ಶುಕ್ರವಾರ, ಜುಲೈ 10, 2009

ದರ್ಶನಾನುಭವ

ಪಾತಾಳಗಂಗೆ, ನಾಮದ ಚಿಲುಮೆಯ ದರ್ಶನಾನುಭವ (೨೦೦೫ ಡಿಸೆಂಬರ‍್)
೨೦೦೫ರಲ್ಲಿ ಶಿವಗಂಗೆ ಬೆಟ್ಟ, ಗೊರವನಹಳ್ಳಿ, ದೇವರಾಯನದುರ್ಗ ಈ ಸ್ಥಳಗಳಿಗೆ ಸುಮಾರು ಹದಿನೈದು ಜನ ಸಹೋದ್ಯೋಗಿಗಳು ಪ್ರವಾಸ ಹೋಗಿದ್ದೆವು. ಶಿವಗಂಗೆ ಬೆಟ್ಟದಲ್ಲಿರುವ ಪಾತಾಳಗಂಗೆಯನ್ನು ನೋಡಲು ಹೋದಾಗ ನಮಗೆ ಅಚ್ಚರಿ ಜೊತೆಗೆ ಬೇಸರವೂ ಆಯಿತು. ಏಕೆಂದರೆ, ಪಾತಾಳಗಂಗೆಯ ತಾಣದ ಬಾಗಿಲಿನಲ್ಲಿ ತಲಾ ಒಂದು ರೂಪಾಯಿ ಕೊಟ್ಟು, ಪ್ರವೇಶ ಚೀಟಿ ಪಡೆದು ದರ್ಶನ ಮಾಡಬೇಕು. ಅಲ್ಲಿನ ವ್ಯವಸ್ಥೆ ಅಷ್ಟಕ್ಕಷ್ಟೆ. ಏಕೆಂದರೆ, ಬೆಳಕಿನ ಪ್ರಕಾಶವಂತೂ ಬೀಳುವುದಿಲ್ಲ ಮತ್ತು ಆ ಜಾಗದಲ್ಲಿ ಒಂದು ರೀತಿಯ ವಾಸನೆಯು ಹರಡಿತ್ತು. ಇದರಿಂದ ವಾಕರಿಕೆ ಬರುವಂತಹ ಅನುಭವವಾಗುತ್ತಿತ್ತು. ಬಹುಶ: ಬಿಸಿಲಿನ ತಾಪ ಕಡಿಮೆಯಿರುವ ಮತ್ತು ಗುಹೆಯಂತಹ ಜಾಗದಲ್ಲಿ ನೀರು ಇರುವುದರಿಂದ ಅಥವಾ ಪಾಚಿಯು ಬೆಳೆದಿರುವದರಿಂದ ವಾಸನೆ ಇರಬಹುದು. ಆದರೆ, ಶುಲ್ಕ ಕೊಟ್ಟೂ ಸಹ ಇಲ್ಲಿ ಕನಿಷ್ಠ ರೀತಿಯ ಶುಚಿಯೂ ಕಾಣದಿರುವುದು ಸ್ವಲ್ಪ ವಿಪರ್ಯಾಸವಾಗುತ್ತದೆ. ಈ ಪಾತಾಳಗಂಗೆಯ ಸ್ಥಳವು ಕತ್ತಲೆಯಿಂದ ಕೂಡಿರುವುದರಿಂದ ಬೆಳಕಿನ ವ್ಯವಸ್ಥೆ ಮತ್ತು ಅಲ್ಲಿನ ಸ್ವಲ್ಪ ಜಾಗವನ್ನಾದರೂ ಶುದ್ಧಗೊಳಿಸಿದರೆ ಪ್ರವಾಸಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬಹುದಲ್ಲವೇ?
Shivagange Trekking_2005

