ಮಂಗಳವಾರ, ಏಪ್ರಿಲ್ 21, 2009

ಒಂದು ಮೆಸೇಜ್ ರೆಸೀವ್ಡ್ : ಮೊಬೈಲು ಕಳ್ಳರಿದ್ದಾರೆ, ಎಚ್ಚರಿಕೆ!!


ದಿನಾಂಕ: ಫೆಬ್ರವರಿ ೦೫, ೨೦೦೮
ತಿರುಪತಿಗೆ ಹೋಗಿದ್ದಾಗ ನಡೆದ ಒಂದು ವಾಸ್ತವ ಘಟನೆ. ದೇವರ ದಶ೯ನ ಮುಗಿಸಿಕೊಂಡು ನಮ್ಮ ಲಗೇಜುಗಳನ್ನು ತೆಗೆದುಕೊಳ್ಳುವ ಸಲುವಾಗಿ ಯಾತ್ರಿಕರ ಅನುಕೂಲಕ್ಕಾಗಿ ಕಟ್ಟಿರುವ ಲಾಕರು ಕಾಟೇಜಿಗೆ ಬಂದೆವು. ಸೋದರ ಸಂಬಂಧಿಯೊಬ್ಬನು ತನ್ನ ಮೊಬೈಲು ಚಾಜ್೯ ಮಾಡಲು ಅಲ್ಲಿಯೇ ಇದ್ದ ಪ್ಲಗ್ಗಿಗೆ ಹಾಕಿದ್ದೇನೆಂದು ಎಲ್ಲರಿಗೂ ತಿಳಿಸಿದ್ದನು. ಆದರೆ, ನಮ್ಮೊಡನಿದ್ದ ಮಗುವೊಂದು ಬಾಗಿಲಿನಾಚೆಗೆ ಹೋಯಿತು. ಜೊತೆಗೆ ಮನೆಯವರೆಲ್ಲರೂ ಲಗೇಜುಗಳನ್ನು ಜೋಡಿಸುವಲ್ಲಿ ನಿರತರಾಗಿದ್ದರು. ಮೊಬೈಲು ಕಡೆಗೆ ಒಂದು ಕಣ್ಣು ಇಟ್ಟೇ ಇದ್ದರೂ, ಕೆಲವೇ ನಿಮಿಷಗಳಲ್ಲಿ ಅಲ್ಲಿದ್ದ ಮೊಬೈಲು ಮತ್ತು ಚಾಜ್೯ರು ಕಾಣೆಯಾಗಿತ್ತು. ಅದೇ ಜಾಗದಲ್ಲಿ ಮತ್ತೊಬ್ಬ ವ್ಯಕ್ತಿ ಎರಡು ಮೊಬೈಲು ಹಿಡಿದಿದ್ದನು. ಆತನನ್ನು ಕೇಳಿದ್ದಕ್ಕೆ ಗೊತ್ತಿಲ್ಲ ಎಂದನು ಮತ್ತು ಅಲ್ಲಿಯೇ ಬರುತ್ತಿದ್ದವರೊಬ್ಬರು `ಪೋಲೀಸ್' ತೆಗೆದುಕೊಂಡು ಹೋದರು ಎಂದು ತಿಳಿಸಿದರು. ತಕ್ಷಣವೇ ಬೇರೊಂದು ಮೊಬೈಲಿನಿಂದ ಕರೆ ಮಾಡಿದರೆ ಮಾತಾಡಿ ಫೋನ್ ಆಫ್ ಮಾಡಿದನು. ಪೋಲಿಸನನ್ನು ಕಾಣದೇ ವಿಚಾರಣಾ ಕೊಠಡಿಗೆ ಓಡಿದೆವು. ಮತ್ತೊಮ್ಮೆ ಫೋನ್ ರಿಂಗ್ ಆಗಿದ್ದು ಕೇಳಿಸಿತು ಮತ್ತು ಅಲ್ಲಿಯೇ ಇದ್ದ ಆ ಪೋಲೀಸ್ ಮೊಬೈಲು ಕೊಡುವುದಿಲ್ಲ. ನಮ್ಮ ಆಫೀಸರ್‍ಗೆ ಹೇಳಿದೀನಿ, ಕೇಸು ಆಗುತ್ತೆ ಎಂದು (ಎಲ್ಲಾ ತೆಲುಗು ಭಾಷೆಯಲ್ಲಿ) ಎಂದು ತಿಳಿಸಿದ ಮತ್ತು ನಾವೆಷ್ಟೇ ಕೇಳಿದರೂ ಮೊಬೈಲು ಯಾರದೋ ಅವರೊಬ್ಬರೇ ಬರಲಿ ಎನ್ನಲು ಶುರುವಿಟ್ಟು