ಮಂಗಳವಾರ, ಸೆಪ್ಟೆಂಬರ್ 4, 2012

ಭೇಟಿಯ ಅವಕಾಶ ಕೈತಪ್ಪಿತ್ತು... ಸೆಪ್ಟಂಬರ್‍ ೫ ಕ್ಕೆ ಒಂದು ನೆನಪು


"Those who educate children well are more to be honored than they who produce them; for these only gave them life, those art of living well." ? -- Aristotle

ಸೆಪ್ಟಂಬರ್‍ ೫ ಎಂದ ಕೂಡಲೇ ನೆನಪಾಗುವುದು ಶಿಕ್ಷಕರ ದಿನಾಚರಣೆ.  ಹಾಗೆಯೇ ಈ ದಿನವನ್ನು ಭಾರತದ ಶ್ರೇಷ್ಠ ಶಿಕ್ಷಕ, ಶಿಕ್ಷಣತಜ್ಞ ಹಾಗೂ ಸ್ವತಂತ್ರ ಭಾರತದ ೨ನೇ ರಾಷ್ಟ್ರಪತಿಯಾಗಿ (೧೯೬೨-೧೯೬೬) ಸೇವೆ ಸಲ್ಲಿಸಿದ ಮಹಾನ್‌ ವ್ಯಕ್ತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನ (ಸೆಪ್ಟೆಂಬರ್‍ ೫, ೧೮೮೮ ರಿಂದ ಏಪ್ರಿಲ್ ೧೭, ೧೯೭೫).

ಸೆಪ್ಟೆಂಬರ್‌ ೫, ಅವರ ಹುಟ್ಟುಹಬ್ಬವನ್ನು ಇವರ ವಿದ್ಯಾರ್ಥಿಗಳು ಹಾಗೂ ಬಂಧು-ಮಿತ್ರರು ಆಚರಿಸಬೇಕೆಂದಾಗ, ಅವರಿಗೆ ಶಿಕ್ಷಕ ವೃತ್ತಿ ಮತ್ತು ಶಿಕ್ಷಣದ ಬಗ್ಗೆ ಅಪಾರ ಗೌರವವಿದ್ದ ಕಾರಣ `ಶಿಕ್ಷಕರ ದಿನಾಚರಣೆ' ಯಾಗಿ ಆಚರಿಸಲು ತಿಳಿಸಿದರಂತೆ. ಅಂದಿನಿಂದ ಇಂದಿನಿವರೆವಿಗೂ `ಶಿಕ್ಷಕರ ದಿನ'ವನ್ನಾಗಿ ಆಚರಿಸಲಾಗುತ್ತಿದೆ.

ಇಂತಹ ಸಮಯದಲ್ಲಿ ಹಾಗೂ ಪ್ರತಿದಿನವೂ ಗುರುವನ್ನು ನೆನಯಬೇಕಾದುದು ವಿದ್ಯಾರ್ಥಿಗಳ ಕರ್ತವ್ಯ.  ಶಿಕ್ಷಕ-ಕಿ ಇವರುಗಳಿಂದ ನಮಗೆ ಜಗದ ಅರಿವು, ಅಕ್ಷರಜ್ಞಾನ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ನಮಗೆ ತಮ್ಮ ಜ್ಞಾನವನ್ನು ನೀಡುತ್ತಾ, ನಮ್ಮನ್ನು ತಿದ್ದಿತೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸುವ ಶಿಕ್ಷಕವೃತ್ತಿಯಲ್ಲಿರುವ ಎಲ್ಲ ಶಿಕ್ಷಕ-ಶಿಕ್ಷಕಿಯರಿಗೆ ನಮ್ಮ ಗೌರವ, ನೆನಪಿನ ಕಾಣಿಕೆಗಳಿರಲಿ. ಅವರ ಹಾರೈಕೆಗಳು ನಮಗೆ ಶ್ರೀರಕ್ಷೆ...

ಕಳೆದವಾರ ನಮಗೆ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿಯನ್ನು ಭೇಟಿ ಮಾಡುವ ಅವಕಾಶದಿಂದ ವಂಚಿತನಾದೆ. ನಾನು ಬಸ್ಸಿನಿಂದ ಇಳಿದು ನಮ್ಮ ಮನೆ ಕಡೆಗೆ ಹೋಗುವ ಬೇರೆ ಬಸ್ಸಿಗೆ ಹತ್ತುವ ಸಂದರ್ಭದಲ್ಲಿ ಟೀಚರನ್ನು ನೋಡಿದೆ.  ಜನಜಂಗುಳಿಯಲ್ಲಿ ಅವರನ್ನು ಕಂಡು ಖುಷಿಯಾಯಿತು.  ಆಗ, ಅವರು ರಸ್ತೆ ದಾಟುತ್ತಿದ್ದರು. ಸರಿ, ನಾನಿದ್ದ ಕಡೆಗೆ ರಸ್ತೆ ದಾಟುತ್ತಿದ್ದರಿಂದ ನಾನೂ ಕಾದೆ. ಆದರೆ, ಅಷ್ಟರಲ್ಲಿಯೇ ನಾನು ಇಳಿದ ಬಸ್ಸಿಗೇ ಅವರು ಹತ್ತಿ, ಕ್ಷಣಮಾತ್ರದಲ್ಲಿ ಭೇಟಿಯ ಅವಕಾಶ ಕೈತಪ್ಪಿತ್ತು.

ಅವರನ್ನು ಭೇಟಿ ಮಾಡುತ್ತೇನೆ ಎಂಬ ನಂಬಿಕೆ ನನಗಿದೆ. ಇತ್ತೀಚೆಗೆ ಶಾಲೆಯ ಕಡೆಗೆ ಹೋಗಿಲ್ಲವಾದರೂ, ಕೆಲವೇ ಕೆಲವು ಶಿಕ್ಷಕಿಯರು ಇನ್ನೂ ಬೋಧನಾವೃತ್ತಿಯಲ್ಲಿದ್ದಾರೆಂದು ತಿಳಿಯಿತು.  ಇಲ್ಲಿ ಶಿಕ್ಷಕಿಯರು ಎಂದು ಏಕೆಂದರೆ, ನಮ್ಮ ಶಾಲೆಯಲ್ಲಿ ಶಿಕ್ಷಕರು ತುಂಬಾ ಕಡಿಮೆ ಇದ್ದರು. ಪಿಟಿ ಮೇಷ್ಟ್ರು, ಹೈಸ್ಕೂಲಿನಲ್ಲಿ ಮೂವರು ಶಿಕ್ಷಕರು ಮಾತ್ರ ಇದ್ದ ನೆನಪು...

ಇದೋ ಶಿಕ್ಷಕ ವೃಂದಕ್ಕೆ ನನ್ನ ನಮನಗಳು.


ಚಂದ್ರಶೇಖರ ಬಿ.ಎಚ್.


ಇದನ್ನೂ ಓದಿ: http://www.iloveindia.com/indian-heroes/sarvepalli-radhakrishnan.html

ಕಾಮೆಂಟ್‌ಗಳಿಲ್ಲ: