ಶುಕ್ರವಾರ, ನವೆಂಬರ್ 13, 2009

ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

೨೦೦೯ ನವೆಂಬರ್‍ ಒಂದರಂದು ತಿರುಮಲ ತಿರುಪತಿಯ ದರ್ಶನಕ್ಕೆ ಹೋಗಿದ್ದಾಗಿನ ಒಂದೆರಡು ಘಟನೆಗಳಿವು

ಘಟನೆ ೧: ಬೆಟ್ಟಕ್ಕೆ ನಡೆದು ಹೋಗುತ್ತಿರುವಾಗ, ಅಲ್ಲಿ ಒಬ್ಬ ಯಾವ ಊರಿನವರು ಎಂದು ಬರುವವರ ಹೋಗುವವರ ಕೇಳುತ್ತಿದ್ದ. ಹೀಗಿರುವಾಗ, ನನಗೂ ಕೇಳಿದ. ಕನ್ನಡ, ಕರ್ನಾಟಕ ಎಂದಾಗ. ನನಗೂ ಕನ್ನಡ ಬರುತ್ತೆ ಎಂದ. ಅವನ ಜೊತೆಯಲ್ಲಿ ಪತ್ನಿ, ಮಗು (???) ಇದ್ದರು. ಮಗು ನಿದ್ದೆ ಮಾಡುತ್ತಿತ್ತು. ನನಗೆ ಸ್ವಲ್ಪ ಸಹಾಯ ಮಾಡುವಿರಾ ಎಂದು ಆತನ ಪ್ರಶ್ನೆ. ಏನು? ಎಂದೆ.

ಸುಮಾರು ೩೦೦೦ ಸಾವಿರ ಪಿಕ್‌ಪಾಕೆಟ್ ಆಯಿತು. ತಿಂಡಿಗೆ ಕಾಸು ಕೊಡಿ ಎಂದ. ನಾನು ಮುಂದಕ್ಕೆ ಹೊರಟೆ.

ಘಟನೆ ೨: ಮೊದಲಿನ ಘಟನೆಯಂತೆಯೇ ಇದೂ ಸಹ. ತಿರುಮಲದ ಪ್ರವೇಶಿಸುವಾಗ ಅಲ್ಲಿಯೂ ಸಹ ಒಬ್ಬ ಹೀಗೆಯೇ. ಆದರೆ ಇಲ್ಲಿ ೨-೩ ವರ್ಷದ ಮಗುವಿತ್ತು. ಅವನೂ ಸಹ, ಮೊದಲಿನವನಂತೆಯೆ ಬರುವ-ಹೋಗುವವರನ್ನು ಪ್ರಶ್ನಿಸುತ್ತಿದ್ದ. ಅವನ ಮಾತಿಗೆ ಉತ್ತರಿಸಿದವರಿಗೆ `ಅದೇ' ಇಂತಿಷ್ಟು ಹಣ ಕಳವಾಯಿತು. ತಿಂಡಿಗೆ .... ಎನ್ನುತ್ತಿದ್ದ.

ಇವರಲ್ಲಿ ಯಾರನ್ನು ನಂಬುವುದು? ಮೊದಲನೆಯವನಿಗೆ ಯಾರಾದರೂ ಕನಿಕರಿಸಿ ಹಣ ನೀಡಿದ್ದರೆ, ಎರಡನೆಯವನ ಸ್ಥಿತಿಯನ್ನೂ ಅಂತಹವರು ನೋಡಿದಾಗ ಅವರ ಮನಸ್ಸಿನಲ್ಲಿ ಏನೆನ್ನಿಸಬಹುದು? ಇದೂ ಸಹ ಒಂದು ದಂಧೆಯೇ ಇರಬೇಕಲ್ಲವೇ? ಏಕೆಂದರೆ, ಎರಡೂ ಕಡೆ ಪುಟ್ಟ ಮಕ್ಕಳು, ಒಂದು ಸೂಟ್‌ಕೇಸು, ಭಾಷೆಯ ಬಗೆಗಿನ ಪ್ರಶ್ನೆ, ಅವನಿಂದ ನನಗೂ ಕನ್ನಡ, ಹಿಂದಿ, ತಮಿಳು ಬರುತ್ತೆ.. ಸಹಾಯ ಮಾಡಿ... ಏನಿದೆಲ್ಲ, ಅನಿಸುತ್ತದೆ.

