ? ನಾನರಿಯೇ!

ಸದ್ಯ, ಕುಳಿತ ಭಂಗಿಯಲ್ಲಿಯೇ ನಾನಿರುವೆನೆಂಬ ಸಂತಸ
ಹೀಗಾದರೂ ನನ್ನ ನೋಡ್ವರಲ್ಲಾ ಹೃದಯವುಳ್ಳವರು!
ಇಟ್ಟಿಗೆ ಗಾರೆಯಂತೆ ಈ ಬದುಕು, ಒಂದಕೊಂದು
ಹೊಂದಿಕೊಂಡು ಇರಲೆಂದೆ ಹೀಗೆ ಬಿಟ್ಟರೋ, ನಾನರಿಯೆ!

ಮನದ ನೆನಪುಗಳು ಮಾಸಲು, ಅದುವೇ ಪೀಠವಾಗಲು,
ಕಷ್ಟ-ನಷ್ಟ ಬದುಕು, ಹೊಂದಿಕೊಂಡು ಇದಕು, ಎದಕು!
ಇರುವಾಗ ಎದೆಯನ್ನೇ ಬಗೆದರಲ್ಲೋ ಪ್ರೀತಿಯಿಲ್ಲದವರು,
ಹೀಗೆಂದು ಹೇಳಬೇಕೋ ಬೇಡವೋ? ನಾನರಿಯೆ!

[`ಮಯೂರ' ಮಾಸಪತ್ರಿಕೆ: ಅಕ್ಟೋಬರ್ ೨೦೦೯ ರ ಕಲ್ಪನೆ ವಿಭಾಗಕ್ಕೆ ಬರೆದಿದ್ದ, ಆಯ್ಕೆಯಾಗದ ಬರಹ]

10 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಮಯೂರದಲ್ಲಿ ಪ್ರಕಟವಾಗಲಿಲ್ಲವೆ೦ದು ಚಿ೦ತೆ ಬೇಡ, ಕವನ ಚಿತ್ರಕ್ಕೆ ಹೊ೦ದಿಕೆಯಾಗುತ್ತದೆ. ಚೆನ್ನಾಗಿದೆ. ಹೀಗೆ ಅ೦ದವಿರುವ ಎಲ್ಲವನ್ನೂ ವಿರೂಪ ಗೊಳಿಸುವ ಪ್ರವೃತ್ತಿ ಹಿ೦ದೆಯೂ ಇತ್ತು, ಇ೦ದೂ ಇದೆ. ಅದು ಎ೦ದು ಇಲ್ಲವಾಗುವುದೋ ನಾನರಿಯೆ!

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ಸುಂದರ ಕವನ ಸರ್
ಕೆಲವೊಮ್ಮೆ ಪತ್ರಿಕೆಗಳು ಕಳಪೆ ಬರಹಗಳನ್ನೂ ಹಾಕುತ್ತವೆ
ಆದರೆ ಉತ್ತಮ ಬರಹಗಳನ್ನೂ ನಿರ್ಲಕ್ಷಿಸುತ್ತವೆ
ಸುಂದರ ಕವನ

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ನಿಮ್ಮ ಪ್ರೋತ್ಸಾಹದ ನುಡಿಗಳು ಮತ್ತಷ್ಟು ಬರೆಯು ಹಂಬಲ ಹುಟ್ಟುಹಾಕುತ್ತಿದೆ. ಪ್ರಕಟವಾಗಿಲ್ಲ ಎಂಬ ಬೇಸರ ಆ ಒಂದು ತಿಂಗಳ ನಂತರದ ಕ್ಷಣಕ್ಕಾಗಿತ್ತು. ಈಗಿಲ್ಲ.

ವಿರೂಪಗೊಳಿಸಿವ ಪ್ರವೃತ್ತಿಗೆ ಕೊನೆಯೆಂಬುದಿಲ್ಲ ಎಂದು ನನ್ನ ಅನಿಸಿಕೆ.

