ಸೋಮವಾರ, ನವೆಂಬರ್ 8, 2010

ಮನಸು, ಕಣ್ಣು, ಕಿವಿ, ಹೃದಯ ಎಚ್ಚರವಿರಲಿ...

"Be civil to all; sociable to many; familiar with few; friend to one; enemy to none."
- Benjamin Franklin

ಇದು ಹೇಳುವುದಕ್ಕೆ ಅಥವಾ ಕೇಳುವುದಕ್ಕೆ ಚೆನ್ನಾಗಿರುತ್ತದೆ. ಏಕೆಂದರೆ, ಇದರಂತೆ ನಡೆದುಕೊಳ್ಳುವುದು ಬಹಳವೇ ಕಷ್ಟಸಾಧ್ಯ. ಮನುಷ್ಯನಿಗೆ ಏನೆಲ್ಲ ಇದ್ದರೂ ಇವೆಲ್ಲ ಕ್ಷಣಿಕಮಾತ್ರ.

ಮೊನ್ನೆ ದಿನ, ದೀಪಾವಳಿ ಹಬ್ಬದ ಸಂಭ್ರಮ. ಎಲ್ಲೆಲ್ಲೂ ಪಟಾಕಿ ಸದ್ದು, ಬೆಳಕಿನ ಕಿರಣಗಳ ಜಟಾಪಟಿ, ರಾಕೆಟ್‌, ಹೂಕುಂಡಗಳ ಚಟಪಟಿ ಹೀಗೆ ಸಾಗಿತ್ತು. ಆದರೆ, ನಾವು ಸಂಜೆಯ ವಿಹಾರಕ್ಕೆಂದು ಮನೆಯ ಹತ್ತಿರದ ಬಸ್ ನಿಲ್ದಾಣದ/ಅಂಗಡಿಗಳ ಹತ್ತಿರ ನಿಂತಿದ್ದೆವು. ಅಲ್ಲಿಯೇ ಒಬ್ಬಾತ ಹಚ್ಚಿದ ರಾಕೆಟ್‌ ಮೇಲೇನೋ ಹೋಯಿತು. ಆದರೆ ಮರಗಿಡಗಳ ಅಡೆತಡೆಗಳಿಂದಾಗಿ ಅಂಗಡಿಗೆ ನುಗ್ಗಿತು. ಅಂಗಡಿಯಲ್ಲಿದ್ದ ಗ್ರಾಹಕರ ನಡುವೆ ಬಿದ್ದು ಸಿಡಿಯಿತು. ಒಂದಿಬ್ಬರ ಬಟ್ಟೆಗೆ ಕಿಡಿಯು ಹಾರಿ ಬಟ್ಟೆಗಳು ಸುಟ್ಟವು. ನಂತರ ಮತ್ತೊಂದು ರಾಕೆಟ್ ಅದೇ ಮಾದರಿಯಲ್ಲಿ (ದಾರಿಯಲ್ಲಿ) ಹಾಯ್ದುಬಂದು ನಮ್ಮ ಜೊತೆಗೆ ಸ್ಕೂಟರಿನಲ್ಲಿ ಮಾತಾಡುತ್ತಿದ್ದವರ ಗಾಡಿಯ ಕೆಳಗೆ ಸಿಡಿಯಿತು. ಇದರಿಂದ ಅವರ ಬಟ್ಟೆಯೂ ಸಹ ಹಾಳಾಯಿತು. ಆದರೆ ಈ ಎರಡೂ ಘಟನೆಗಳಲ್ಲಿ ಯಾರಿಗೂ ಸುಟ್ಟಗಾಯದ ತೊಂದರೆಯಾಗದಿದ್ದರೂ ಒಟ್ಟಿನಲ್ಲಿ ಅವಘಡವಂತೂ ಆಗಿತ್ತು. ಯಾರೋ ಚಿಕ್ಕಮಕ್ಕಳು ಈ ರೀತಿ ಪಟಾಕಿ ಹಚ್ಚಿದ್ದರೆ ಅದು ಬೇರೆ ವಿಷಯ. ಇದರಿಂದ ಯಾರು ಪಟಾಕಿ ಹಚ್ಚುತ್ತಿದ್ದನೋ ಆತನಿಗೆ ನೋಡಪ್ಪ ಹೀಗಾಯಿತು. ರಾಕೆಟ್ ಬಿಡುವಾಗ (ಮರಗಿಡಗಳಿಲ್ಲದೆ ಕಡೆ ನೋಡಿ ಬಿಡು) ಎಚ್ಚರಿಕೆಯಿಂದ ಹಾರಿಸು ಎಂದು ನಮ್ಮೊಡನಿಂದ ಸಹೋದ್ಯೋಗಿ ಹೇಳಿದರೆ ಇವರ ಮೇಲೆ ಜಗಳಕ್ಕೆ ಬೀಳುವುದೆ? ಅಷ್ಟಕ್ಕೂ ಈ ಮಂದಿಯೆಲ್ಲ ಚಿಕ್ಕವರಿಂದಲೇ ನೋಡಿದ ವ್ಯಕ್ತಿಯೇ ಹೀಗೆ ಹೇಳಿದ್ದಕ್ಕೆ ಹರಿಹಾಯ್ದರೆ ಇನ್ನು ಗೊತ್ತು ಪರಿಚಯವಿಲ್ಲದವರ ಪ್ರಶ್ನೆ ಮಾಡಿದ್ದರೆ ಅವರಿಗೆ ಹೊಡೆದೇ ಬಿಡುತ್ತಿದ್ದರೇನೋ? ಓದಿದ ಮಾತ್ರಕ್ಕೆ ಬುದ್ಧಿ ಬರುವುದಿಲ್ಲ. ಮೊದಲು ನಗರದಲ್ಲಿದ್ದ ಮಾತ್ರಕ್ಕೆ ನಾಗರಿಕನಾಗುವುದಿಲ್ಲ. ಅವರಲ್ಲಿನ ಸಹನೆ, ನಡವಳಿಕೆ ನಾಗರಿಕತೆಯನ್ನು ತೋರಿಸಬಹುದು, ಅಲ್ಲವೇ? ಆದ್ದರಿಂದ ಬೀ ಸಿವಿಲ್ ಟು ಆಲ್...