ನಾನೂ ನನ್ನ ಸ್ನೇಹಿತ ೭-೮ ವರ್ಷಗಳ ಹಿಂದೆ ಇಲ್ಲಿಗೆ ಹೋಗಿದ್ದಾಗಲೂ ಸಹ ಇದೇ ರೀತಿಯಲ್ಲಿ ಒಂದು ಸಂಭವಿಸಿತ್ತು. ಅದೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಹಿಂದಿರುಗುವಾಗ, ದೇವಾಲಯದ ಬಳಿ ದಂಪತಿ-ಮಗಳು (??) ಈ ಮೇಲಿನಂತೆಯೇ ನಡೆದಿತ್ತು. ಆಗ, ೩೦೦ ರೂ ಕಳವಾಗಿದೆ, ಇದೀಗ ೩೦೦೦ ಕಳವಾಗಿದೆ...

ಇದೊಂದು ರೀತಿಯ ಆಧುನಿಕ ದಿರುಸಿನ ಯಾಚನೆಯಿರಬಹುದೇ? ಅಥವಾ ಜನಮರುಳೋ, ಜಾತ್ರೆಮರುಳೋ ಎಂಬಲ್ಲಿ ಇಂತಹ ಬಿಜಿನೆಸ್‌ ನಡೆಯುತ್ತಿರುತ್ತದೆಯೆ? ಅಲ್ಲದೇ, ಇಂತಹವುಗಳಿಂದ ಅದೆಷ್ಟು ಜನ ಮೋಸ ಹೋಗಿರಬಹುದು! ಹೋಗುತ್ತಿರಬಹುದು??? ಎನಿಸಿದರೆ ಅಚ್ಚರಿಯಿಲ್ಲ.... ಅಂತಹವರನ್ನು ಆ `ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

9 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ನಿಜಾ ಸರ್,
ಆದರೆ ಇದರಿಂದ ನಿಜವಾಗಿಯೂ ಹಣ ಕಳೆದುಕೊಂಡವರಿಗೆ ಅನ್ಯಾಯವಾಗುತ್ತದೆ ಅಲ್ಲವೇ
ಮನುಷ್ಯ ನ ಸ್ವಭಾವ ಹೇಗೆ ಬದಲಾಗುತ್ತದೆಯೋ ಯಾರು ಬಲ್ಲರು

PARAANJAPE K.N. ಹೇಳಿದರು...

ಹೌದು, ನಿವಂದಿದ್ದು ನಿಜ. ಇಂತಹ ಕೆಲವರಿಂದ, ನಿಜವಾಗಿಯು ತೊ೦ದ್ರೆಗೆ ಒಳಗಾದ ಅರ್ಹ ರಿಗೆ ಸಿಗಬೇಕಾದ ನೆರವು ಸಿಗುವುದಿಲ್ಲ, ಇಂದು ನಾವು ನೆರವು ಕೇಳುತ್ತಾ ಹೋದರೆ ಜನ ಅನುಮಾನದಿಂದ ನೋಡುವಂತಾಗಿದೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎ೦ದು ತೀರ್ಮಾನಿಸುವುದು ಆಗದ ಸ್ಥಿತಿ ಇದೆ.

shivu.k ಹೇಳಿದರು...

ಕ್ಷಣಚಿಂತನೆ ಸರ್,

ಇದೊಂದು ದಂದೆಯೇ ಸರಿ. ನಾವು ಅವರನ್ನು ನಿರ್ಲಕ್ಷಿಸಬೇಕು. ಆದ್ರೆ ಒಂದು ದಿನ ನಿಜವಾಗಿ ಹಣ ಕಳೆದುಕೊಂಡವರು ಹೀಗೆ ಬೇಡಿದಾಗ ಅವರನ್ನು ನಾವು ನಂಬುತ್ತೇವಾ?

AntharangadaMaathugalu ಹೇಳಿದರು...