ಅಲ್ಲಿಯೇ ಇದ್ದ ಕಛೇರಿ ಕಡೆಗೆ ಹೊರಟ. ನಾವು ಬಿಡದೆ ಹಿಂಬಾಲಿಸಿದೆವು. ಅದೇ ಸಮಯಕ್ಕೆ ಇಬ್ಬರು ಸಬ್‍ಇನ್ಸ್ಪೆಕ್ಟರುಗಳು ಹೊರಹೋಗುತ್ತಿರುವುದು ಕಂಡು ಅವರಿಗೇ ಕರೆದೆವು. ನಂತರ ಅವರಿಬ್ಬರಿಗೂ ನಡೆದ ವಿಚಾರ ತಿಳಿಸಿದೆವು. ಆ ಪೋಲೀಸು ಇವರು ಇಪ್ಪತ್ತು ಮಂದಿ ಜಗಳಕ್ಕೆ ಬಂದಿದ್ದಾರೆ ಎಂದು ಆಫೀಸರಿಗೆ ತಿಳಿಸಿದ. ಅದಕ್ಕೆ ನಾವು ನಮಗೆ ಕನ್ನಡದಲ್ಲಿ ಮಾತಾಡುತ್ತೇವೆ ಎಂದು, ಬೇರೆ ಏನೇನೋ ಕಾರಣ ಹೇಳಿ ಮೊಬೈಲು ಕೊಡುತ್ತಿಲ್ಲ ಎಂದು ತಿಳಿಸಿದೆವು. ಕಡೆಗೆ ಬೇರಾವುದೇ ತೊಂದರೆಯಿಲ್ಲದಂತೆ ಮರಳಿ ಮೊಬೈಲು ಸಿಕ್ಕಿದ್ದಕ್ಕೆ ಅಲ್ಲಿದ್ದ ಕಸಗುಡಿಸುವವರು ಮತ್ತು ಇತರೆ ಕೆಲಸಗಾರರು ನಿಮ್ಮ ಅದೃಷ್ಟ. ಇಲ್ಲದಿದ್ದರೆ ೫೦೦-೬೦೦ ರೂ. ಕೊಟ್ಟು ಬಿಡಿಸಿಕೊಳ್ಳಬೇಕಿತ್ತು. ಇಲ್ಲವಾದರೆ, `ಅವರೇ' ಸಿಮ್‍ ತೆಗೆದು ನಿಮ್ಮ ಮೊಬೈಲನ್ನು ನಿಮಗೇ ಮಾರುತ್ತಿದ್ದರು ಎಂದು ತಿಳಿಸಿದರು. ಇನ್ನಿಬ್ಬರು ಯಾತ್ರಿಕರಿಗೂ ಇದೇ ಅನುಭವವಾಗಿ ಕೊನೆಗೆ ತಲಾ ರೂ. ೫೦೦ ಆ ಪೋಲೀಸಿಗೆ ಕೊಟ್ಟು ವಾಪಾಸು ತೆಗೆದುಕೊಂಡೆವೆಂದು ತಿಳಿಸಿದರು. ತಿರುಪತಿಯಲ್ಲಿ ಇದೇ ಒಂದು ದಂಧೆಯಾಗಿರುವಂತೆ ಕಾಟೇಜು ಹಾಲುಗಳಲ್ಲಿ ಕೆಲಸ ಮಾಡುವವರ ಮಾತಿನಲ್ಲಿ ವ್ಯಕ್ತವಾಗಿದ್ದನ್ನು ಕಾಣಬಹುದಾಗಿತ್ತು. ನಿಮ್ಮ ಮೊಬೈಲಿಗೆ ನೀವೆ ಹಣ ಕೊಡುವಂತೆ ಆಗದಿರಲು ಎಚ್ಚರಿಕೆ ವಹಿಸಿ ಎಂಬ ಪಾಠವೂ ಕಲಿತಂತೆ ಆಯಿತು. ತಿರುಪತಿಗೆ ಹೋದರೆ ಮೊಬೈಲು ಒಯ್ಯದಿರಿ ಅಥವಾ ಲಾಕರುಗಳಿಗೆ ಬೀಗ ಹಾಕಿದ್ದರೂ ನಿಮ್ಮ ಮೊಬೈಲು ಚಾಚ್೯ಗೆ ಹಾಕಿದ್ದರೆ ಮೊಬೈಲು ಜೊತೆಯಲ್ಲಿಯೇ ಕುಳಿತಿರಿ. ಇಲ್ಲವಾದರೆ `ತಿರುಪತಿ' ಯಲ್ಲಿ ಮೋಸ ಹೋದೀರಿ!
ಫೋಟೋ: ಚಂದ್ರಶೇಖರ ಬಿ.ಎಚ್.