ಯಾರಿಗೂ ಹೇಳ್ಬೇಡಿ ಅಂತ ಒಂದು ಚಲನಚಿತ್ರ ಬಂದಿತ್ತು. ಅದರಲ್ಲಿನ ನಾಯಕ, ವಠಾರ ಹೆಂಗಳೆಯರಿಗೆಲ್ಲ ಮನೆ ನಿವೇಶನ ಕೊಡಿಸುತ್ತೇನೆ ಎಂದು ನಂಬಿಸಿ, ಅವರಿಂದಲೇ ಹಣ ತೆಗೆದುಕೊಂಡು ತಾನೇ ಒಂದು ನಿವೇಶನ ಖರೀದಿಸಿರುತ್ತಾನೆ. ಆದರೆ, ಆ ನಿವೇಶನ ಆ ವಠಾರದಲ್ಲಿನ ಒಬ್ಬ ಸರ್ಕಾರೀ ನೌಕರನದ್ದೇ ಆಗಿರುತ್ತದೆ. ನಿವೇಶನ ಕೊಳ್ಳುವಾಗ ಸರಿಯಾಗಿ ಗಮನಿಸಿದೇ ಅದೇ ಜಾಗದಲ್ಲಿ ಮನೆಯನ್ನೂ ಕಟ್ಟಿಸುತ್ತಾನೆ. ಆ ಮನೆಯ ಗೃಹಪ್ರವೇಶದ ಸಮಯ ಬಂದಾಗ ನಿವೇಶನ ಮತ್ತು ಮನೆಯ ನಿಜವಾದ ವಾರಸುದಾರ ಯಾರೆಂದು ತಿಳಿಯುತ್ತದೆ. ಕೊನೆಗೆ ನಿಜಾಂಶ ಎಲ್ಲ ತಿಳಿದು ಸಂತಸದಲ್ಲಿ ಚಿತ್ರ ಅಂತ್ಯವಾಗುತ್ತದೆ. ಆದರೆ ಚಿತ್ರದ ಮಾತೆಂದು ಇಟ್ಟುಕೊಳ್ಳಬಹುದು. ಎಲ್ಲರಿಗೂ ಸಮಾಜಸೇವೆ ಮಾಡುವ ಸೋಗಿನಲ್ಲಿ ಕಳ್ಳರು, ವಂಚಕರು ಇದ್ದೇ ಇರುತ್ತಾರೆ. ಎಚ್ಚರಿಕೆ ಅಗತ್ಯ. ಸೋಷಿಯಬಲ್‌ ಟು ಮೆನಿ... ಎಚ್ಚರವಿರದಿದ್ದರೆ... ನೋ ಮನಿ, ನೋ ಹನಿ...