ನಾಮದಚಿಲುಮೆಯಲ್ಲಿನ ಅನುಭವ ಹೀಗಿದೆ: ದೇವರಾಯನದುರ್ಗದ ಹಾದಿಯಲ್ಲಿ ಸಿಗುವ ನಾಮದಚಿಲುಮೆಯ ದರ್ಶನಕ್ಕೆ ಪ್ರತಿಯೊಬ್ಬರಿಗೂ ಮೂರು ರೂಪಾಯಿ ಶುಲ್ಕ. (ಒಮ್ಮೆ ಶ್ರೀರಾಮನು ಇಲ್ಲಿ ಸಂಚರಿಸುತ್ತಿರುವಾಗ ತನ್ನ ಹಣೆಗೆ ನಾಮ/ತಿಲಕವಿಟ್ಟುಕೊಳ್ಳಲು ನೀರನ್ನು ಹುಡುಕಿದನಂತೆ. ಸುತ್ತಲೆಲ್ಲೂ ನೀರು ಸಿಗದಿರಲು, ಅಲ್ಲಿಯೇ ಇದ್ದ ಬಂಡೆಗಲ್ಲಿನ ಜಾಗದಲ್ಲಿ ಬಾಣವನ್ನು ಬಿಟ್ಟಾಗ ಆ ಜಾಗದಲ್ಲಿ ನೀರಿನ ಚಿಲುಮೆಯುಂಟಾಯಿತು, ಅದರಿಂದ ತಿಲಕವನ್ನು ಇಟ್ಟುಕೊಂಡನು ಎಂಬುದಾಗಿ ಸ್ಥಳಪುರಾಣವಿದೆ). ಕರ್ನಾಟಕ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಇಲ್ಲಿ ಪ್ರವೇಶಶುಲ್ಕಕ್ಕೆ ರಸೀತಿ ನೀಡುವ ಪದ್ಧತಿಯಿದ್ದಂತೆ ಕಾಣಲಿಲ್ಲ. ಶುಲ್ಕ ಪಡೆದಿದ್ದಕ್ಕೆ ಪ್ರವೇಶ ಚೀಟಿ ಕೇಳಿದರೂ ಖಾಲಿಯಾಗಿದೆ ಅಥವಾ ಪರವಾಗಿಲ್ಲ ಹೋಗಿಬನ್ನಿ ಎಂಬ ಉತ್ತರವೇ ದೊರಕಿತು. ಇದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ನಮಗೆಲ್ಲ ಸಮಯದ ಅಭಾವವಿದ್ದುದರಿಂದ ನಾಮದ ಚಿಲುಮೆ, ಜಿಂಕೆವನಕ್ಕೆ ಹೋಗಿ ಬಂದಿದ್ದಾಯಿತು. ಇಲ್ಲಿ ಜಿಂಕೆವನವು ಇದೆಯಾದರೂ ಜಿಂಕೆಗಳ ಸಂಖ್ಯೆ ಅತಿ ವಿರಳ ಎನ್ನಿಸಿತು. ನಮಗೆ ಕಾಣಿಸಿದ್ದು ಒಂದೆರಡು ಮಾತ್ರ ಮತ್ತು ಕೋತಿಗಳು ಹೆಚ್ಚಾಗಿ ಕಂಡುಬಂದವು. ಸುಮಾರು ೪೫ ರೂಪಾಯಿಗೆ ಪ್ರವೇಶಶುಲ್ಕದ ಪ್ರವೇಶ ಶುಲ್ಕ ಕೊಟ್ಟೂ ಚೀಟಿಯಿಲ್ಲವೆಂದಾದರೆ, ಇದೇ ರೀತಿಯಲ್ಲಿ ಪ್ರತಿದಿನ ಒಂದೆರಡು ಬಾರಿ ಇದೇ ಉತ್ತರ ಸಿಕ್ಕಿದರೆ (ಉದಾಹರಣೆಗೆ: ಸುಮಾರಾಗಿ ೧೦-೧೫ ಜನ ಪ್ರವಾಸಿಗಳಿದ್ದು ಒಂದೆರಡು ತಂಡಕ್ಕೆ ಈ ರೀತಿ ಅನುಭವವಾದರೆ...), ಅರಣ್ಯ ಇಲಾಖೆಗೆ ಆಗುವ ನಷ್ಟದ ಲೆಕ್ಕ ಸಿಗುವುದೇ? ಹಾಗಾದಲ್ಲಿ, ಕರ್ನಾಟಕ ಪ್ರವಾಸೋದ್ಯಮದ ಅಥವಾ ಅರಣ್ಯ ಇಲಾಖೆಯ ಬಗ್ಗೆ ಜನರ ಮನಸ್ಸಿನಲ್ಲಿ ಎಂತಹ ಭಾವನೆ ಮೂಡಬಹುದು ಎಂದೆಲ್ಲ ವಿಚಾರ ಮಾಡಬೇಕಾಗಿದೆಯಲ್ಲವೆ? (ಇದೇ ಕಾರಣವಾಗಿ ಅದೇ ಹಣಕ್ಕೆ ನಾವೆಲ್ಲ ಕಾಫಿ/ಟೀ ಕುಡಿಯಬಹುದಿತ್ತು ಎಂದು ಕೆಲವರ ಆಶಯವಾಗಿತ್ತು).

ಇವೆಲ್ಲ ಕಳೆದ ವರ್ಷಗಳಲ್ಲಿ ಆದ ಅನುಭವ. ಮತ್ತೆ ಈ ಸ್ಥಳಗಳಿಗೆ ಹೋಗುವ ಅವಕಾಶವಾಗಿಲ್ಲ. ಈಗ ಹೇಗಿದೆಯೋ ತಿಳಿದಿಲ್ಲ. ನಿಮ್ಮಲ್ಲಿ ಯಾರಿಗಾದೂ ಇಂತಹ ವಿಚಾರವಿದ್ದರೆ, ಅನುಭವಕ್ಕೆ ಒದಗಿದ್ದರೆ ತಿಳಿಸಿರಿ.

2 ಕಾಮೆಂಟ್‌ಗಳು:

shivu.k ಹೇಳಿದರು...

sir,

shivagange, namada chelume, pravasa lekana chennagide...nanu namada chilumeyalli thegeda ondu chithra prajavani visheshankada compititionige kalisidhene...
thanks..

ಕ್ಷಣ... ಚಿಂತನೆ... ಹೇಳಿದರು...

Shivu sir, nimma pratikriyege dhanyavaadagaLu.

spardheyalli vijetavaagali endu aashishuttEne.