ಚಂದ್ರು ಅವರೇ...
ನೀವು ಹೇಳಿದ್ದು ಸತ್ಯ. ನಿಜವಾಗಿ ತೊಂದರೆಗೊಳಗಾದವರಿಗೆ ಸಹಾಯ ಮಾಡಲು ಹಿಂಜರಿಯುವಂತಾಗುತ್ತದೆ, ಈ ತರಹದ ಜನರಿಂದ. ಉದರ ನಿಮಿತ್ತಂ ಬಹುಕೃತ ಯಾಚನಂ ಆಗಿಹೋಗಿದೆ.
ಶ್ಯಾಮಲ

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ಗುರು, ಶಿವು ಮತ್ತು ಶ್ಯಾಮಲಾ ಅವರೆ, ಇದು ನಿಜಕ್ಕೂ ನಡೆದ ಹಾಗೂ ನಡೆಯುತ್ತಿರುವ ವಿಚಾರ. ಅಲ್ಲದೇ ನಿಜವಾಗಿಯೂ ಹಣ ಕಳಕೊಂಡವರನ್ನು ಇಲ್ಲಿ (ಈ ಸಂತೆಯಲ್ಲಿ) ಗುರುತಿಸುವುದೂ ಕಷ್ಟವೇ ಹೌದು. ಆದರೆ, ಈ ಮೂರೂ ಪ್ರಸಂಗಗಳಲ್ಲಿ, ದಂಪತಿ ಮತ್ತು ಒಂದು ಮಗು ಮಾತ್ರ + ಒಂದು ಸೂಟ್ಕೇಸ್‌ ಮಾತ್ರ ಇದ್ದದ್ದು ಗಮನಿಸಿದ್ದರಿಂದ ಈ ಘಟನೆಯ ಮೆಲಕು ಬರೆದೆನು.

ನಿಮ್ಮೆಲ್ಲರ ಅನಿಸಿಕಗೆಗಳಿಗೆ ಧನ್ಯವಾದಗಳು.

ಸ್ನೇಹದಿಂದ,
ಚಂದ್ರು

ಶಿವಪ್ರಕಾಶ್ ಹೇಳಿದರು...

ಸರ್,
ಒಂದು ವೇಳೆ ನಿಮ್ಮ ಹತ್ತಿರ ಸಮಯವಿದ್ದರೆ ಅವರನ್ನು ಬಸ್ಸ ಹತ್ತಿಸಿ, ನೀವೇ ಟಿಕೆಟ್ ಕೊಡಿಸಿ, ನಿಮ್ಮ ಕೈಲಾದ ಸಹಾಯ ಮಾಡಬೇಕು...
ಕೆಲವರು ಮಾಡುವ ತಪ್ಪಿಂದ ನಿಜವಾಗಿ ಕಸ್ಟದಲ್ಲಿರುವವರು ತೊಂದೆರೆ ಅನುಭವಿಸುತ್ತಾರೆ....!!!!

ಕ್ಷಣ... ಚಿಂತನೆ... ಹೇಳಿದರು...

ಶಿವ ಪ್ರಕಾಶ್ ಅವರೆ, ಆದರೆ ನೀವು ಹೇಳಿದಂತೆ ಮಾಡಲು ಅದು ೧೦-೨೦ ರೂ.ಗಳ ಮಿತಿಯಲ್ಲವಲ್ಲ? ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಚುಕ್ಕಿಚಿತ್ತಾರ ಹೇಳಿದರು...

ಅವರ ಅಜಾಗರೂಕತೆಗೆ ಅವರೇ ಜವಾಬ್ದಾರರು.
ಅವರು ದಾರಿಯಲ್ಲಿ ಸಿಗುವ ಭಕ್ತಾದಿಗಳನ್ನೇ ಕೇಳುತ್ತಾರೆ ಹೊರತೂ ...ಹತ್ತಿರದಲ್ಲಿರುವ ಪೋಲೀಸ್ ಠಾಣೆಗೋ, ಮತ್ತೆಲ್ಲಿಗೋ ಹೋಗಿ ಸಹಾಯ ಕೇಳುವುದಿಲ್ಲ ನೋಡಿ....! ಸೆ೦ಟಿಮೆ೦ಟಲ್ ಬ್ಲಾಕ್ ಮೇಲ್ ಮಾಡುತ್ತಾರೆ.....!!!!

ಕ್ಷಣ... ಚಿಂತನೆ... ಹೇಳಿದರು...

ಚುಕ್ಕಿ ಚಿತ್ತಾರ ಅವರಿಗೆ, ಸ್ವಾಗತ.

ಹೌದು. ನೀವು ಹೇಳಿದಂತೆ ಇವರು ಪೋಲಿಸ್‌ ಠಾಣೆಗೆ ದೂರು ನೀಡಬಹುದಲ್ಲ? ಈ ಒಂದು ಯೋಚನೆ ನನಗೆ ಬರಲೇ ಇಲ್ಲ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.