ಕೆಲವಂ ಬಲ್ಲವರಿಂದ ತಿಳಿದು ಎಂಬಂತಿದ್ದರೆ ಒಳ್ಳೆಯದು. ಇಲ್ಲಿ ಯಾವುದೇ ನಕಾರಾತ್ಮಕ ಚಿಂತನೆ ಬೇಡ. ನಮಗೆ ಗೊತ್ತಿರುವದನ್ನೇ ಬಿಂಬಿಸಬಹುದು. ಕೆಲವರಿರುತ್ತಾರೆ.... ತಮಗೆಲ್ಲಾ ಗೊತ್ತು ಎಂಬ ಭಾವನೆಯಿಂದ. ಆದರೆ ಅವರಿಗೇ ಗೊತ್ತಿಲ್ಲದ ಒಂದು ಅಭಾವ ಅವರಲ್ಲಿ ಮನೆ ಮಾಡಿರಬಹುದು. ಇಲ್ಲಿಯೂ ಎಚ್ಚರ ತಪ್ಪಿ ನಡೆದರೆ, ಅಪಮಾನವೆಂಬ ಅಪಘಾತಕ್ಕೆ ಗುರಿಯಾಗಬಹುದು ಅಥವಾ ತಪ್ಪು ತಿದ್ದುಕೊಳ್ಳುವ ಅವಕಾಶವೂ ಸಿಗಬಹುದು...

ಒಬ್ಬರಿಗೆ ಮಾತ್ರ ಮಿತ್ರರಾಗಿರುವುದು ಬಹಳ ಕಷ್ಟ. ಅಜೀವ ಮಿತ್ರರೇ ಬೇರೆ. ಆಗೊಮ್ಮೆ ಈಗೊಮ್ಮೆ ಸಿಗುವ ಬಾಲ್ಯದ ಮಿತ್ರರೇ ಬೇರೆ. ಆತ್ಮೀಯ ಮಿತ್ರರೆಂದು ಒಬ್ಬರಿಗೇ ಸ್ನೇಹವನ್ನು ಕೊಡುವುದು ಬಹಳ ಕಷ್ಟವಾದ ಮಾತು. ದುರ್ಯೋಧನನಿಗೆ ಕರ್ಣನಿದ್ದಂತೆ, ಶ್ರೀಕೃಷ್ಣನಿಗೆ ಸುಧಾಮನಿದ್ದಂತೆ... ನಮ್ಮ ಬಾಳಿನಲ್ಲೂ ಒಬ್ಬ ಆತ್ಮೀಯ ಮಿತ್ರ ಇರುತ್ತಾನೆ. ಆ ಮಿತ್ರತ್ವವನ್ನು ತಿಳಿಯುವುದು ಅಷ್ಟು ಸುಲಭದ ಮಾತಲ್ಲ. ಒಂದಲ್ಲಾ ಒಂದು ವಿಷಯಕ್ಕೆ ಮಿತ್ರತ್ವ ಹೋಗಿ ದ್ವೇಷವೂ ಸುಳಿಯಬಹುದು. (ಇತ್ತೀಚೆಗಿನ ವಿದ್ಯಮಾನದಲ್ಲಿ ಸ್ನೇಹಕ್ಕೆ ಬೆಲೆಯೇ ಇಲ್ಲವಾಗಿದೆ. ಕ್ಷುಲ್ಲಕ ವಿಚಾರಗಳಿಗೆ, ರೇಗಿಸಿದ ಎಂಬ ಕಾರಣಕ್ಕೆ ಕೊಲೆಗಳನ್ನೂ ಮಾಡುವಂತರ ಮಿತ್ರ(???) ಇರುತ್ತಾರೆ, ಪತ್ರಿಕೆಯಲ್ಲಿ ದಿನವೂ ಕಾಣಬಹುದು). ಸ್ನೇಹಕ್ಕೆ ಕಟ್ಟುಬಿದ್ದೋ ಅಥವಾ ಇನ್ಯಾವುದೋ ಕಾರಣಕ್ಕೋ ವೈರಿಯೇ ಆಗುವುದೂ ತರವಲ್ಲ. ಆದರೆ, ನಮ್ಮ ಸ್ನೇಹಿತ/ತೆ ಯಾರಾದರೂ ಸರಿಯೇ ನಿಜವಾದ ಸಾಧನೆಗಳನ್ನು ಮಾಡಿದಾಗ ಅವರನ್ನು ಶ್ಲಾಘಿಸಬೇಕು ಅಥವಾ ಸಂತಸ ತೋರಿಸಬೇಕು. ಅದನ್ನು ಬಿಟ್ಟು ದ್ವೇಷ ತುಂಬಿಕೊಂಡರೆ, ನಾವು ಏನನ್ನು ಸಾಧಿಸಿದಂತಾಗುತ್ತದೆ. ಅದಕ್ಕೆಂದೇ ಯಾರಿಗೂ ವೈರಿಯಾಗಬೇಡ ಎಂಬ ಮಾತನ್ನು ಸದಾ ನೆನಪಿನಲ್ಲಿಟ್ಟರೆ, ನಾವೂ ಏನಾದರೂ ಸಾಧಿಸಬಹುದು. ಅಥವಾ ಮಾನವ ಎಂಬ ಪದಕ್ಕೆ ಸೂಕ್ತ ಉದಾಹರಣೆಯಾಗಬಹುದು.