ಹೀಗೆಯೆ ಬರುತ್ತಿರಿ.
ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಗುರು ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಪತ್ರಿಕೆಯಲ್ಲಿ ಬರಲಿಲ್ಲ ಎಂಬ ಬೇಸರವಿಲ್ಲ. ನಿಮ್ಮ ಉತ್ತೇಜಕ ನುಡಿಗಳಿಗೆ ವಂದನೆಗಳು.
ಸ್ನೇಹದಿಂದ,

Dr.D.T.Krishna Murthy. ಹೇಳಿದರು...

ವಿಘ್ನ ಸಂತೋಷಿಗಳು !ಸುಂದರವಾದದ್ದನ್ನು ಸಹಿಸದವರು .ಇಂತಹ ವಿಕೃತ ಮನಸ್ಸಿನವರ ವಿಶ್ವ ರೂಪದ ಬಗ್ಗೆ ಹುಡುಕುತ್ತ ಹೋದಂತೆ ನಿಮಗೆ ಇನ್ನಷ್ಟು ಪುರಾವೆಗಳು ದೊರಕಬಹುದು.ಕವನ ಸುಂದರವಾಗಿದೆ.ಬೇಸರ ಬೇಡ .ಪ್ರಯತ್ನ ಜಾರಿಯಲ್ಲಿರಲಿ.ನನ್ನ ಬ್ಲಾಗಿಗೆ ಭೇಟಿಕೊಡಿ.

shivu.k ಹೇಳಿದರು...

ಸರ್,

ಪತ್ರಿಕೆಗಳಲ್ಲಿ ಪ್ರಕಟವಾಗಲಿಲ್ಲವೆಂದು ಚಿಂತಿಸಬೇಡಿ. ಅದು ಯಾಕೆ ಪ್ರಕಟವಾಗುವುದಿಲ್ಲವೆನ್ನುವುದನ್ನು ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ.

ಒಂದು ಚೆಂದವಾದ ಕೃತಿ ಹೀಗೆ ವಿರೂಪಗೊಂಡಾಗ ಬೇಸರವಾಗುತ್ತದೆ. ಅದಕ್ಕೆ ನೀವು ಒಂದು ಚೆನ್ನಾದ ಕವನವನ್ನು ಬರೆದಿದ್ದೀರಿ...

ಸೀತಾರಾಮ. ಕೆ. / SITARAM.K ಹೇಳಿದರು...

ಭಿನ್ನ ವಿಗ್ರಹದ ಸುತ್ತ ವಿಕೃತ ಮನಗಳ ಧಾಳಿ ಚಿತ್ರಕ್ಕೆ ಹೊ೦ದಿಕೆಯಾಗುವ೦ತೆ ಹೊಸೆದಿದ್ದಿರಾ... ಸು೦ದರ ಕವನ.

ಕ್ಷಣ... ಚಿಂತನೆ... ಹೇಳಿದರು...

ಡಾ. ಕೃಷ್ಣಮೂರ್ತಿಯವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.
ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ, ಹೌದು, ವಿಘ್ನಸಂತೋಷಿಗಳ ಮನಸ್ಸೇ ಹಾಗೆ. ಇರಲಿ, ಕವನ ಮೆಚ್ಚಿಕೊಂಡಿದ್ದೀರಿ. ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಸೀತಾರಾಮರೆ, ಹೊಂದಾಣಿಕೆಯೇ ಜೀವನವಲ್ಲವೇ? ಅದಕ್ಕೆ ವಿಘ್ನಭಂಜಕರನ್ನೂ ನಮ್ಮ ಇತಿಹಾಸ ಪುಸ್ತಕಗಳಲ್ಲಿ ಹೆಸರಿಸಿದ್ದಾರೆ.. ಕವನ ಮೆಚ್ಚಿಕೊಂಡಿದದಕ್ಕೆ,
ಧನ್ಯವಾದಗಳು.