5 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ತಿಳಿಸಿದ್ದಕ್ಕೆ ಧನ್ಯವಾದಗಳು, ಹೀಗೂ ಸುಲಿಗೆ ಮಾಡಲು ಸಾದ್ಯವೇ? ದೇಶ ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ,

ಕ್ಷಣ... ಚಿಂತನೆ... ಹೇಳಿದರು...

ಹೌದು, ಸರ್‍. ಇದು ನಮಗಾದ ಸ್ವಂತ ಅನುಭವ. ಅದನ್ನೇ ಇಲ್ಲಿ ಬರೆದಿದ್ದೆ. ನಾನೂ ಸಹ ಆ ನಿಟ್ಟಿನಲ್ಲಿ ಆಗಾಗ ಯೋಚಿಸುತ್ತಿರುತ್ತೇನೆ. ಆದರೆ, ಏನು ಮಾಡಲು ಸಾಧ್ಯ?

ekanasu ಹೇಳಿದರು...

ನಿಮ್ಮ ಚಿಂತನೆ ಚೆನ್ನಾಗಿದೆ. ನೀವು ಯಾಕೆ ಇಂತಹ ಚಿಂತನೆಗಳನ್ನು ಈ ಕನಸಿಗೂ ಬರೆಯಬಾರದು. ಈ ಕನಸು ಮುಕ್ತ ವೇದಿಕೆ
ಈ ಕನಸು ತಂಡ
www.ekanasu.com

ಕ್ಷಣ... ಚಿಂತನೆ... ಹೇಳಿದರು...

ಇ-ಕನಸು ತಂಡದವರಿಗೆ ಅಭಿನಂದನೆಗಳು.
ಇ-ಕನಸಿನೊಡನೆ ನನ್ನ ಚಿಂತನೆಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸಿದ್ದೀರಿ. ಸಮಯದ ಹೊಂದಾಣಿಕೆಯೊಂದಿಗೆ ಪ್ರಯತ್ನಿಸುತ್ತೇನೆ. ಧನ್ಯವಾದಗಳು.

shivu.k ಹೇಳಿದರು...

ಸರ್,

ಇದು ನಿಜಕ್ಕೂ ಸುಲಿಗೆಯೇ ಸರಿ....ದೇವರ ಸನ್ನಿದಾನದಲ್ಲೂ ಹೀಗೇನಾ...

ತಿರುಪತಿ ತಿಮ್ಮಪ್ಪನೇ ಕಾಪಾಡಬೇಕು...

ಧನ್ಯವಾದಗಳು....