ಯಾರನ್ನೇ ಆಗಲಿ ಹೀಗೆ ಗುರುತಿಸಬಹುದು: "Fish and visitors smell in three days."- Benjamin Franklin
ಎಂದ ಮೇಲೆ ಎಲ್ಲೇ ಇರಿ, ಹೇಗೇ ಇರಿ, ಸದಾ ಎಚ್ಚರವಿರಿ, ಮನಸು, ಕಣ್ಣು, ಕಿವಿ, ಹೃದಯ ಎಚ್ಚರವಿರಲಿ....

7 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಸ್ವಾನುಭವದಲ್ಲಿ ನೀತಿಯ ಅಡಕ. ಬೆಂಜಮಿನ್ ಫ್ರಾ೦ಕ್ಲಿನ್ ನುಡಿಗಟ್ಟು ನಿಮ್ಮ ಬರಹಕ್ಕೆ ಸರಿ ಹೊ೦ದುತ್ತದೆ. ಉತ್ತಮ ಬರಹ

Dr.D.T.Krishna Murthy. ಹೇಳಿದರು...

ಚಂದ್ರು ಸರ್ ;ಒಳ್ಳೆಯ ಲೇಖನ.ಧನ್ಯವಾದಗಳು.

ಮಹೇಶ ಹೇಳಿದರು...

ತುಂಬಾ ಅರ್ಥಗರ್ಭಿತವಾಗಿದೆ. ಈಗಿನ ಕಾಲಮಾನಕ್ಕೆ ಅತಿ ಅವಶ್ಯವಾಗಿದೆ.

ಸಾಗರದಾಚೆಯ ಇಂಚರ ಹೇಳಿದರು...

ಉತ್ತಮ ಬರಹ ಸರ್
ಮೊದಲ ಸಾಲೆ ಸೆಳೆಯುತ್ತದೆ

ಅನಂತ್ ರಾಜ್ ಹೇಳಿದರು...

ವಿಚಾರಪೂರಿತ ಬರಹ ಚ೦ದ್ರು ಅವರೆ. ಧನ್ಯವಾದಗಳು

ಅನ೦ತ್

ಕ್ಷಣ... ಚಿಂತನೆ... ಹೇಳಿದರು...

ಪ್ರತಿಕ್ರಿಯೆ ಬರೆದು ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡ ನಿಮಗೆಲ್ಲರಿಗೂ ಧನ್ಯವಾದಗಳು.

ಹೀಗೆಯೆ ನಿಮ್ಮ ಪ್ರೋತ್ಸಾಹ ಸಿಗುತ್ತಿರಲಿ.

ಸೀತಾರಾಮ. ಕೆ. / SITARAM.K ಹೇಳಿದರು...

ಚಿಂತನೆಯ ಬರಹ.